ವಿಡಿಯೋ: ಮಚ್ಚು ತೋರಿಸಿ ಜನರನ್ನು ಲೂಟಿ ಮಾಡಿದ ಪುಡಿ ರೌಡಿ
ಬೆಂಗಳೂರು, ಅ.23: ಬೆಂಗಳೂರಲ್ಲಿ ಒಂದ್ಕಡೆ ಸರಗಳ್ಳರು, ಬೈಕ್ ಖದೀಮರ ಉಪಟಳ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಚ್ಚು, ಲಾಂಗ್ ಹಿಡಿದು ಜನರನ್ನು ಬೆದರಿಸೋ ದರೋಡೆಕೋರರು ಬೀದಿಗಿಳಿದಿದ್ದಾರೆ. ಹಾಡಹಗಲೇ ಮಚ್ಚು ಹಿಡಿದು ಅಂಗಡಿ ಮುಂದೆ ದಾಂಧಲೆ ನಡೆಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಅಂದಹಾಗೆ ಬೆಂಗಳೂರಿನ ಹೆಣ್ಣೂರಿನ ಕಾಚರಕನಹಳ್ಳಿ ರಸ್ತೆಯಲ್ಲಿ ದಿಢೀರ್ ಮಚ್ಚು ಹಿಡಿದು ಬಂದ ಪುಡಾರಿ ಮೊದಲಿಗೆ ಜನರನ್ನ ಬೆಚ್ಚಿ ಬೀಳಿಸಿದ್ದಾನೆ.
ಮೊದಲೇ ಮಳೆ ಬೇರೆ, ಜನರು ಮಳೆಯಿಂದ ಆಶ್ರಯ ಪಡೆಯಲು ಬೇಕರಿ ಒಂದರ ಸಮೀಪ ನಿಂತಿರುತ್ತಾರೆ. ಈ ಸಂದರ್ಭದಲ್ಲಿ ರಾಕ್ಷಸನಂತೆ ನುಗ್ಗಿದ ಕಿರಾತಕನೊಬ್ಬ ಅಮಾಯಕರು ನಿಂತಿದ್ದ ಗುಂಪಿನ ಬಳಿ ಹೋಗಿದ್ದಾನೆ. ಅಲ್ಲಿ ತನ್ನ ಬಳಿಯಿದ್ದ ಮಚ್ಚು ಹೊರಗೆ ತೆಗೆದಿದ್ದಾನೆ. ಮಚ್ಚು ನೋಡಿದ ತಕ್ಷಣ ಜನರು ಜೀವ ಉಳಿಸಿಕೊಳ್ಳಲು ಅಲ್ಲಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ನಂತರ ಬೇಕರಿ ಮಾಲೀಕನ ಬಳಿ ನುಗ್ಗುವ ಕಿರಾತಕ ಮರಿ ಪುಡಾರಿ, ಆ ಮಾಲೀಕನಿಗೆ ದುಡ್ಡು ಕೊಡುವಂತೆ ಬೆದರಿಕೆ ಹಾಕಿದ್ದಾನೆ. ಕೊಡದೇ ಇದ್ದಾಗ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಇವರ ಹಾವಳಿ ಕಂಡು ಯಾರಿಗೂ ಧೈರ್ಯವೇ ಬಂದಿಲ್ಲ, ಅಕ್ಕಪಕ್ಕ ಇದ್ದವರು ಕೂಡ ಸುಮ್ಮನೆ ನೋಡುತ್ತಾ ನಿಲ್ಲುವಂತಾಗಿತ್ತು. ಪುಡಿ ರೌಡಿಯ ಈ ದಾಂಧಲೆ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಬೆದರಿಸಿ ಹಣ ಕಿತ್ತುಕೊಂಡ ಕಿರಾತಕ
ಈತ ಇಷ್ಟನ್ನೇ ಮಾಡಿ ಸುಮ್ಮನಾಗಿಲ್ಲ, ಮೊದಲಿಗೆ ಜನರನ್ನು ಬೆದರಿಸಿ ಓಡಿಸಿದ್ದಾನೆ. ನಂತರ ಬೇಕರಿ ಮೇಲೆ ಅಟ್ಯಾಕ್ ಮಾಡಿದ್ದಾನೆ. ಹೀಗೆ ಮಾಲೀಕನನ್ನು ಬೆದರಿಸಿ ಅವರಿಂದ ವಸೂಲಿ ಮಾಡಿದ್ದಾನೆ. ಬೆದರಿಸಿ ಬೇಕರಿ ಮಾಲೀಕನಿಂದ ದುಡ್ಡು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸಿಸಿ ಕ್ಯಾಮೆರಾದಲ್ಲಿ ತೋರುವಂತೆ ಮಚ್ಚು ಹಿಡಿದ ಮರಿ ಪುಡಾರಿಗೆ ಮತ್ತೊಬ್ಬ ಕಿರಾತಕ ಕೂಡ ಸಾಥ್ ಕೊಟ್ಟಿರುವುದು ಸ್ಪಷ್ಟವಾಗಿ ತೋರುತ್ತಿದೆ.

