ಸಾಂವಿಧಾನಿಕ ಹಕ್ಕಿಗಾಗಿ ಬೇಡ ಜಂಗಮರ ಸತ್ಯ ಪ್ರತಿಪಾದನಾ ಸತ್ಯಾಗ್ರಹ
ಬೆಂಗಳೂರು ಜೂ.30: ಬೇಡ ಜಂಗಮರಿಗೆ ಸಾಂವಿಧಾನ ಬದ್ಧವಾದ ಜಾತಿ ಪ್ರಮಾಣ ಪತ್ರ ನೀಡಬೇಕು ಹಾಗೂ ಜಾತಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಸರಳೀಕರಣಗೊಳಿಸಬೇಕು ಎಂದು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಬಿ. ಡಿ. ಹಿರೇಮಠ ಒತ್ತಾಯಿಸಿದರು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಹತ್ತಾರು ಬೇಡ ಜಂಗಮ ಮಠಗಳ ಶ್ರೀಗಳು, ಸಮುದಾಯದ ಮುಖಂಡರು ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬೇಡ ಜಂಗಮ ಜನರು ಪ್ರತಿಭಟನೆ ನಡೆಸಿದರು.
ನ್ಯಾಯಾಲಯಗಳ ಆದೇಶದ ಹೊರತಾಗಿಯು ಬೇಡ ಜಂಗಮರ ಬೇಡಿಕೆ ನಿರ್ಲಕ್ಷಿಸುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ಹೊರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟ ಅಧ್ಯಕ್ಷ ಬಿ. ಡಿ. ಹಿರೇಮಠ, "ನಮಗೆ ಸಂವಿಧಾನ ಬದ್ಧ ಹಕ್ಕು ಸಿಗದಂತೆ ಪ್ರಭಾವಿಗಳ ಶಕ್ತಿ ಮೆರೆದಿದ್ದಾರೆ. ರಾಜಕಾರಣಿಗಳ ಒತ್ತಡದಿಂದ ಅಧಿಕಾರಿಗಳು ಸೌಲಭ್ಯಗಳಿಂದ ವಂಚಿಸುತ್ತಿದ್ದಾರೆ. ಈ ಕುರಿತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ನಮಗೆ ಸಿಗಬೇಕಾದ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಒಟ್ಟಾರೆ ನಮ್ಮನ್ನು ಜಾತಿಯಿಂದ ಕೈಬಿಡುವ ಹುನ್ನಾರ ನಡೆಯುತ್ತಿದೆ" ಎಂದು ದೂರಿದರು.

ಜಾತಿ ನಿರ್ನಾಮದ ಹಕ್ಕು ಯಾರಿಗೂ ಇಲ್ಲ
ಸರ್ಕಾರವೇ ಬೇಡ ಜಂಗಮರ ಜಾತಿ ನಿರ್ನಾಮ ಮಾಡಲು ಹೊರಟಿದೆ. ಒಂದು ಜಾತಿಯನ್ನು ಸಾಂವಿಧಾನಿಕ ಸೌಲಭ್ಯದಿಂದ ವಂಚಿಸಲು, ನಿರ್ನಾಮ ಮಾಡಲು ಕಾನೂನು ಬದ್ಧವಾಗಿ ಸರ್ಕಾರಕ್ಕೂ ಹಕ್ಕಿಲ್ಲ. ಕಲ್ಯಾಣ ಸಮಿತಿ ಹಿಂದುಳಿದ ಈ ಸಮುದಾಯದ ಏಳಿಗೆ ಶ್ರಮಿಸದೇ ಅನ್ಯಾಯವೆಸಗಿದೆ. ಜಾತಿ ಪ್ರಮಾಣ ಪತ್ರ ಪಡೆದವರು ಮತ್ತು ಕೊಟ್ಟವರ ಅಧಿಕಾರಿಗಳ ವಿರುದ್ಧ ಮೊಕದ್ಧಮೆ ಹಾಕಲಾಗುತ್ತಿದೆ ಎಂದು ಪ್ರತಿಭಟನಾನಿರತರು ಆಪಾದಿಸಿದರು.
ರಾಜ್ಯದ ವಿವಿಧೆಡೆಯಿಂದ ಪ್ರತಿಭಟನೆಗೆ ಆಗಮಿಸುತ್ತಿದ್ದವರನ್ನು ಸರ್ಕಾರ ತಡೆದಿದೆ. ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುವ ಯತ್ನ ಮಾಡಿದೆ. ಇದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಸರ್ಕಾರದ ವಿರುದ್ಧ ಅವರು ಕಿಡಿ ಕಾರಿದರು.

