ಆರ್. ಆರ್. ನಗರ ಟಿಕೆಟ್ ಘೋಷಣೆ; ಕುಸುಮಾ ಫೇಸ್ ಬುಕ್ ಪೋಸ್ಟ್
ಬೆಂಗಳೂರು, ಅಕ್ಟೋಬರ್ 07 : "ಕ್ಷೇತ್ರದ ಎಲ್ಲಾ ಮುಖಂಡರುಗಳ ಹಾಗೂ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ವಿಜಯ ಪತಾಕೆ ಹಾರುವಂತೆ ಮಾಡುವ ಜವಾಬ್ದಾರಿ ನನ್ನದು" ಎಂದು ಹೆಚ್. ಕುಸುಮಾ ಹೇಳಿದ್ದಾರೆ.
ಬುಧವಾರ ಎಐಸಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಐಎಎಸ್ ಅಧಿಕಾರಿಯಾಗಿದ್ದ ದಿ. ಡಿ. ಕೆ. ರವಿ ಪತ್ನಿ ಹೆಚ್. ಕುಸುಮಾ ಅಭ್ಯರ್ಥಿ. ಟಿಕೆಟ್ ಘೋಷಣೆ ಬಳಿಕ ಕುಸುಮಾ ಅವರು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
ಕುಸುಮ ಹನುಮಂತರಾಯಪ್ಪ ಎಂಬ ಖಾತೆ ಮೂಲಕ ಫೇಸ್ ಬುಕ್ನಲ್ಲಿ ಅವರು ಸಕ್ರಿಯರಾಗಿದ್ದಾರೆ. "ನನ್ನ ದೊಡ್ಡಪ್ಪನವರು ಕೋವಿಡ್-19 ನಿಂದಾಗಿ ಮೃತಪಟ್ಟಿರುವ ಕಾರಣ ಈ ಕ್ಷಣದಲ್ಲಿ ಪತ್ರಕರ್ತಮಿತ್ರರಿಗೆ ಪ್ರತಿಕ್ರಿಸುವುದಕ್ಕಾಗಲೀ, ಕಾರ್ಯಕರ್ತರೊಂದಿಗೆ ಸಂಭ್ರಮಿಸಲಾಗಲೀ ಆಗುತ್ತಿಲ್ಲ" ಎಂದು ತಿಳಿಸಿದ್ದಾರೆ.

"ಕಾಂಗ್ರೆಸ್ ಪಕ್ಷಕ್ಕೆ ನನ್ನ ತಂದೆ ಶ್ರೀ ಹನುಮಂತರಾಯಪ್ಪನವರು ಮಾಡಿರುವ ಸೇವೆಯನ್ನು ಗುರುತಿಸಿ ನನಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ, ಸಂಸದರಾದ ಶ್ರೀ ಡಿ.ಕೆ ಸುರೇಶ್ ಹಾಗೂ ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲಾ ನಾಯಕರುಗಳಿಗೂ ಆಭಾರಿಯಾಗಿದ್ದೇನೆ" ಎಂದು ಪೋಸ್ಟ್ ಹಾಕಿದ್ದಾರೆ.
ಅಕ್ಟೋಬರ್ 1ರಂದು ಹೆಚ್. ಕುಸುಮಾ ತಂದೆ ಹನುಮಂತರಾಯಪ್ಪ ಜೊತೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದರು. ಭಾನುವಾರ ಅವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಅವರು ಉಪ ಚುನಾವಣೆ ಅಭ್ಯರ್ಥಿ ಎಂದು ಇಂದು ಅಧಿಕೃತವಾಗಿ ಘೋಷಣೆಯಾಗಿದೆ.
ಕುಸುಮಾ ಅವರು ಮಂಗಳವಾರ ತಂದೆ ಹನುಮಂತರಾಯಪ್ಪ ಜೊತೆ ಎಂ. ರಾಜ್ ಕುಮಾರ್ ಸೇರಿದಂತೆ ವಿವಿಧ ನಾಯಕರನ್ನು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದರು. ಆರ್. ಆರ್. ನಗರ ಉಪ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮುಖಂಡರಾದ ಚಿಕ್ಕಣ್ಣ, ಪುಟ್ಟೇಗೌಡ, ಗಂಗಾಧರ್ ಹಾಗೂ ರಾಜಕುಮಾರ್ (ಹಲಗೆವಡೇರಹಳ್ಳಿ) ನಿವಾಸಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ನವೆಂಬರ್ 3ರಂದು ಚುನಾವಣೆ ನಡೆಯಲಿದೆ.












Click it and Unblock the Notifications