ಡಿ.ಕೆ. ಸುರೇಶ್ಗೆ ಹಿನ್ನಡೆ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್!
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಅವರ ತಮ್ಮ ಡಿ.ಕೆ. ಸುರೇಶ್ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇತ್ತೀಚಿನ ಮಾಹಿತಿಗಳ ಪ್ರಕಾರ ಡಾ. ಮಂಜುನಾಥ್ ಸುಮಾರು 50,000 ಮತಗಳ ಅಂತರ ಪಡೆದು ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ & ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆ ಅಖಾಡಕ್ಕೆ ಇಳಿದ ಡಾ. ಮಂಜುನಾಥ್ಗೆ ಸಾಕಷ್ಟು ಸವಾಲು ಇದ್ದವು. ಇಷ್ಟೆಲ್ಲಾ ಸವಾಲುಗಳ ನಡುವೆ ಕೂಡ ಬಿಜೆಪಿ & ಜೆಡಿಎಸ್ನ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿ ಡಾ. ಮಂಜುನಾಥ್ ಅವರ ಗೆಲುವಿಗೆ ಶ್ರಮವಹಿಸಿ ಪ್ರಚಾರ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಆರಂಭದಲ್ಲೇ ಡಾ. ಮಂಜುನಾಥ್ ಅವರು ಭಾರಿ ಮುನ್ನಡೆ ಸಾಧಿಸಿದ್ದರು. NDA ಅಭ್ಯರ್ಥಿ ಡಾ.ಮಂಜುನಾಥ್ 86 ಸಾವಿರ ಮತಗಳ ಮುನ್ನಡೆಯ ಸಾಧಿಸಿದ್ದರು. ಆ ನಂತರ ಈ ಅಂತರ 45 ಸಾವಿರ ಮತಗಳಿಗೆ ಕುಸಿತ ಕಂಡರು ಕೂಡ ಈಗಲೂ ಡಾ. ಮಂಜುನಾಥ್ ಗೆಲ್ಲುವ ಕುದುರೆ ಆಗಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಡಾ. ಮಂಜುನಾಥ್ ಗೆಲುವು ಗ್ಯಾರಂಟಿ?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಭಾರತದ ಮೂಲೆ ಮೂಲೆಯಲ್ಲಿ ಸದ್ದು ಮಾಡಿ, ಸುದ್ದಿಯಾಗಿತ್ತು. ಯಾಕಂದ್ರೆ ಈ ಕ್ಷೇತ್ರದಲ್ಲಿ ಸತತವಾಗಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನ ಕಟ್ಟಿಹಾಕಲು ನೇರ ಬಿಜೆಪಿ ಕೇಂದ್ರ ನಾಯಕರೆ ಸಿದ್ಧತೆ ಮಾಡಿದ್ದರು.
ಅಲ್ಲದೆ ಜೆಡಿಎಸ್ ವರಿಷ್ಠ & ಎಚ್.ಡಿ. ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜುನಾಥ್ ಅವರನ್ನೇ ಡಿ.ಕೆ. ಸುರೇಶ್ ಅವರ ವಿರುದ್ಧ ಕಣಕ್ಕೆ ಇಳಿಸಿದ್ದರು. ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥರಾಗಿದ್ದ ಡಾ. ಮಂಜುನಾಥ್ ನಿವೃತ್ತಿ ಪಡೆದು ರಾಜಕೀಯಕ್ಕೆ ಬಂದಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಡಿ.ಕೆ. ಸುರೇಶ್ ವಿರುದ್ಧ ಡಾ. ಮಂಜುನಾಥ್ ದೊಡ್ಡ ಮಟ್ಟದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಡಿ.ಕೆ. ಸುರೇಶ್ ಗೆಲುವಿಗೆ ಬ್ರೇಕ್?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ VS ಬಿಜೆಪಿ ನೇರವಾಗಿ ಹಣಾಹಣಿ ನಡೆಸಿವೆ. ಅತ್ತ ಒಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಸತತ 4ನೇ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದರೆ, ಮತ್ತೊಂದ್ಕಡೆ ಬಿಜೆಪಿ & ಜೆಡಿಎಸ್ ನಾಯಕರು ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದರು. ಹೀಗಿದ್ದಾಗ ಗೆಲುವಿಗೆ ಹತ್ತಿರ ಇರುವುದು ಡಿ.ಕೆ. ಸುರೇಶ್ ಅವರು ಎಂಬ ಮಾತುಗಳು ಕೇಳಿಬಂದಿದ್ದವು, ಆದರೆ ಈಗ ನೋಡಿದ್ರೆ ಡಾ. ಮಂಜುನಾಥ್ ಮುನ್ನಡೆ ಕಾಯ್ದುಕೊಂಡಿದ್ದಾರೆ.












Click it and Unblock the Notifications