ಅಂತೂ ಆರ್ ಪಿಸಿ ಲೇಔಟ್ ರೈಲ್ವೆ ನಿಲ್ದಾಣ ಉದ್ಘಾಟನೆ
ಬೆಂಗಳೂರು, ಏ. 28 : ಆರ್ ಪಿಸಿ ಲೇಔಟ್ ನಿವಾಸಿಗಳ ಬಹುದಿನಗಳ ಬೇಡಿಕೆ ಇಂದು ಈಡೇರಿದೆ. ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು ಒಂದು ನಿಮಿಷ ಕೃಷ್ಣದೇವರಾಯ ಹಾಲ್ಟ್ ಸ್ಟೇಷನ್ ನಲ್ಲಿ ಸೋಮವಾರದಿಂದ ನಿಲುಗಡೆಗೊಳ್ಳಲಿದೆ. ಆರು ತಿಂಗಳ ಮಟ್ಟಿಗೆ ಇಲ್ಲಿ ಪ್ರಾಯೋಗಿಕವಾಗಿ ರೈಲು ನಿಲುಗಡೆ ಮಾಡಲಾಗುತ್ತದೆ.
ನಗರ ರೈಲು ನಿಲ್ದಾಣ ಮತ್ತು ನಾಯಂಡಹಳ್ಳಿ ಮಧ್ಯೆ ಆರ್ ಪಿಸಿ ಲೇಔಟ್ನಲ್ಲಿಯೂ ನಿಲ್ದಾಣವೊಂದನ್ನು ಅಭಿವೃದ್ಧಿಪಡಿಸಿ ಪ್ಯಾಸೆಂಜರ್ ರೈಲುಗಳ ನಿಲುಗಡೆ ಅವಕಾಶ ಕಲ್ಪಿಸಬೇಕೆಂದು ವಿಜಯನಗರ, ಹಂಪಿನಗರ, ಗಿರಿನಗರ, ಬಾಪೂಜಿನಗರ, ಬ್ಯಾಟರಾಯನಪುರ, ಸುಬ್ಬಣ್ಣ ಲೇಔಟ್ ಮುಂತಾದ ಬಡಾವಣೆಗಳ ಜನರು ಒತ್ತಾಯಿಸುತ್ತಿದ್ದರು. ವಿಜಯನಗರ ತೆರಿಗೆ ಪಾವತಿದಾರರ ಸಂಘ ಈ ಕುರಿತು ಹೋರಾಟವನ್ನು ನಡೆಸುತ್ತಿತ್ತು.

ಸೋಮವಾರ ಈ ಬೇಡಿಕೆ ಈಡೇರಿದ್ದು, ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲನ್ನು ಕೃಷ್ಣದೇವರಾಯ ಹಾಲ್ಟ್ ಸ್ಟೇಷನ್ ನಲ್ಲಿ ಒಪ್ಪಿಗೆ ದೊರೆತಿದೆ. ಇಂದಿನಿಂದ ಪ್ರತಿದಿನ 2 ರೈಲುಗಳು ಒಂದು ನಿಮಿಷಗಳ ಕಾಲ ಕೃಷ್ಣದೇವರಾಯ ಹಾಲ್ಟ್ ಸ್ಟೇಷನ್ ನಲ್ಲಿ ನಿಲ್ಲಲಿವೆ. ಆರು ತಿಂಗಳ ಮಟ್ಟಿಗೆ ಪ್ರಾಯೋಗಿಕವಾಗಿ ರೈಲನ್ನು ನಿಲ್ಲಿಸಲಾಗುತ್ತಿದ್ದು, ನಂತರ ಜನರ ಪ್ರತಿಕ್ರಿಯೆ ನೋಡಿಕೊಂಡು ಅದನ್ನು ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. [ರೈಲ್ವೆ ಪ್ರಯಾಣ ರದ್ದಾದರೆ ರೀಫಂಡ್ ಮಾಡೋಲ್ಲ]
ಎಷ್ಟು ಹೊತ್ತಿಗೆ ಬರುತ್ತೆ ರೈಲು : ಬೆಳಗ್ಗೆ 5 ಗಂಟೆಗೆ ಹೊರಡುವ ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು (56223) ಬೆಳಗ್ಗೆ 5.4ರಿಂದ 5.5ರ ವರೆಗೆ ನಿಲ್ದಾಣದಲ್ಲಿ ನಿಲ್ಲಲಿದೆ. ಸಂಜೆ ರಾತ್ರಿ ರೈಲು ನಂಬರ್ 56231 8.34 ರಿಂದ 8.35ರವರೆಗೆ ಕೃಷ್ಣದೇವರಾಯ ಹಾಲ್ಟ್ ಸ್ಟೇಷನ್ ನಲ್ಲಿ ನಿಲುಗಡೆಗೊಳ್ಳಲಿದೆ.
ನೀತಿ ಸಂಹಿತೆ ಬಿಸಿ : ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಉದ್ಘಾಟನಾ ಸಮಾರಂಭಗಳಿಲ್ಲದೆ ರೈಲು ನಿಲುಗಡೆಯನ್ನು ಆರಂಭಿಸಲಾಗಿದೆ. ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಗೊಳಿಸಿದೆ. ಆದರೆ, ಅದು ಅಧಿಕಾರಿಗಳ ಸಭೆಗಳಿಗೆ ಮಾತ್ರ ಅನ್ವಯವಾಗುವುದರಿಂದ ಯಾವುದೇ ಸಮಾರಂಭ ಮಾಡುತ್ತಿಲ್ಲ ಎಂದು ನೈರುತ್ಯ ರೈಲ್ವೆ ಸ್ಪಷ್ಪಪಡಿಸಿದೆ.
ಸೋಮವಾರದಿಂದ ರೈಲು ಕೃಷ್ಣದೇವರಾಯ ಹಾಲ್ಟ್ ಸ್ಟೇಷನ್ ನಲ್ಲಿ ನಿಲುಗಡೆಗೊಳ್ಳುವುದರಿಂದ ವಿಜಯನಗರ, ಹಂಪಿನಗರ, ಗಿರಿನಗರ, ಬಾಪೂಜಿನಗರ, ಬ್ಯಾಟರಾಯನಪುರ, ಸುಬ್ಬಣ್ಣ ಲೇಔಟ್ ಮುಂತಾದ ಬಡಾವಣೆಗಳ ಜನರಿಗೆ ಅನುಕೂಲವಾಗಲಿದೆ. ನಗರ ರೈಲು ನಿಲ್ದಾಣಕ್ಕೆ ತೆರಳುವ ಜನರು ಬಿಎಂಟಿಸಿ ಬಸ್ಸಿನಲ್ಲಿ ಸಂಚರಿಸುವ ಬದಲು ರೈಲಿನಲ್ಲಿಯೇ ಪ್ರಯಾಣಿಸಬಹುದಾಗಿದೆ.












Click it and Unblock the Notifications