ಆರ್. ಆರ್. ನಗರ ಚುನಾವಣೆ; ಮುನಿರತ್ನ ಪರವಾಗಿ ದರ್ಶನ್ ರೋಡ್ ಶೋ
ಬೆಂಗಳೂರು, ಅಕ್ಟೋಬರ್ 30: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕೆ ನಟ-ನಟಿಯರ ಆಗಮನವಾಗಿದೆ. ನಟ ದರ್ಶನ್ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಮತಯಾಚನೆ ಮಾಡಿದರು.
ಚಿತ್ರ ನಿರ್ಮಾಪಕ ಮುನಿರತ್ನ ಆರ್. ಆರ್. ನಗರ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ. ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರ ಭಾನುವಾರ ಅಂತ್ಯವಾಗಲಿದೆ. ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ನಟ ದರ್ಶನ್, ನಟಿ ಅಮೂಲ್ಯ, ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಮುನಿರತ್ನ ಅವರ ಜೊತೆ ಶುಕ್ರವಾರ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಬೌನ್ಸರ್ಸ್ ಮತ್ತು ಪೊಲೀಸರು ರೋಡ್ ಶೋಗೆ ಭದ್ರತೆ ನೀಡಿದ್ದರು. ಅಭಿಮಾನಿಗಳು ಮುತ್ತಿಗೆ ಹಾಕದಂತೆ ತಡೆದರು.
ಆರ್. ಆರ್. ನಗರ ವ್ಯಾಪ್ತಿಯ ಬಿ. ಕೆ. ನಗರ, ಜೆ. ಪಿ. ಪಾರ್ಕ್, ಯಶವಂತಪುರ ಮುಂತಾದ ಪ್ರದೇಶಗಳಲ್ಲಿ ರೋಡ್ ಶೋ ನಡೆಯಿತು. ಅಭಿಮಾನಿಗಳತ್ತ ಕೈ ಬೀಸುತ್ತಾ ನಟ ದರ್ಶನ್ ಮುನಿರತ್ನ ಪರವಾಗಿ ಮತಯಾಚನೆ ಮಾಡಿದರು. ನೂರಾರು ಬಿಜೆಪಿ ಕಾರ್ಯಕರ್ತರು ಜೊತೆಗಿದ್ದರು.

ಜನರಿಗೆ ಆಹಾರ ನೀಡಿದ್ದಾರೆ
"ಕೋವಿಡ್ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಆ ಸಮಯದಲ್ಲಿ ಕ್ಷೇತ್ರದ ಜನರಿಗೆ ಮುನಿರತ್ನ ಅವರು ಆಹಾರದ ವ್ಯವಸ್ಥೆ ಮಾಡಿದ್ದರು. ಆಗ ನಿಮ್ಮ ಪರವಾಗಿ ಮುನಿರತ್ನ ನಿಂತಿದ್ದಾರೆ. ಅವರಿಗೆ ಮತ ನೀಡಿ" ಎಂದು ನಟ ದರ್ಶನ್ ಮನವಿ ಮಾಡಿದರು.

ಹಲವು ವರ್ಷಗಳಿಂದ ಗೊತ್ತು
"ಹಲವು ವರ್ಷಗಳಿಂದ ಮುನಿರತ್ನ ಅವರು ನನಗೆ ಗೊತ್ತು. ಉತ್ತಮವಾದ ಗುಣ ಅವರಲ್ಲಿದೆ. ಒಬ್ಬ ವ್ಯಕ್ತಿಯಾಗಿ ಅವರನ್ನು ತುಂಬಾ ಇಷ್ಟ ಪಡುತ್ತೇನೆ. ನಿರ್ಮಾಪಕರಾಗಿ, ಶಾಸಕರಾಗಿಯೂ ಅವರನ್ನು ನೋಡಿದ್ದೇನೆ. ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ" ಎಂದು ದರ್ಶನ್ ಜನರಿಗೆ ಕರೆ ನೀಡಿದರು.

ಜನರ ಪರವಾಗಿ ನಿಂತರು
"ಪ್ರಪಂಚಕ್ಕೆ ಕೊರೊನಾ ಆವರಿಸಿತು. ಖಜಾನೆಯಲ್ಲಿ ಹಣವಿದ್ದರೂ ಎಲ್ಲರೂ ಮನೆ ಸೇರಿಕೊಂಡೆವು. ಊಟ, ಹಾಲು ಖರೀದಿ ಮಾಡಲು ಪರದಾಡಬೇಕಾಯಿತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಮುನಿರತ್ನ ಅವರು ಅಂತಹ ಸಂದರ್ಭದಲ್ಲಿ ಜೊತೆ ನಿಂತರು" ಎಂದು ನಟ ದರ್ಶನ್ ಹೇಳಿದರು.

ಕಷ್ಟದ ಸಂದರ್ಭದಲ್ಲಿ ಜೊತೆ ನಿಂತರು
"ಕೋವಿಡ್ ಸಂಕಷ್ಟದ ಸಮಯದಲ್ಲಿ ಹಸಿವು ಎಂದು ಬಂದವರಿಗೆ ಊಟ ಹಾಕಿದ್ದಾರೆ. ಅಂದು ಮಾನವೀಯತೆ ದೃಷ್ಟಿಯಿಂದ ಅವರು ಊಟ ಹಾಕಿದ್ದಾರೆ. ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಅವರಿಗೆ ಮತ ಹಾಕಿ ಅವರಿಗೆ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ" ಎಂದು ದರ್ಶನ್ ಹೇಳಿದರು.












Click it and Unblock the Notifications