ಗುಂಡಿ ತೋಡುವ ಸರದಿ ಬೆಸ್ಕಾಂನದ್ದು: ಬಿಬಿಎಂಪಿಗೆ ಮುಚ್ಚೋದೆ ಸವಾಲು
ಬೆಂಗಳೂರು, ನವೆಂಬರ್ 15: ಒಂದೆಡೆ ಬೆಂಗಳೂರಲ್ಲಿ ಸೃಷ್ಟಿಯಾಗಿರುವ, ವಾಹನ ಸವಾರರಿಗೆ ನಿತ್ಯ ನರಕವನ್ನು ತೋರಿಸುತ್ತಿರುವ ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಹರಸಾಹಸ ಪಡುತ್ತಿದೆ.
ಇನ್ನೊಂದೆಡೆ ನಾನೊಂದು ಕಡೆ ನೀನೊಂದು ಕಡೆ ಎಂದು ಜಲಮಂಡಳಿ, ಬೆಸ್ಕಾಂ ರಸ್ತೆ ಅಗೆಯುತ್ತಿವೆ. ಇದರಿಂದ ಗುಂಡಿ ಮುಚ್ಚುವುದೇ ