ಸದ್ಗುರು ಜಗ್ಗಿ ವಾಸುದೇವ್ಗೆ ನರ್ತಿಸಲು ಬರುತ್ತದೆಯೇ?
ಬೆಂಗಳೂರು, ಜುಲೈ 21: ಐಐಎಂನ ಹಳೆ ವಿದ್ಯಾರ್ಥಿ ಸಂಘ ಆಯೋಜಿಸಿರುವ ಐಐಎಂಬ್ಯು 2018 ನಾಯಕತ್ವ ಸಮ್ಮೇಳನದಲ್ಲಿ ಶನಿವಾರ ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮತ್ತು ಬಾಲಿವುಡ್ ನಟ ರಣವೀರ್ ಸಿಂಗ್ ನಡುವಣ ಸಂವಾದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಯಾವುದೇ ನಿರ್ದಿಷ್ಟ ರೀತಿ ರಿವಾಜಿನಲ್ಲಿ ಸಿಲುಕದೆ ಚರ್ಚೆ ನಡೆದಿದ್ದು ಹಾಗೂ ಅಧ್ಯಾತ್ಮ ಗುರು ಮತ್ತು ಸೂಪರ್ಸ್ಟಾರ್ ಇಬ್ಬರೂ ತಂತ್ರಜ್ಞಾನದಿಂದ ಹಿಡಿದು ಜೀವನದ ಸಮಸ್ಯೆಗಳನ್ನು ಎದುರಿಸುವ ಮಾರ್ಗಗಳ ಕುರಿತು ಪ್ರಸ್ತಾಪಿಸಿದ್ದು ಆಸಕ್ತಿ ಹೆಚ್ಚಿಸಿತು.
ಲವಲವಿಕೆ, ದುಡುಕುತನ, ಉತ್ಸಾಹದ ಯುವಕನಾಗಿ ರಣವೀರ್ ಭಾಗವಹಿಸಿದರೆ, ಸದ್ಗುರು ಶಾಂತ, ಸಾವಧಾನದಿಂದ ಪ್ರತಿ ಮಾತುಗಳನ್ನೂ ಅಳೆದು ತೂಗಿ ಆಡುತ್ತಿದ್ದರು. ನಟನಿಂದ ತೂರಿಬರುತ್ತಿದ್ದ ವಿಚಿತ್ರ ಪ್ರಶ್ನೆಗಳಿಗೂ ಅವರು ಬದಲಾಗುತ್ತಿರಲಿಲ್ಲ.
ನಾಯಕತ್ವ ಸಮ್ಮೇಳನದ ಎರಡನೆಯ ದಿನದ ಚರ್ಚೆಯಲ್ಲಿ ಇಬ್ಬರು ಸಾಧಕರ ನಡುವಣ ಮಾತುಕತೆ ಎರಡು ವಿರುದ್ಧ ಧೋರಣೆಯ ಮನಸ್ಸುಗಳ ಚರ್ಚೆಯಂತೆ ಕಂಡರೂ, ಅವರ ನಡುವಣ ಮಾತುಕತೆ ಪ್ರೇಕ್ಷಕರಿಗೆ ಮುದ ನೀಡಿತು.
