ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಬೆಂಗಳೂರಿನಲ್ಲಿ ಕ್ಷಣಗಣನೆ
ಬೆಂಗಳೂರು. ಡಿ 28: ಐತಿಹಾಸಿಕ ಅಮೃತ ಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಗಳಿಗೆ ಭರ್ಜರಿ ಸಿದ್ಧತೆ ನಡೆದಿದ್ದು, ಶುಕ್ರವಾರ (ಡಿ 28) ಅಮೃತ ಮಹೋತ್ಸದ ಉದ್ಘಾಟನಾ ಸಮಾರಂಭ ಬೆಳಗ್ಗೆ 9 ಗಂಟೆಗೆ ಅರಮನೆ ಮೈದಾನದ ರಾಯಲ್ ಸೆನೆಟ್ ಸಭಾಂಗಣದಲ್ಲಿ ನಡೆಯಲಿದೆ.
ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಮತ್ತು ಸುಬ್ರಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ದಿವ್ಯ ಸಾನ್ನಿಧ್ಯವನ್ನು ವಹಿಸಲಿದ್ದು, ರಾಜ್ಯಪಾಲರಾದ ವಜುಭಾಯಿ ವಾಲಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ನ್ಯಾ ಶಿವರಾಜ್ ಪಾಟೀಲ್ ಸ್ಮರಣ ಸಂಚಿಕೆಯ ಲೋಕಾರ್ಪಣೆ ಮಾಡಲಿದ್ದು, ಯಡಿಯೂರಪ್ಪ, ಆರ್ ವಿ ದೇಶಪಾಂಡೆ, ಪಿ ಜಿ ಆರ್ ಸಿಂಧ್ಯಾ, ವೆಂಕಟ ನಾರಾಯಣ್, ರವಿ ಹೆಗಡೆ ಹಾಗೂ ಸಮ್ಮೇಳನದ ಗೌರವಾಧ್ಯಕ್ಷರಾದ ಭೀಮೇಶ್ವರ ಜೋಷಿ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ 100 ಪುಸ್ತಕಗಳ ಲೋಕಾರ್ಪಣೆ ಏಕಕಾಲದಲ್ಲಿ ನಡೆಯಲಿದ್ದು, ಏಕ ಕಾಲದಲ್ಲಿ ಏಕ ಸಂಸ್ಥೆಯಿಂದ, ಏಕ ಸ್ಥಳದಲ್ಲಿ ಲೋಕಾರ್ಪಣೆಯಾಗುವ ಈ ಬೃಹತ್ ಕಾರ್ಯ ಲಿಮ್ಕಾ ಬುಕ್ ಆಫ್ ರೆಕಾರ್ಡ್'ನಲ್ಲಿ ದಾಖಲಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮಲ್ಲೇಪುರಂ ವೆಂಕಟೇಶ್, ಹರಿಕೃಷ್ಣ ಪುನರೂರು, ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ.
ನಾಡಿನ 75 ಶ್ರೇಷ್ಠ ವಿದ್ವಾಂಸರಿಗೆ "ಹವ್ಯಕ ವೇದರತ್ನ" ಸನ್ಮಾನ ಕಾರ್ಯಕ್ರಮ ಶುಕ್ರವಾರ ಸಂಜೆ 4ಗಂಟೆಗೆ ನಡೆಯಲಿದ್ದು, ಕಬ್ಬಿನಾಲೆ ವಸಂತ ಭಾರಧ್ವಾಜ್, ಕೆ ಎಲ್ ಶಂಕರನಾರಾಯಣ್ ಜೋಯಿಸ್, ಅಶೋಕ್ ಹಾರ್ನಳ್ಳಿ, ಪಳ್ಳತ್ತಡ್ಕ ಶಂಕರನಾರಾಯಣ ಭಟ್ ಮುಂತಾದ ಹಿರಿಯ ವಿದ್ವಾಂಸರು ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಶುಕ್ರವಾರದಿಂದ ಭಾನುವಾರದವರೆಗೆ ಸಮ್ಮೇಳನದ ಕಾರ್ಯಕ್ರಮ ನಡೆಯಲಿದೆ.

75 ಯಾಗ ಮಂಟಪಗಳು ಹಾಗೂ ಮಂಡಲಗಳ ಪ್ರದರ್ಶನ
ಯಜ್ಞ ಯಾಗಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇಷ್ಟಾರ್ಥ ಸಿದ್ಧಿಯಿಂದ ಹಿಡಿದು ಪ್ರಮಾರ್ಥ ಪ್ರಾಪ್ತಿಯವರೆಗೆ ಯಜ್ಞಗಳ ವ್ಯಾಪ್ತಿಯಿದೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಯಜ್ಞಗಳ ನಿಯಮಗಳು, ಅದರ ವಿವಿಧತೆಗಳು, ಆಚರಣೆಯ ಬಗೆಗಳು, ಉದ್ದೇಶಗಳು ಮುಂತಾದವನ್ನು ತಿಳಿಸುವ ದೃಷ್ಟಿಯಿಂದ 75 ವಿವಿಧ ರೀತಿಯ ಹೋಮ ಕುಂಡಗಳ ದರ್ಶನ, ವಿವಿಧ ರೀತಿಯ ಮಂಡಲಗಳ ದರ್ಶನ, ಯಜ್ಞಗಳ ಉದ್ದೇಶ ಹಾಗೂ ಫಲದ ಮಾಹಿತಿ, ದಿನಕ್ಕೊಂದು ಯಾಗದ ಪ್ರಾತ್ಯಕ್ಷಿಯತೆ ಮೂರು ದಿನಗಳ ಕಾಲ ನಡೆಯಲಿದೆ.

