ಸುಲಿಗೆಕೋರರನ್ನು ಬೆನ್ನುಹತ್ತಿ ಸಿನಿಮೀಯ ಶೈಲಿಯಲ್ಲಿ ಹಿಡಿದ ನಟ
ಬೆಂಗಳೂರು, ಡಿಸೆಂಬರ್ 28: ಕ್ಯಾಬ್ ಚಾಲಕನನ್ನು ಬೆದರಿಸಿ ದರೋಡೆ ಮಾಡಿಕೊಂಡು ಓಡುತ್ತಿದ್ದ ಸುಲಿಗೆಕೋರರನ್ನು ನಟರೊಬ್ಬರು 2 ಕಿ.ಮೀ ಚೇಸ್ ಮಾಡಿ ಕೊನೆಗೂ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಟ ರಘುಭಟ್ ಎಂಬುವರೇ ಸಾಹಸ ಮೆರೆದಿದ್ದು, ಹಲಸೂರು ಸಮೀಪ ರಾತ್ರಿ 2 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ. ಡಿವೈಡರ್ಗೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಆರೋಪಿ ಮೊಹಿನ್ ಕಾಲಿಗೆ ಏಟಾಗಿದ್ದು ಸುಲಿಗೆಕೋರ ಮೋಹಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸಹಚರ ಲಿಂಗರಾಜಪುರದ ಅಬ್ದುಲ್ ಫಾಹಿಮ್ನನ್ನು ಬಂಧಿಸಲಾಗಿದೆ.
ರಾತ್ರಿ ವೇಳೆ ತನ್ನ ಸಹಚರ ಅಬ್ದುಲ್ ಜೊತೆ ಬೈಕಿನಲ್ಲಿ ಸಂಚಾರ ನಡೆಸಿ, ಸಾರ್ವಜನಿಕರನ್ನು ಅಡ್ಡಗಟ್ಟಿ ಬೆದರಿಸಿ ಸಿಕ್ಕಿದ್ದನ್ನು ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬ್ ಚಾಲಕನನ್ನು ಬೆದರಿಸಿ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನತ್ತಿ ಚಲನಚಿತ್ರ ನಾಯಕ ನಟರೊಬ್ಬರು ಸೆರೆಹಿಡಿದಿದ್ದಾರೆ.

ಭಾರತಿನಗರದ ಮೋಹಿನ್ ಕುಖ್ಯಾತ ಸುಲಿಗೆಕೋರಾಗಿದ್ದು, ಆತನ ಮೇಲೆ ಹಲಸೂರು, ಅಶೋಕನಗರ, ಭಾರತಿನಗರ ಹಾಗೂ ಪುಲಕೇಶಿನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಅಂತೆಯೇ ಹಲಸೂರು ಕೆರೆ ಬಳಿ ಕ್ಯಾಬ್ ಚಾಲಕ ರಘುನಾಥ್ನನ್ನು ಅಡ್ಡಗಟ್ಟಿದ ಆರೋಪಿಗಳು, ಬೆದರಿಸಿ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದರು. ಅದೇ ಸಮಯಕ್ಕೆ ಅದೇ ಮಾರ್ಗದಲ್ಲಿ ಬಂದ ರಘು ಭಟ್ , ಚಾಲಕನ ರಕ್ಷಣೆಗೆ ಧಾವಿಸಿದ್ದಾರೆ. ತಕ್ಷಣವೇ ತಮ್ಮ ಕಾರಿನಲ್ಲಿ ಆರೋಪಿಗಳನ್ನು ಬೆನ್ನುಹತ್ತಿದ್ದಾರೆ.
ಇದರಿಂದ ಆತಂಕಗೊಂಡ ಮೋಹಿನ್ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿಸುಮಾರು ಎರಡು ಕಿ.ಮೀ ವರೆಗೆ ಚೇಸಿಂಗ್ ನಡೆದಿದೆ. ಕೊನೆಗೆ ಭಾರತಿನಗರದ ಸಮೀಪ ರಸ್ತೆ ವಿಭಜಕಕ್ಕೆ ಬೈಕ್ ಗುದ್ದಿಸಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ರಘುಭಟ್ ಕರೆ ಮಾಡಿ , ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಆರೋಪಿಗಳನ್ನು ಒಪ್ಪಿಸಿದ್ದಾರೆ.
ಆರೋಪಿಗಳಿಂದ ಹಲವು ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ. ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅಭೀನಂದಿಸಿದ್ದಾರೆ. ರಘುಭಟ್ ಅನ್ವೇಷಿ, ಎಂಎಂಸಿಎಚ್ ಹಾಗೂ ಲವ್ ಯೂ ಟೂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.












Click it and Unblock the Notifications