ಸದ್ಗುರು ಅವರನ್ನು ಕೈಮುಗಿದು ನಮಿಸಿ ವೇದಿಕೆಗೆ ಆಹ್ವಾನಿಸಿದ ರಣವೀರ್, ತಕ್ಷಣ ಕೇಳಿದ ಪ್ರಶ್ನೆ, 'ಗುರೂಜಿ ನೀವು ನೃತ್ಯ ಮಾಡುತ್ತೀರಾ? ನನಗೆ ಗೊತ್ತು ನೀವು ಮಾಡುತ್ತೀರಿ... ನೀವು ಸಂತೋಷಕೂಟಗಳಲ್ಲಿ ಯಾವಾಗಲೂ ಪಾಲ್ಗೊಳ್ಳುವವರು. ಸೈಕೆಡೆಲಿಕ್ ಟ್ರಾನ್ಸ್ ಮ್ಯೂಸಿಕ್ಗೆ ನಾನು ಗಂಟೆಗಟ್ಟಲೆ ನರ್ತಿಸಬಲ್ಲೆ'
ಪೊಲೀಸ್ ವೃತ್ತಿ ಪುರುಷ ಪ್ರಧಾನ: ರೂಪಾ ಮೌದ್ಗಿಲ್
ಅದಕ್ಕೆ ಸದ್ಗುರು ನಗುತ್ತಾ ಹೇಳಿದರು, 'ನಾನು ಜೀವನದ ಲಯಕ್ಕೆ ಅನುಗುಣವಾಗಿ ನರ್ತಿಸಬಲ್ಲೆ. ನೀವು ಜೀವನದ ಮಿಡಿತ ಕಂಡುಕೊಂಡರೆ ಮತ್ತೆ ನರ್ತಿಸಲು ಸಂಗೀತದ ಅಗತ್ಯವೇ ಇರುವುದಿಲ್ಲ.
ಭಾವ ಎನ್ನುವುದು ಭಾವನೆಗಳ ಸಂಯೋಜನೆ. ತಾಳ ಎನ್ನುವುದು ಜೀವನದ ಮಿಡಿತ. ಭಾವ ಮತ್ತು ತಾಳಗಳನ್ನು ಕಂಡುಕೊಂಡಿರಿ ಎಂದಾದರೆ ನಿಮಗೆ ನರ್ತಿಸಲು ಸಂಗೀತವೇ ಬೇಕಿಲ್ಲ'.
ಇದು ಮುಂದಿನ ಚರ್ಚೆಗಳಿಗೆ ನಾಂದಿ ಹಾಡಿತು. ಮುಂದೆ ಅವರು ಯಾವುದರ ಕುರಿತು ಚರ್ಚಿಸಲಿದ್ದಾರೆ ಎನ್ನುವುದು ಯಾರಿಗೂ ತಿಳಿಯುತ್ತಿರಲಿಲ್ಲ.
ಜೀವನದ ಲಯಗಳ ಕುರಿತು ಮುಂದೆ ವಿಸ್ತರಿಸಿದ ಸದ್ಗುರು, ನೃತ್ಯ ಮತ್ತು ಸಂಗೀತದಿಂದ ಬರುವ ಸಂತೋಷ ಯಾವಾಗಲೂ ತಾತ್ಕಾಲಿಕ ಎಂದರು. ಜನರು ಹೇಗೆ ಸ್ವಾರಸ್ಯವಿಲ್ಲದ ನಿತ್ಯ ಜೀವನದಲ್ಲಿ ಸಿಲುಕುತ್ತಾರೆ ಎಂಬುದನ್ನು ಅವರು ವಿವರಿಸಿದರು.
ಹೆಚ್ಚುತ್ತಿರುವ ಬುದ್ಧಿವಂತಿಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ಎಲ್ಲ ಉದ್ವೇಗ, ಕ್ಷೋಭೆ, ಅವಿಶ್ರಾಂತಿಗಳಿಗೂ ಬುದ್ಧಿವಂತಿಕೆಯೇ ಕಾರಣ.
ಅನೇಕ ಯೋಚನೆಗಳು ನಮ್ಮ ಮನಸ್ಸನ್ನು ಬಂಧಿಸಿವೆ. ಪ್ರಸ್ತುತದಲ್ಲಿ ಬದುಕುವ ಬದಲು ನಾವು ಭವಿಷ್ಯ ಹಾಗೂ ನಮ್ಮ ಕಾರ್ಯದಿಂದ ಬರುವ ಫಲಿತಾಂಶದ ಬಗ್ಗೆ ಚಿಂತೆಗೀಡಾಗುತ್ತಿದ್ದೇವೆ.
