HAL ಸಭಾಗಿತ್ವದ 'ಸಾಫ್ರಾನ್' ನೂತನ ಕಚೇರಿ ಉದ್ಘಾಟಿಸಿದ ಎಂಬಿ ಪಾಟೀಲ
ಬೆಂಗಳೂರು, ಸೆಪ್ಟಂಬರ್ 12: ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ಅಗ್ರಗಣ್ಯ ಫ್ರೆಂಚ್ 'ಸಾಫ್ರಾನ್' ಕಂಪನಿಯು ರಾಜ್ಯ ರಾಜಧಾನಿ ಬೆಂಗಳೂರಿನ ಜೆಪಿ ನಗರದ ದೊರೆಸಾನಿ ಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಕಚೇರಿಗೆ ಬೃಹತ್ ಕೈಗಾರಿಕಾ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂಬಿ ಪಾಟೀಲ್ ಅವರು, ರಕ್ಷಣಾ ವಲಯದ ಮುಂಚೂಣಿ ಕಂಪನಿಗೆ ರಾಜ್ಯ ಸರ್ಕಾರವು ಆಧುನಿಕ ಮೂಲಸೌಕರ್ಯ ಮತ್ತು ಅತ್ಯುತ್ತಮ ಪ್ರತಿಭೆಗಳ ಬಲವನ್ನು ಒದಗಿಸಿದೆ ಎಂದು ಹೇಳಿದರು.

ಸಾಫ್ರಾನ್ ಕಂಪನಿಯು ಹಿಂದೂಸ್ತಾನ್ ಏರೊನಾಟಿಕ್ ಲಿಮಿಟೆಡ್ (HAL) ಜತೆ ಸಹಭಾಗಿತ್ವ ಹೊಂದಿದ್ದು, ರಾಜ್ಯದಲ್ಲಿ ಎಂಜಿನ್ ವಿನ್ಯಾಸ ಚಟುವಟಿಕೆ ಮತ್ತು ತಯಾರಿಕೆಗೆ ಮುಂದಾಗಿದೆ. ಇದು ಭಾರತ ಮತ್ತು ಕರ್ನಾಟಕದ ಅತ್ಯುತ್ತಮ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹತ್ವಾಕಾಂಕ್ಷೆ ಹೆಚ್ಚಿಸಿದ ಚಂದ್ರಯಾನ
ಇಸ್ರೋ ಸಂಸ್ಥೆಯು ಇತ್ತೀಚೆಗೆ ಯಶಸ್ವಿಯಾಗಿ ಚಂದ್ರಯಾನವನ್ನು ಪೂರ್ಣಗೊಳಿಸಿದೆ. ಇದು ಭಾರತದ ದೇಶದ ಲಕ್ಷಾಂತರ ಯುವ ಎಂಜಿನಿಯರುಗಳಲ್ಲಿ ಮಹತ್ವಾಕಾಂಕ್ಷೆಯನ್ನು ಹುಟ್ಟಿಸಿದೆ. ಸಾಫ್ರಾನ್ ಕಂಪನಿಯು ವೈಮಾಂತರಿಕ್ಷ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡಲು ಇದನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾರತದಲ್ಲಿನ ಫ್ರಾನ್ಸ್ ಕಾನ್ಸುಲ್ ಜನರಲ್ ಥಿಯರಿ ಬೆರ್ತಲೋಟ್ , ಸಾಫ್ರನ್ ಕಂಪನಿ ಅಧ್ಯಕ್ಷೆ ಸಿಸಿಲ್ ಡುಬ್ರೊವಿನ್ (Cecil Dubrovin), ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಾಫ್ರನ್ ಎಂಜಿನಿಯರಿಂಗ್ ಸರ್ವೀಸ್ ಇಂಡಿಯಾ ಸಿಇಒ ಸಂದೀಪ ಕುಮಾರ ಶಿವಪುರಂ ಇದ್ದರು.

ರಾಜ್ಯ ಸರ್ಕಾರದಿಂದ ಹೂಡಿಕೆದಾರರಿಗೆ ಉತ್ತೇಜನ, ಸಲಹೆ
ಇತ್ತೀಚೆಗೆ ಬೆಂಗಳೂರಿನಲ್ಲಿ ನೆದರಲ್ಯಾಂಡ್ ಕಂಪನಿಗಳ ಹೂಡಿಕೆದಾರರ ಉತ್ತೇಜನ ಮತ್ತು ಭಾರತದಲ್ಲಿನ ಹೂಡಿಕೆದಾರರ ಸವಾಲು, ಸಮಸ್ಯೆಗಳ ಈಡೇರಿಕೆ ಕುರಿತು ಆ ದೇಶದ ಪ್ರಧಾನಿ ಜೊತೆಗೆ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇನ್ನಿತರರು ಚರ್ಚೆ ಮಾಡಿದರು.
ಬಂಡವಾಳ ಹೂಡಿಕೆದಾರರಿಗೆ ಇಲ್ಲಿ ವಿಫುಲ ಅವಕಾಶಗಳಿವೆ. ಕರ್ನಾಟಕದಲ್ಲಿ ಪ್ರವಾಸಿ ಸ್ಥಳಗಳು ಹೇರವಾಗಿವೆ. ಜೈವಿಕ ಇಂಧನ ಹೆಚ್ಚಳ, ಸಕ್ಕರೆ ಕಾರ್ಖಾನೆ ಸೇರಿದಂತೆ ಇನ್ನಿತರ ಕೈಗಾರಿಕೆ ಬೆಳವಣಿಗೆಯತ್ತ ಹೂಡಿಕೆದಾರರು ಗಮನ ಹರಿಸಬೇಕು. ಇಲ್ಲಿರುವ ಅತ್ಯಧಿಕ ಸಂಪನ್ಮೂಲಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಚಿವ ಎಂಬಿ ಪಾಟೀಲ್ ನದರ್ಲ್ಯಾಂಡ್ ಕಂಪನಿಗಳ ಹೂಡಿಕೆದಾರರಿಗೆ ಸಲಹೆ ನೀಡಿದರು.












Click it and Unblock the Notifications