ಪ್ರತಿನಿತ್ಯ ಇದೇ ಗೋಳು
ಬೆಂಗಳೂರಲ್ಲಿ ಇಂತಹ ಘಟನೆಗಳು ಬರುಬರುತ್ತಾ ಮಾಮೂಲಿಯಾಗಿವೆ. ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ಹಿನ್ನೆಲೆ ಕೃತ್ಯ ಬಯಲಿಗೆ ಬಂದಿದೆ. ಆದರೆ ಬಯಲಿಗೆ ಬಾರದ ಹಾಗೂ ಅಮಾಯಕರೇ ಇಂತಹ ದರೋಡೆಕೋರರ ಕೈಯಲ್ಲಿ ಸಿಲುಕಿ ನಲುಗಿರುವ ಉದಾಹರಣೆಗಳು ಹೆಚ್ಚು.
Recommended Video

ನಗರದ ಹೊರವಲಯದಲ್ಲಿ ಹೆಚ್ಚು ಅಪಾಯ
ನಗರದ ಹೊರವಲಯ ಹಾಗೂ ಜನ ಓಡಾಡದ ಪ್ರದೇಶಗಳನ್ನೇ ಅಡ್ಡೆ ಮಾಡಿಕೊಳ್ಳುವ ಪುಡಿ ರೌಡಿಗಳು, ಒಂಟಿಯಾಗಿ ಓಡಾಡುವ ಅಮಾಯಕರನ್ನೇ ಟಾರ್ಗೆಟ್ ಮಾಡುತ್ತಾರೆ. ಕೆಲವೊಮ್ಮೆ ಅವರಿಂದ ಎಲ್ಲವನ್ನೂ ಕಿತ್ತುಕೊಂಡು ಕಳಿಸುತ್ತಾರೆ, ಇನ್ನೂ ಕೆಲವು ಘಟನೆಗಳಲ್ಲಿ ಕೊಲೆಯೇ ನಡೆದು ಹೋಗಿರುತ್ತದೆ. ಮತ್ತೆ ಕೆಲವು ಘಟನೆಗಳಲ್ಲಿ ಮಾರಣಾಂತಿಕ ಹಲ್ಲೆಗಳು ನಡೆದಿರುವ ಉದಾಹರಣೆಗಳೂ ಇವೆ. ಆದರೆ ಬಹುಪಾಲು ಜನ ಇದನ್ನ ಪೊಲೀಸ್ ಠಾಣೆಯ ತನಕ ತರಲು ಭಯಪಟ್ಟು ಸುಮ್ಮನಾಗುತ್ತಾರೆ. ಇದೇ ದರೋಡೆಕೋರರಿಗೆ ಬಂಡವಾಳವಾಗಿದೆ.
|
ಪೊಲೀಸರು ಇತ್ತ ಗಮನಹರಿಸಬೇಕಿದೆ
ಬೆಂಗಳೂರು ಪೊಲೀಸರು ಅದೆಷ್ಟು ಅಲರ್ಟ್ ಆದರೂ ಇಂತಹ ದರೋಡೆಕೋರರು, ಪುಡಿ ರೌಡಿಗಳು ಮಾತ್ರ ಜನರ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ಅಮಾಯಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಇಂತಹ ಘಟನೆಗಳು ಹೆಚ್ಚುತ್ತಿದ್ದು, ಖಾಕಿಪಡೆ ಇಂತಹ ಖದೀಮರು ಹಾಗೂ ಕಿರಾತಕರ ಹೆಡೆಮುರಿ ಕಟ್ಟಬೇಕಿದೆ ಎಂಬುದು ಸಾರ್ವಜನಿಕರ ಮನವಿಯಾಗಿದೆ.












Click it and Unblock the Notifications