ರೋಹಿಣಿ ಸಿಂಧೂರಿಗೆ ಮತ್ತೆ ಹಿನ್ನಡೆ, ವರ್ಗಾವಣೆ ಆದೇಶ ಸ್ವೀಕರಿಸಲೇಬೇಕು
ಸರ್ಕಾರದ ವರ್ಗಾವಣೆ ಆದೇಶವನ್ನು ಹಾಗೂ ಸಿಎಟಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮತ್ತೆ ಹಿನ್ನಡೆ ಆಗಿದೆ.
ರೋಹಿಣಿ ಸಿಂಧೂರಿ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಕೋರ್ಟ್ ಸಿಎಟಿ ಆದೇಶಕ್ಕೆ ಮಾತ್ರವೇ ತಡೆ ನೀಡಿದ್ದು, ವರ್ಗಾವಣೆ ಆದೇಶಕ್ಕೆ ತಡೆ ನೀಡಲು ನಕಾರ ವ್ಯಕ್ತಪಡಿಸಿದೆ.
ವರ್ಗಾವಣೆ ಆದೇಶಕ್ಕೆ ತಡೆ ಬೀಳದ ಕಾರಣ ರೋಹಿಣಿ ಸಿಂಧೂರಿ ಅವರು ಈಗ ವರ್ಗಾವಣೆ ಆಗಿರುವ ಸ್ಥಾನಕ್ಕೆ ತೆರಳಿ ಅಧಿಕಾರ ವಹಿಸಿಕೊಳ್ಳಲೇ ಬೇಕಾಗಿದೆ. ರೋಹಿಣಿ ಅವರ ಸ್ಥಾನದಲ್ಲಿ ಈಗಾಗಲೇ ಸಿ.ಕೆ.ಜಾಫರ್ ಅವರು ಈಗಾಗಲೇ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ರೋಹಿಣಿ ಸಿಂಧೂರಿ ಅವರನ್ನು ಸರ್ಕಾರವು ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಸ್ಥಾನಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸಿಎಟಿ ಮೆಟ್ಟಿಲೇರಿದ್ದರು ಆದರೆ ಅಲ್ಲಿಯೂ ರೋಹಿಣಿ ಸಿಂಧೂರಿ ಅವರಿಗೆ ಹಿನ್ನಡೆ ಆಯಿತು ಹಾಗಾಗಿ ಅವರು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು ಆದರೆ ಅಲ್ಲಿಯೂ ಈಗ ಅವರಿಗೆ ಹಿನ್ನಡೆ ಆಗಿದೆ.
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು ರೋಹಿಣಿ ಅವರ ವರ್ಗಾವಣೆಗೆ ಮಂಜು ಅವರೇ ಕಾರಣ ಎನ್ನಲಾಗುತ್ತಿದೆ.












Click it and Unblock the Notifications