ಶಾದಿ ಭಾಗ್ಯಕ್ಕೆ ಕೇಂದ್ರ ಸಚಿವೆ ನಜ್ಮಾ ಹೆಫ್ತುಲ್ಲಾ ಶ್ಲಾಘನೆ
ಬೆಂಗಳೂರು, ಡಿ. 15: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಾದಿ ಭಾಗ್ಯ ಯೋಜನೆಯನ್ನು ಸ್ಥಳೀಯ ಬಿಜೆಪಿ ಮುಖಂಡರು ಟೀಕಿಸಿದ್ದರು. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಪ್ರೋತ್ಸಾಹಿಸಿದೆ. ಇದರಿಂದ ರಾಜ್ಯ ಬಿಜೆಪಿಗೆ ಮುಖಭಂಗವಾದಂತಾಗಿದೆ.
ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವೆ ನಜ್ಮಾ ಹೆಪ್ತುಲ್ಲಾ ಶಾದಿ ಭಾಗ್ಯ ಯೋಜನೆಯನ್ನು ಶ್ಲಾಘಿಸಿದ್ದಾರೆ. ಕರ್ನಾಟಕ ಜಾರಿಗೆ ತಂದಿರುವ ಈ ಯೋಜನೆ ಎಲ್ಲ ರಾಜ್ಯಗಳಿಗೆ ಮಾದರಿ ಎಂದು ಹೇಳುವ ಮೂಲಕ ಬಹಿರಂಗ ಬೆಂಬಲ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ತಿಳಿಸಿರುವ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಕಮರುಲ್ಲಾ ಇಸ್ಲಾಂ, "ಕೇಂದ್ರ ಸಚಿವೆ ನಜ್ಮಾ ಹೆಫ್ತುಲ್ಲಾ ಕರೆ ಮಾಡಿ ಶಾದಿ ಭಾಗ್ಯ ಯೋಜನೆಯನ್ನು ಶ್ಲಾಘಿಸಿದ್ದಾರೆ" ಎಂದು ತಿಳಿಸಿದ್ದಾರೆ. [ಹಿಂದೂಗಳಿಗೆ ಶಾದಿ ಭಾಗ್ಯ ಇಲ್ಲ]
ಈ ನಿಟ್ಟಿನಲ್ಲಿ ಈಗಾಗಲೇ ಆಂದ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮುಂದಡಿ ಇಟ್ಟಿದ್ದಾರೆ. ಶಾದಿ ಭಾಗ್ಯ ಯೋಜನೆಯ ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ನಿಯೋಗ ಕಳುಹಿಸಲು ತೀರ್ಮಾನಿಸಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಿದೆ. ಮುಸ್ಲಿಂ ಸಮುದಾಯದ ವಧುಗಳಿಗೆ ಮಾತ್ರ ನೀಡಲಾಗುತ್ತಿದ್ದ ಸಹಾಯಧನವನ್ನು ಬಿಜೆಪಿ ಒತ್ತಡದ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನರು ಮತ್ತು ಬೌದ್ಧರಿಗೂ ಅನ್ವಯಿಸಲಾಗುತ್ತಿದೆ.[ಎಲ್ಲ ಬಡವರಿಗೂ ಶಾದಿ ಭಾಗ್ಯ ಚಿಂತನೆ]
ಏನಿದು ಶಾದಿಭಾಗ್ಯ: ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ವಧುಗಳಿಗೆ 50 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಈ ಯೋಜನೆಗೆ ವಿಧಿಸಿರುವ ಷರತ್ತುಗಳೆಂದರೆ ವಧುವಿಗೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬೇಕು. ವಧುವಿನ ಕುಟುಂಬದ ವಾರ್ಷಿಕ ಆದಾಯ 1.50 ಲಕ್ಷಕ್ಕಿಂತ ಕಡಿಮೆ ಇರಬೇಕು. [ಶಾದಿ ಭಾಗ್ಯ: ಬಿಜೆಪಿ ಕಿಡಿ]












Click it and Unblock the Notifications