ಕಾಂಗ್ರೆಸ್ ಸೇರುವ ವಿಚಾರ; ಮೌನ ಮುರಿದ ಶರತ್ ಬಚ್ಚೇಗೌಡ!
ಬೆಂಗಳೂರು, ಜೂನ್ 07 : ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಮೂರು ದಿನದ ಹಿಂದೆ ಹಬ್ಬಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿತ್ತು. ಶಾಸಕರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಹೊಸಕೋಟೆ ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಕಣಕ್ಕಿಳಿದಿದ್ದರು. ಎಂಟಿಬಿ ನಾಗರಾಜ್ಗೆ ಸೋಲಿಸಿ ಮೊದಲ ಬಾರಿ ವಿಧಾನಸಭೆಗೆ ಪ್ರವೇಶ ಮಾಡಿದ್ದರು.
ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಶೀಘ್ರದಲ್ಲಿಯೇ ಶರತ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಈ ಎಲ್ಲಾ ಸುದ್ದಿಗಳಿಗೆ ಶಾಸಕರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
"ಮತದಾರರ ಹಾಗೂ ಕಾರ್ಯಕರ್ತರ ತೀರ್ಮಾನವೇ ಅಂತಿಮ" ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ. ಶರತ್ ಬಚ್ಚೇಗೌಡ ತಂದೆ ಬಿ. ಎನ್. ಬಚ್ಚೇಗೌಡ ಬಿಜೆಪಿಯಲ್ಲಿದ್ದು, ಚಿಕ್ಕಬಳ್ಳಾಪುರದ ಸಂಸದರು. ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ವಿಧಾನ ಪರಿಷತ್ ಸದಸ್ಯರಾಗಲು ಪ್ರಯತ್ನ ನಡೆಸುತ್ತಿದ್ದಾರೆ.

ಜನರ ಋಣ ತೀರಿಸಬೇಕಿದೆ
"ಹೊಸಕೋಟೆ ತಾಲೂಕಿನ ಜನರ ಋಣ ನನ್ನ ಮೇಲಿದೆ. ಪಕ್ಷಾತೀತವಾಗಿ ನನ್ನನ್ನು ಒಪ್ಪಿ ಮತ ನೀಡಿ ಗೆಲ್ಲಿಸಿದ್ದಾರೆ. ಜನರ ಋಣ ತೀರಿಸುವುದು ನನ್ನ ಕರ್ತವ್ಯ. ಕಾಂಗ್ರೆಸ್ ಸೇರುವ ಕುರಿತು ನನ್ನ ವೈಯಕ್ತಿಕ ನಿರ್ಧಾರ ಏನೂ ಇಲ್ಲ" ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ.

ಅಂತಿಮ ತೀರ್ಮಾನ ಅವರದ್ದು
"ಮತದಾರರ ಹಾಗೂ ಕಾರ್ಯಕರ್ತರ ಅಂತಿಮ ತೀರ್ಮಾನವೇ ನನ್ನ ತೀರ್ಮಾನ. ನಾನು ಕಾಂಗ್ರೆಸ್ ಸೇರುವ ವದಂತಿಗಳಿಗೆ ಕಾಲವೇ ಉತ್ತರ ನೀಡಲಿದೆ. ನಾನು ಮತದಾರ ಪ್ರಭುಗಳ ಅಂತಿಮ ತೀರ್ಮಾನಕ್ಕೆ ತಲೆಬಾಗುವೆ" ಎಂದು ಶರತ್ ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ.

ನಂಬಿಕೆ ಉಳಿಸಿಕೊಳ್ಳುತ್ತೇನೆ
"ಕ್ಷೇತ್ರ ಬಿಟ್ಟು ಪಲಾಯನ ಮಾಡದೇ, ಯಾರಿಗೂ ಮೋಸ ಮಾಡದೇ ಕಾರ್ಯಕರ್ತರು ಮತ್ತು ಮತದಾರರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ" ಎಂದು ಶರತ್ ಬಚ್ಚೇಗೌಡ ತಿಳಿಸಿದ್ದಾರೆ.

ಬಿಜೆಪಿಯೇ ದೂರ ತಳ್ಳಿದೆ
"ಬಿಜೆಪಿಯೇ ದೂರ ತಳ್ಳಿದೆ. ಮುಂದಿನ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾರರು ಮತ್ತು ಕಾರ್ಯಕರ್ತರ ತೀರ್ಮಾನದಂತೆ ಮುಂದಿನ ಹೆಜ್ಜೆ ಇಡಲಾಗುತ್ತದೆ" ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ.

ಕಾಂಗ್ರೆಸ್ ಕಟ್ಟಲು ತಯಾರಿ
ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಲು ಡಿ. ಕೆ. ಶಿವಕುಮಾರ್ ಯುವಕರ ಕಣ್ಮಣಿ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹಬ್ಬಿತ್ತು. ಕ್ಷೇತ್ರದ ಮುಂದಿನ ರಾಜಕೀಯ ಕುತೂಹಲ ಮೂಡಿಸಿದೆ.












Click it and Unblock the Notifications