ಜಾತ್ರಿ ಪ್ರಮಾಣ ಪತ್ರ ನೀಡಿಕೆ ಸರಳೀಕರಣ:
"ವೀರಶೈವ ಲಿಂಗಾಯತ ಪಂಥದ ಅನುಯಾಯಿಗಳೇ ಬೇಡ ಜಂಗಮರು. ಇದಕ್ಕೆ ನ್ಯಾಯಾಲಯ ತೀರ್ಪು ಮತ್ತು ಆದೇಶಗಳಿವೆ. ಅಲ್ಲದೇ ಸರ್ಕಾರಗಳು ಹೊರಡಿಸಿದ ಸುತ್ತೋಲೆಗಳೆ ಸಾಕ್ಷಿ. ಹೀಗಿದ್ದರು ನಮಗೆ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರ ಕೂಡಲೇ ಬೇಡ ಜಂಗಮರ ಜಾತಿ ಪ್ರಮಾಣ ಪತ್ರ ನೀಡಬೇಕು. ಕೆಲವೆಡೆ ಜಾತಿ ಪ್ರಮಾಣ ನೀಡಲಾಗಿದ್ದು, ಕೆಲವೆಡೆ ನೀಡಿಲ್ಲ. ಈ ವ್ಯವಸ್ಥೆಯನ್ನು ಸರಿಪಡಿಸಬೇಕು. ಇನ್ನು ಪ್ರಮಾಣ ಪತ್ರ ಕೊಡದೇ ಸಮುದಾಯದವರಿಗೆ ನೀಡುತ್ತಿರುವ ತೊಂದರೆ ನಿಲ್ಲಬೇಕು" ಎಂದು ಬಿ. ಡಿ. ಹಿರೇಮಠ ಸರ್ಕಾರಕ್ಕೆ ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರತಿಭಟನೆ:
ಗುರುವಾರ ಬೆಳಗ್ಗೆ ಸತ್ಯ ಪ್ರತಿಪಾದನಾ ಸತ್ಯಾಗ್ರಹ ಹೋರಾಟ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಭಾಗದಿಂದ ಬೇಡ ಜಂಗಮ ಸಮುದಾಯವರು ಬುಧವಾರ ರಾತ್ರಿ ತೆರಳಿದ್ದಾರೆ. ಆದರೆ ಪ್ರತಿಭಟನೆಗೆ ತಡೆಯೊಡ್ಡುವ ಸಲುವಾಗಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ 4ರ ಶಿರಾ ಬಳಿ ಪ್ರತಿಭಟನಾಕಾರರ 30ಕ್ಕೂ ಹೆಚ್ಚು ಬಸ್ ಗಳನ್ನು ಹಾಗೂ 50ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸಮುದಾಯದವರ ಮಧ್ಯೆ ವಾಗ್ವಾದ ನಡೆಯಿತು.

ರೈಲ್ವೆ ಮೂಲಕ ಪ್ರತಿಭಟನೆಗೆ ಬಂದ ಬೇಡ ಜಂಗಮರು:
ಸ್ಥಳದಲ್ಲೇ ಪ್ರತಿಭಟಿಸಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದರಿಂದ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೇ ವಾಹನ ದಟ್ಟಣೆ ಉಂಟಾಗಿ ಸಂಚಾರ ಸಮಸ್ಯೆ ಉದ್ಭವಿಸಿತು. ಹುಬ್ಬಳ್ಳಿ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ ಇನ್ನಿತರ ಕಡೆಯಿಂದ ಬರುವ ವಾಹನ ಸವಾರರು ಪದಾಡಿದರು. ನಂತರ ಪ್ರತಿಭಟನಾಕಾರರು ತುಮಕೂರಿನಿಂದ ಬೆಂಗಳೂರಿಗೆ ಇರುವ ಪ್ಯಾಸೆಂಜರ್ ರೈಲುಗಳ ಸಮಯ ಪಡೆದು ರೈಲು ಮೂಲಕ ಬೆಂಗಳೂರು ತಲುಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಫ್ರೀಡಂ ಪಾರ್ಕ್ಗೆ ಸಾವಿರಾರು ಜನ ಆಗಮಿಸುತ್ತಿದ್ದಂತೆ ಪೊಲೀಸರು ಪ್ರತಿಭಟನಾ ಸ್ಥಳದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಿದರು. ಎರಡು ಕೆಎಸ್ಆರ್ಪಿ ತುಕಡಿ ಸೇರಿದಂತೆ 300ಕ್ಕು ಹೆಚ್ಚು ಸಿಬ್ಬಂದಿಗಳು ನಿಯೋಜಿಸಲಾಗಿತ್ತು.
ವಿವಿಧ ಮಠಾಧೀಶರು, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ, ರವಿ ಸಿದ್ಧಾಟಗಿಮಠ,ಬಂಗಾರೇಶ್ ಹಿರೇಮಠ ಹಾಗೂ ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಕಾರ್ಯದರ್ಶಿಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.












Click it and Unblock the Notifications