Bengaluru 2nd Airport: ಈ ಭಾಗದಲ್ಲಿ ಹೊಸ ಏರ್ಪೋರ್ಟ್ ನಿರ್ಮಿಸುವುದು ಸೂಕ್ತ
ಬೆಂಗಳೂರು, ಜುಲೈ 25: ಬೆಂಗಳೂರಿನ ಹಾಲಿ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲೆ ಪ್ರಯಾಣಿಕರ ಒತ್ತಡ ತಪ್ಪಿಸಲು ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ವಿಮಾನ ನಿಲ್ದಾಣ ಪ್ರಸ್ತಾವನೆ ಕೈಗೆತ್ತಿಕೊಂಡಿದೆ. ಇದರ ಬೆನ್ನಲ್ಲೆ ಎಲ್ಲಿ ನಿರ್ಮಿಸಬೇಕು ಎಂಬ ಪ್ರಶ್ನೆ ಶುರುವಾಗಿದೆ. ಇದೀಗ ಈ ಜಾಗದಲ್ಲಿ ನಿರ್ಮಾಣ ಮಾಡಿದರೆ ಸೂಕ್ತ ಎಂಬ ಆಗ್ರಹವು ಹೆಚ್ಚಾಗುತ್ತಿದೆ.
ಹೌದು, ಬೆಂಗಳೂರಿನಲ್ಲಿ ಸದ್ಯ ಹಾಟ್ ಟಾಪಿಕ್ ಅಂದರೆ ಅದು ಎರಡನೇ ಏರ್ಪೋರ್ಟ್ ನಿರ್ಮಿಸುವ ಯೋಜನೆ ಆಗಿದೆ. ಅಧಿಕಾರಿಗಳು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು ಆರೇಳು ಕಡೆಗಳಲ್ಲಿ ಸರ್ಕಾರ ಜಾಗ ಗುರುತಿಸಿದ್ದು, ಯಾವುದನ್ನು ಅಂತಿಮಗೊಳಿಸಿಲ್ಲ.

ಈ ಮಧ್ಯೆ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘವು ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣವನ್ನು ತುಮಕೂರು ಹಾಗೂ ಶಿರಾ ನಡುವೆ ನಿರ್ಮಿಸುವುದು ಸೂಕ್ತ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಶಿರಾ-ತುಮಕೂರು ಮಧ್ಯೆ ನಿರ್ಮಾಣ ಸೂಕ್ತ
ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಹಾಂತೇಶ್ ಚರಂತಿಮಠ ಅವರು ಮಾತನಾಡಿ, ಮೈಸೂರು ಭಾಗದಲ್ಲಿ ಮತ್ತೊಂದು ಅಂತಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂಬ ಚರ್ಚೆ ಶುರುವಾಗಿತ್ತು. ಬೆಂಗಳೂರು ಮತ್ತು ಮೈಸೂರು ಮಧ್ಯೆ ಕೇವಲ ಕಡಿಮೆ ಅಂತರ (143km) ಇದೆ. ಹೀಗಾಗಿ ಇಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿರ್ಮಿಸುವುದು ಬೇಡ, ಅದು ಸಮಂಜಸವಲ್ಲ. ಆದ್ದರಿಂದ ಶಿರಾ-ತುಮಕೂರು ಮಧ್ಯೆ ಹೊಸ ವಿಮಾನ ನಿಲ್ದಾಣ ನಿರ್ಮಿಸುವುದು ಸೂಕ್ತ ಎಂದರು.

ತುಮಕೂರು-ಶಿರಾ ಮಧ್ಯೆ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿದರೆ, ಉತ್ತರ ಕರ್ನಾಟಕ, ಕರಾವಳಿ ಭಾಗ ಹಾಗೂ ಬೆಂಗಳೂರಿಗೆ ಅನುಕೂಲವಾಗಲಿದೆ. ಮಧ್ಯ ಕರ್ನಾಟಕದ ಜನರಿಗೆ ಬಹಳಷ್ಟು ಸಹಾಯವಾಗಲಿದೆ ಎಂದು ಅವರು ಮನವಿ ಮಾಡಿದರು. ಇದರಿಂದ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಏಳಿಗೆಗೆ ಸಹಾಯವಾಗುತ್ತದೆ.
ಏರ್ಪೋರ್ಟ್ಗಾಗಿ ಎಲ್ಲೆಲ್ಲಿ ಜಾಗ ಶೋಧ
ಈ ಹಿಂದೆ ತುಮಕೂರು, ನೆಲಮಂಗಲ, ರಾಮನಗರ, ಕನಕಪುರ, ದೊಡ್ಡಬಳ್ಳಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದೆ. ಆದರೆ ಯಾವುದು ಅಂತಿಮವಾಗಿಲ್ಲ. ಗುಡ್ಡಗಾಡು, ಅಡೆತಡೆಯ ಪ್ರದೇಶಗಳು ಇಲ್ಲದ ಪ್ರದೇಶದಲ್ಲಿ 5000 ಎಕರೆ ಜಾಗವನ್ನು ರಾಜ್ಯ ಸರ್ಕಾರ ಹುಡುಕುತ್ತಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ, ರೈಲು ಸೇರಿದಂತೆ ವಿವಿಧ ಸಾರಿಗೆ ಸಂಪರ್ಕ ಹೊಂದಿರಬೇಕು. ಅಂತಹ ವ್ಯವಸ್ಥೆಗಳ ಹತ್ತಿರವೇ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಚಿಂತನೆ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಏರ್ಪೋರ್ಟ್ ನಿರ್ಮಾಣವಾಗುವುದು ಖಚಿತವಾಗುತ್ತಿದ್ದಂತೆ ಎಂಬಿ ಪಾಟೀಲ್ ನೇತೃತ್ವದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ಸಚಿವರು ಡಿಪಿಆರ್ ತಯಾರಿಸುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ. ಈ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಮಾತನಾಡಿದ್ದರು. ಕೆಐಎ ಜನದಟ್ಟಣೆ ಕಡಿಮೆಗೆ ಮತ್ತೊಂದು ಏರ್ಪೋರ್ಟ್ ಬೆಂಗಳೂರಿಗೆ ಅಗತ್ಯವಿದೆ ಎಂದಿದ್ದರು. ಇದೆಲ್ಲ ಬೆಳವಣಿಗೆ ಮಧ್ಯೆ ತಮಿಳುನಾಡು ಹೊಸೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುತ್ತೇವೆ ಎಂದು ಘೋಷಿಸಿತು.
ಸದ್ಯ ತಮಿಳುನಾಡು ಸರ್ಕಾರ ಘೋಷಿತ ನೀರ್ಧಾರಕ್ಕೆ ಕರ್ನಾಟಕ ಹಾಲಿ ಸಚಿವರು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಪಕ್ಷಬೇಧ ಮರೆತು ಖಂಡಿಸಿದ್ದಾರೆ. ಕಾವೇರಿ ನೀರು, ಮೇಕೆದಾಟು ಯೋಜನೆ ನಂತರ ಇಂತಹ ವಿಷಯಗಳಲ್ಲಿ ನೆರೆ ರಾಜ್ಯ ಖ್ಯಾತೆ ತೆಗೆಯುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications