ಹತ್ತು ರುಪಾಯಿ ನಾಣ್ಯ ತಿರಸ್ಕರಿಸಿದರೆ ರಾಷ್ಟ್ರದ್ರೋಹದ ಪ್ರಕರಣ
ಬೆಂಗಳೂರು, ಜೂನ್ 3: ಹತ್ತು ರುಪಾಯಿಯ ನಾಣ್ಯದ ಬಗ್ಗೆ ಇನ್ನೂ ಗೊಂದಲ ಬಗೆಹರಿದಿಲ್ಲ. ವ್ಯಾಪಾರಿಗಳು ಮುಲಾಜಿಲ್ಲದೆ ಹತ್ತು ರುಪಾಯಿ ನಾಣ್ಯವನ್ನು ತಿರಸ್ಕರಿಸುತ್ತಾರೆ. ಕೇಳಿದರೆ, ಅದು ನಕಲಿ ಎಂದು ಹೆದರಿಸ್ತಾರೆ. ಇನ್ನೊಂದಿಷ್ಟು ಗಟ್ಟಿ ಧ್ವನಿಯಲ್ಲಿ ದಬಾಯಿಸಿ ಕೇಳಿದರೆ, ಆ ನಾಣ್ಯವನ್ನು ಸರಕಾರ ನಿಷೇಧಿಸುತ್ತದೆ ಅಂತ ಹೇಳಿ ಮತ್ತೂ ಭಯ ಹುಟ್ಟಿಸುತ್ತಾರೆ.
ಒನ್ ಇಂಡಿಯಾದಿಂದ ಒಂದು ಮಾಹಿತಿ ನೀಡ್ತಿದ್ದೀವಿ, ಗಮನದಲ್ಲಿ ಇಟ್ಟುಕೊಳ್ಳಿ. ಹತ್ತು ರುಪಾಯಿ ನಾಣ್ಯವನ್ನು ತಿರಸ್ಕರಿಸುವ ಯಾರೇ ಆಗಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೆ ನಿಮಗೆ ಕಾನೂನಾತ್ಮಕ ಹಕ್ಕಿದೆ. ಅಸಲಿಗೆ ರಾಷ್ಟ್ರದ್ರೋಹ ಪ್ರಕರಣವನ್ನೇ ದಾಖಲು ಮಾಡಬಹುದು.[ಮಂಗಳೂರು: 10 ರೂಪಾಯಿ ನಾಣ್ಯ ಕೊಟ್ಟರೆ ದಬಾಯಿಸ್ತಾರೆ..!]
ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದ್ದ ವದಂತಿಯನ್ನೇ ಮುಂದು ಮಾಡಿ ವ್ಯಾಪಾರಿಗಳು, ಅದರಲ್ಲಿ ರುಪಾಯಿ ಚಿಹ್ನೆ ಇಲ್ಲ ಅಂತ ತಿರಸ್ಕರಿಸಿದರೆ ಅವರಿಗೆ ಸ್ಪಷ್ಟವಾಗಿ ಹೇಳಿ: 2009ರಲ್ಲಿ ಟಂಕಿಸಿದ ನಾಣ್ಯವದು. ಅದರಲ್ಲಿ ರುಪಾಯಿ ಚಿಹ್ನೆ ಇರಲೇಬೇಕು ಅಂತೇನಿಲ್ಲ. ಕಾನೂನು ಪ್ರಕಾರವೇ ಆ ನಾಣ್ಯ ಇದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಕೂಡ ಸ್ಪಷನೆ ನೀಡಿದೆ.
ಇನ್ನು ಮುಂದೆ ಯಾರೇ ಆಗಲಿ, ಹತ್ತು ರುಪಾಯಿ ನಾಣ್ಯವನ್ನು ಸ್ವೀಕರಿಸಲಿಲ್ಲ ಅಂದರೆ ಅಂಥವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಬಹುದು. ರಿಸರ್ವ್ ಬ್ಯಾಂಕ್ ಹೇಳಿದ್ದರೂ ಹತ್ತು ರುಪಾಯಿ ನಾಣ್ಯ ಸ್ವೀಕರಿಸುತ್ತಿಲ್ಲ ಅಂದರೆ ಅದಕ್ಕೆ ಕಾರಣ ನೀವೇ. ಅಂಥ ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿ. ಅದುವರೆಗೆ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲ್ಲ.
ಯಾವುದೇ ನಾಣ್ಯ-ನೋಟು ಕಾನೂನಾತ್ಮಕವಾಗಿ ಸರಿಯಾಗಿದ್ದೂ ತಿರಸ್ಕರಿಸಿದರೆ ಅಂಥವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಹತ್ತು ರುಪಾಯಿ ನಾಣ್ಯ ಈ ದೇಶದ್ದು. ಅದರಲ್ಲಿ ಸರಕಾರವೇ ಭರವಸೆ ನೀಡುವ ವಾಕ್ಯಗಳಿವೆ. ಅದನ್ನು ತಿರಸ್ಕರಿಸುವ ಹಕ್ಕು ಯಾರಿಗೂ ಇಲ್ಲ.[ವಿಡಿಯೋ : 10 ರು ನಾಣ್ಯ ರಿಜೆಕ್ಟ್ ಮಾಡೋಕೆ ನೀವೇನು ರಿಸರ್ವ್ ಬ್ಯಾಂಕಾ?]
ರಿಸರ್ವ್ ಬ್ಯಾಂಕ್ ನಿಯಮಾವಳಿ ಪ್ರಕಾರ ಭಾರತೀಯ ಕರೆನ್ಸಿ ಸ್ವೀಕರಿಸಲು ನಿರಾಕರಿಸಿದರೆ ಅಂಥವರ ವಿರುದ್ಧ ಐಪಿಸಿ ಸೆಕ್ಷನ್ 124A (ರಾಷ್ಟ್ರದ್ರೋಹ) ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ತೆರಳಿ, ಯಾವ ಹತ್ತು ರುಪಾಯಿ ನಾಣ್ಯ ಸ್ವೀಕರಿಸಲಿಲ್ಲ ಅನೋದನ್ನು ತೋರಿಸಿ, ಯಾವ ವ್ಯಕ್ತಿ ತಿರಸ್ಕರಿಸಿದ ಎಂಬ ಮಾಹಿತಿ ಕೊಡಿ.
ರಿಸರ್ವ್ ಬ್ಯಾಂಕ್ ಹೇಳಿರುವ ನಿಯಮಗಳನ್ನು ತೋರಿಸಿ. ಈ ರೀತಿ ಮಾಡುವುದು ರಾಷ್ಟ್ರದ್ರೋಹ ಆಗುತ್ತದೆ ಎಂದು ತಿಳಿಸಿ. ಎಫ್ ಐ ಆರ್ ದಾಖಲಿಸಿ, ಪೊಲೀಸರು ವಿಚಾರಣೆ ಆರಂಭಿಸುತ್ತಾರೆ. ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಜೀವಾವಧಿ ಜೈಲು ಶಿಕ್ಷೆ ಕೂಡ ವಿಧಿಸಬಹುದು.