ಜೀವನದ ಲಯದ ಸಂವೇದನೆ ಪಡೆದುಕೊಳ್ಳಿ. ಬಳಿಕ ನೀವು ಮೌನವಾಗಿ ಕುಳಿತು ಜೀವನದ ಪರವಶತೆಯನ್ನು ಆನಂದಿಸಬಹುದು ಎಂದು ಸದ್ಗುರು ಹೇಳಿದರು.
ರಣವೀರ್: ಫುಟ್ಬಾಲ್ ವಿಶ್ವಕಪ್ ನೋಡಲು ನೀವು ರಷ್ಯಾಕ್ಕೆ ಹೋಗಿದ್ದಿರಿ ಎಂದು ಕೇಳಿದ್ದೆ. ಕ್ರೀಡೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅದು ಒಬ್ಬರನ್ನೊಬ್ಬರು ಸೋಲಿಸುವ ಸ್ಪರ್ಧೆಯಲ್ಲವೇ?
ಸದ್ಗುರು: ಹೌದು ನಾನು ರಷ್ಯಾಕ್ಕೆ ತೆರಳಿದ್ದೆ. ನನಗೆ ಫುಟ್ಬಾಲ್ ಇಷ್ಟ. ಅನೇಕರು ನನ್ನನ್ನು ಕೇಳಿದರು, ನೀವು ಯಾವ ತಂಡವನ್ನು ಬೆಂಬಲಿಸುತ್ತೀರಿ ಮತ್ತು ಯಾರನ್ನು ಪ್ರೋತ್ಸಾಹಿಸುತ್ತೀರಿ ಎಂದು. ನಾನು ಫುಟ್ಬಾಲ್ ಅನ್ನು ಪ್ರೋತ್ಸಾಹಿಸಲು ಅಲ್ಲಿದ್ದೆ. ಅದೊಂದು ಅದ್ಭುತ ಆಟ. ರಷ್ಯಾ ಇಡೀ ಟೂರ್ನಿಯನ್ನು ಅದ್ಭುತವಾಗಿ ಆಯೋಜಿಸಿತ್ತು.
ಗೆಲ್ಲುವುದು ಒಂದು ಬಯಕೆ ಮತ್ತು ಆಟ ಒಂದು ಪ್ರಕ್ರಿಯೆ. ನಮ್ಮ ಗುರಿ ಯಾವಾಗಲೂ ಪ್ರಕ್ರಿಯೆ ಕಡೆಗೆ ಇರಬೇಕು. ಪ್ರಕ್ರಿಯೆ ಸೂಕ್ತವಾಗಿದ್ದರೆ, ಅದಕ್ಕೆ ಬರುವ ಫಲಿತಾಂಶವೂ ಸೂಕ್ತವಾಗಿರುತ್ತದೆ.
ಪ್ರಕ್ರಿಯೆಗಿಂತಲೂ ಬಯಕೆ ಎಂದಿಗೂ ಮುಖ್ಯವಾಗಬಾರದು. ನಾನು ನಿನಗಿಂತ ಉತ್ತಮನಾಗಲು ಬಯಸುತ್ತೇನೆ ಎಂಬ ಧೋರಣೆ ತಪ್ಪು. ನೀವು ಯಾರು, ನೀವು ಸಾಧ್ಯವಾದ ಒಳ್ಳೆಯ ಮಾರ್ಗದಲ್ಲಿ ಏನನ್ನು ಮಾಡಬಹುದು ಎಂಬುದನ್ನು ನಿಮ್ಮ ಸಂಪೂರ್ಣ ಸಾಮರ್ಥ್ಯ ಬಳಸಿ ಸಾಧಿಸಿ.
ನಿಮ್ಮ ಗುರಿ ಬೇರೆಯವರಿಗಿಂತ ಉತ್ತಮವಾಗಿರುವುದನ್ನು ಬಯಸಿದ್ದರೆ ನೀವು ಎಂದಿಗೂ ಯಶಸ್ಸನ್ನು ಸಂಭ್ರಮಿಸಲಾರಿರಿ.