Twitter ನಲ್ಲಿ ರಾಷ್ತ್ರೀಯ ಟ್ರೆಂಡ್
ವಿಶ್ವಹವ್ಯಕ ಸಮ್ಮೇಳನಕ್ಕೆ ಪೂರಕವಾಗಿ ಬುಧವಾರ (ಡಿ 26) Twitter ಹವ್ಯಕ ಸಂಸ್ಕೃತಿಯನ್ನು ಪರಿಚಯಿಸುವ ಹಾಗೂ ಕಾರ್ಯಕ್ರಮದ ಮಾಹಿತಿಗಳನ್ನು ಹಂಚುವ ಕಾರ್ಯ ನಡೆದಿದ್ದು, ಇದಕ್ಕೆ Twitter ಲೋಕದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
#VishwaHavyakaSammelana ಹ್ಯಾಷ್ ಟ್ಯಾಗ್ ರಾಷ್ಟ್ರ ಮಟ್ಟದಲ್ಲಿ ಮೊದಲನೇ ಟ್ರೆಂಡ್ ಆಗಿ ದೇಶದ ಗಮನ ಸೆಳೆಯಿತು.

ಪಾಕೋತ್ಸವಕ್ಕೆ 100 ಕ್ಕೂ ಅಧಿಕ ಪಾಕತಜ್ಣರಿಂದ ತಯಾರಿ
ಮಲೆನಾಡು - ಕರಾವಳಿ ಭಾಗಗಳ ಪಾರಂಪರಿಕ ಹವ್ಯಕ ಪಾಕಗಳು ಈ ಐತಿಹಾಸಿಕ ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಲಿದ್ದು, ಪತ್ರೋಡೆ, ಕೊಟ್ಟೆ ಕಡುಬು, ವಿವಿಧ ರೀತಿಯ ಅವಲಕ್ಕಿಗಳು, ಗೆಣೆಸೆಲೆ, ಜಿಲೇಬಿ, ಅತ್ರಾಸ, ಚಕ್ಕುಲಿ, ಸುಕ್ಕಿನುಂಡೆ, ಕೇಸರಿ, ತಂಬಳಿ, ಪಾಯಸಗಳು, ಹೋಳಿಗೆಗಳು ಜನಾಕರ್ಷಣೆಯ ಕೇಂದ್ರವಾಗಲಿದೆ. ಇವುಗಳ ತಯಾರಿಕೆಯಲ್ಲಿ 100ಕ್ಕೂ ಅಧಿಕ ಪಾಕ ತಜ್ಣರು ತೊಡಗಿಸಿಕೊಂಡಿದ್ದಾರೆ.

ಹವ್ಯಕ ಜ್ಯೋತಿ
ಹವ್ಯಕರ ಮೂಲ ಸ್ಥಾನವಾದ ಉತ್ತರ ಕನ್ನಡದ ಹೈಗುಂದದಿಂದ "ಹವ್ಯಕ ಜ್ಯೋತಿ"ಗೆ ಬುಧವಾರ ಚಾಲನೆ ನೀಡಲಾಗಿದ್ದು, ಹವ್ಯಪುರಾಧೀಶ್ವರಿ ಶ್ರೀ ದುರ್ಗಾಂಬಿಕಾ ದೇವಿಯ ಸನ್ನಿಧಿಯಿಂದ ಜ್ಯೋತಿಯನ್ನು ಹಚ್ಚಿಕೊಂಡು ಅಲಂಕೃತ ರಥದಲ್ಲಿ ತರಲಾಗುತ್ತಿದೆ. ಸಿದ್ದಾಪುರ, ಸಾಗರ, ಶಿವಮೋಗ್ಗ ಭಾಗಗಳಿಂದ ರಥದಲ್ಲಿ ಜ್ಯೋತಿಯನ್ನು ತರಲಾಗಿದ್ದು, ಗುರುವಾರ ರಾತ್ರಿ ರಥ ನಗರಕ್ಕೆ ಆಗಮಿಸಲಿದೆ. ಇದೇ ಜ್ಯೋತಿಯಿಂದ ನಾಳೆ ದೀಪ ಬೆಳಗುವುದರ ಮೂಲಕ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಏನೇನು ಇರಲಿದೆ
* ಹವ್ಯಕ ಪಾಕೋತ್ಸವ : ಮಲೆನಾಡು - ಕರಾವಳಿ ಭಾಗಗಳ ಹವ್ಯಕರ ಪಾರಂಪರಿಕ ತಿನಿಸುಗಳ ಉತ್ಸವ
* ಆಲೆಮನೆ : ಹಳ್ಳಿ ಸೊಗಡಿನ ಆಲೆಮನೆ ರಾಜಧಾನಿಯಲ್ಲಿ
* 75 ಯಾಗ ಹಾಗೂ ಯಜ್ಞ ಮಂಡಲಗಳ ಪ್ರದರ್ಶನ
* ಅಡಿಕೆ ಕೃಷಿಯ ಸಮಗ್ರ ದರ್ಶನ
* ಪಾರಂಪರಿಕ ವಸ್ತುಗಳ ಪ್ರದರ್ಶನ
* ನಾಡಿನ ಶ್ರೇಷ್ಠ ವಿದ್ವಾಂಸರುಗಳಿಂದ ಗೋಷ್ಠಿಗಳು
* 75 ಶ್ರೇಷ್ಠ ವೇದ ವಿದ್ವಾಂಸರಿಗೆ ಸಮ್ಮಾನ
* ಸಂಜೆ ಗೀತ - ನಾಟ್ಯ - ವೈಭವ












Click it and Unblock the Notifications