ಆಕ್ಸಿಡೆಂಟ್ ಕೇಸ್ನಲ್ಲಿ ಬೋಗಸ್; ವಿಮಾ ಕಂಪನಿಗಳಿಗೆ 11.70 ಕೋಟಿ ದೋಖಾ
ಹೊಸೂರು, ಜ. 27: ತಮಿಳುನಾಡಿನ ಪೊಲೀಸರು ಹಾಗೂ ಮಧ್ಯವರ್ತಿಗಳು ಅಕ್ರಮ ಕೂಟ ಕಟ್ಟಿಕೊಂಡು ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 11 ಕೋಟಿ ರೂ. ಹಣವನ್ನು ಎಗರಿಸಿ ವಿಮಾ ಕಂಪನಿಗಳಿಗೆ ನಾಮ ಹಾಕಿರುವ ಸಂಗತಿ ಬಯಲಿಗೆ ಬಂದಿದೆ.
ಪೊಲೀಸ್ ಅಧಿಕಾರಿಗಳು ಎಸಗಿರುವ ಸ್ಮಾರ್ಟ್ ವಂಚಕ ಕೃತ್ಯ ನೋಡಿ ತಮಿಳುನಾಡಿನ ಹೈಕೋರ್ಟ್ ಕೆಂಡಾಮಂಡಲವಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸುಮಾರ 84 ರಸ್ತೆ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಮಾ ಪಡೆಯಲು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದರಲ್ಲಿ ಪೊಲೀಸರು, ವಕೀಲರು ಹಾಗೂ ವಿಮಾ ಕಂಪನಿ ಏಜೆಂಟರು ಶಾಮೀಲಾಗಿದ್ದು, ವಿವಿಧ ವಿಮಾ ಕಂಪನಿಗಳಿಗೆ 11. 70 ಕೋಟಿ ರೂ. ಹಣ ಪಡೆಯಲಾಗಿದೆ.
ಈ ಸಂಬಂಧ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಈ ಕುರಿತು ತನಿಖೆ ನಡೆಸುವಂತೆ ಸೂಚಿಸಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿತ್ತು. ಈ ವಿಶೇಷ ತನಿಖಾ ತಂಡ ತನಿಖೆ ನಡೆಸಿ ವರದಿಯನ್ನು ತಮಿಳುನಾಡಿನ ಹೈಕೋರ್ಟ್ಗೆ ಸಲ್ಲಿಸಿದೆ. ಇದರಲ್ಲಿ ಬರೋಬ್ಬರಿ 84 ಪ್ರಕರಣದಲ್ಲಿ ನಕಲಿ ದಾಖಲೆ ಸೃಷ್ಟಿಸಿ 11.70 ಕೋಟಿ ರೂ. ಪಡೆದಿರುವುದಕ್ಕೆ ಮಹತ್ವದ ಸಾಕ್ಷ್ಯಾಧಾರಗಳು ಸಿಕ್ಕಿವೆ.
ಹೊಸೂರು ಸೇರಿದಂತೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ನಡೆದಿರುವ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲರು, ಪೊಲೀಸರು ಹಾಗೂ ವಿಮಾ ಕಂಪನಿ ಏಜೆಂಟರು ಶಾಮೀಲಾಗಿ ನಕಲಿ ದಾಖಲೆ ಸೃಷ್ಠಿಸಿದ್ದಾರೆ. ಈ ಸಂಬಂಧ ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರುಕುವಂತೆ ಕ್ರಮ ವಹಿಸಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ತಮಿಳುನಾಡು ಸರ್ಕಾರಕ್ಕೂ ಹೈಕೋರ್ಟ್ ತರಾಟೆ ಬೀಸಿದೆ. ಈ ಪ್ರಕರಣದ ವಿಚಾರಣೆ ಏ. 4 ಕ್ಕೆ ಮುಂದೂಡಿದೆ.
ಅಕ್ರಮ ಬೆಳಕಿಗೆ ಬಂದಿದ್ದು ಹೇಗೆ?: ಚೋಳಮಂಡಲಂ ಜನರಲ್ ವಿಮಾ ಸಂಸ್ಥೆಗೆ ಸೇರಿದ ಸುಮಾರು 120 ಕ್ಕೂ ಹೆಚ್ಚು ಅಪಘಾತ ವಿಮೆಗಳನ್ನು ನಕಲಿ ದಾಖಲೆ ಸಲ್ಲಿಸಿ ಪಡೆಯಲಾಗಿತ್ತು. ಮಿಗಿಲಾಗಿ ಒಂದೇ ಅಪರಾಧ ಪ್ರಕರಣದಲ್ಲಿ ಎರಡು ಕ್ಲೇಮ್ ಅರ್ಜಿಗಳು ಸಲ್ಲಿಕೆಯಾಗಿ ಅಧೀನ ನ್ಯಾಯಾಲಯದಲ್ಲಿ ಒಂದು ಪ್ರಕರಣ ಸಿಕ್ಕಿಬಿದ್ದಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಅಪಘಾತ ಪ್ರಕರಣಗಳಲ್ಲಿ ಸುಳ್ಳು ದಾಖಲೆ ಸೃಷ್ಠಿಸಿ ವಿಮೆ ಹಣ ಪಡೆದು ಮೋಸ ಮಾಡುತ್ತಿರುವ ಬಗ್ಗೆ ಖಾಸಗಿ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು. ಎಸ್ಐಟಿ ರಚನೆ ಮಾಡಿ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಹಲವು ಪ್ರಕರಣದಲ್ಲಿ ಮೋಸ ಆಗಿರುವುದು ಗೊತ್ತಾಗಿದೆ.
Recommended Video