ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ ನಟಿ ಅಮೂಲ್ಯ ಮಾವ
ಬೆಂಗಳೂರು, ಅಕ್ಟೋಬರ್ 21 : ರಾಜರಾಜೇಶ್ವರಿ ನಗರ ಕ್ಷೇತ್ರದ ಜೆಡಿಎಸ್ ನಾಯಕ, ನಟಿ ಅಮೂಲ್ಯ ಮಾವ ಜಿ. ಎಚ್. ರಾಮಚಂದ್ರ ಬಿಜೆಪಿ ಸೇರಿದರು. ಆರ್. ಆರ್. ನಗರ ಉಪ ಚುನಾವಣೆ ಸಂದರ್ಭದಲ್ಲಿಯೇ ಅವರು ಜೆಡಿಎಸ್ ತೊರೆದಿದ್ದಾರೆ.
ಬುಧವಾರ ಕರ್ನಾಟಕ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿ. ಎಚ್. ರಾಮಚಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಕ್ಷಕ್ಕೆ ಬರಮಾಡಿಕೊಂಡರು. ಸಚಿವ ಆರ್. ಅಶೋಕ, ಆರ್. ಆರ್. ನಗರ ಅಭ್ಯರ್ಥಿ ಮುನಿರತ್ನ ಈ ಸಂದರ್ಭದಲ್ಲಿ ಜೊತೆಗಿದ್ದರು.
ಜೆಡಿಎಸ್ ನಾಯಕರಾಗಿದ್ದ ಜಿ. ಎಚ್. ರಾಮಚಂದ್ರ ನಿವಾಸಕ್ಕೆ ಭಾನುವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಭೇಟಿ ನೀಡಿದ್ದರು. ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಬೆಂಬಲಿಗರ ಜೊತೆ ರಾಮಚಂದ್ರ ಬುಧವಾರ ಬಿಜೆಪಿ ಸೇರಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಜಿ. ಎಚ್. ರಾಮಚಂದ್ರ ಆರ್. ಆರ್. ನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. 60,360 ಮತಗಳನ್ನು ಪಡೆದಿದ್ದರು. ಆಗ ಮುನಿರತ್ನ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುನಿರತ್ನ ಬಿಜೆಪಿಯಲ್ಲಿದ್ದಾರೆ. ಆರ್. ಆರ್. ನಗರ ಉಪ ಚುನಾವಣೆಗೆ ಅವರೇ ಪಕ್ಷದ ಅಭ್ಯರ್ಥಿ. ಕಾಂಗ್ರೆಸ್ನಿಂದ ಹೆಚ್. ಕುಸುಮಾ, ಜೆಡಿಎಸ್ನಿಂದ ವಿ. ಕೃಷ್ಣಮೂರ್ತಿ ಅಭ್ಯರ್ಥಿಗಳು.
ನವೆಂಬರ್ 3ರಂದು ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಮೂರು ಪಕ್ಷಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ನಡೆಸುತ್ತಿವೆ.
Recommended Video
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮಾಜಿ ಬಿಬಿಎಂಪಿ ಸದಸ್ಯರು ಸಹ ಬುಧವಾರ ಬಿಜೆಪಿ ಸೇರಿದ್ದಾರೆ. ಆರ್. ಆರ್. ನಗರ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.
ಫೇಸ್ ಬುಕ್ ಪೋಸ್ಟ್ : ಬಿಜೆಪಿ ಸೇರಿದ ಬಳಿಕ ಜಿ. ಎಚ್. ರಾಮಚಂದ್ರ ಫೇಸ್ ಬುಕ್ ಪೋಸ್ಟ್ ಹಾಕಿದ್ದು, "ಬಿಜೆಪಿ ಕುಟುಂಬದ ಕಡೆಗೆ... ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ, ಮಾನ್ಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪನವರ ಸರ್ಕಾರದ ಬಲ ಹೆಚ್ಚಿಸುವುದು ನಮ್ಮ ಮೂಲ ಗುರಿ" ಎಂದು ಬರೆದಿದ್ದಾರೆ.












Click it and Unblock the Notifications