ರಣವೀರ್: ಬಾಲಿವುಡ್ನಲ್ಲಿ ಸಾಕಷ್ಟು ಹೋಲಿಕೆಗಳು ನಡೆಯುತ್ತವೆ. ಆದರೆ, ನಾನು ಸಾಧ್ಯವಾದಷ್ಟು ನನ್ನ ಗುರಿಯ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ಗುರೂಜಿ ಯಶಸ್ಸು ಎಂದರೆ ಏನು?
ಸದ್ಗುರು: ಯಶಸ್ಸು ಎನ್ನುವುದು ಪ್ರಯೋಜನಕಾರಿಯಾಗಿರಬೇಕು. ನೀವು ಯಶಸ್ಸನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತ. ಜೀವನಕ್ಕೆ ಉಪಯುಕ್ತವಲ್ಲ ಎಂದ ಮೇಲೆ ಅದರ ಪ್ರಯೋಜನವೇನು?
ರಣವೀರ್: ಈ ಕಾರ್ಯಕ್ರಮದ ಥೀಮ್ ಭವಿಷ್ಯವನ್ನು ನಿರ್ಧರಿಸುವುದು. ಭವಿಷ್ಯದ ಕುರಿತು ನಿಮ್ಮ ದೃಷ್ಟಿಕೋನವೇನು?
ಸದ್ಗುರು: ಭವಿಷ್ಯವನ್ನು ತಿಳಿದುಕೊಳ್ಳುವುದು ಜೀವನದ ಖುಷಿಯನ್ನೇ ಮಂಕಾಗಿಸುತ್ತದೆ (ನಗುತ್ತಾ). ನೀವು ನಿಮ್ಮ ಭವಿಷ್ಯವನ್ನು ತಿಳಿದುಕೊಂಡರೆ ಕೆಲಸ ಮಾಡುವುದನ್ನು ಇಂದೇ ಬಿಟ್ಟುಬಿಡುತ್ತೀರಿ.
ಭವಿಷ್ಯದಲ್ಲಿ ನಿಜವಾಗಿ ಏನಾಗಲಿದೆ ಎಂದು ತಿಳಿದುಕೊಂಡರೆ ನೀವು ಹತಾಶರಾಗುತ್ತೀರಿ. ಇಂದು ಬದುಕಿ. ಭವಿಷ್ಯ ತನ್ನಷ್ಟಕ್ಕೆ ತನ್ನ ಆರೈಕೆ ನೋಡಿಕೊಳ್ಳುತ್ತದೆ. ಪ್ರತಿಯೊಬ್ಬರ ಜೀವನದ ಭವಿಷ್ಯದಲ್ಲಿ ಒಂದಂತೂ ಖಚಿತ. ಕೊನೆಯಲ್ಲಿ ಅಂತ್ಯ ಸಂಸ್ಕಾರ ಇರುತ್ತದೆ.
ಜನರು ಭವಿಷ್ಯ ಹೇಳುವವರ ಬಳಿ ಹೋಗಿ ತಮ್ಮ ಮದುವೆ ಯಾವಾಗ ಆಗುತ್ತದೆ ಎಂದು ಕೇಳುತ್ತಾರೆ. ಮದುವೆ ಹೇಗಿರುತ್ತದೆ ಎಂದು ಕೇಳುತ್ತಾರೆ. ನಿಮ್ಮ ಬದುಕಿನಲ್ಲಿ ಹೇಗಿರುತ್ತೀರಿ ಎಂದು ತಿಳಿದುಕೊಳ್ಳಲು ನಿಜಕ್ಕೂ ಮೂರನೇ ವ್ಯಕ್ತಿಯನ್ನು ಕೇಳುವ ಅಗತ್ಯವಿದೆಯೇ?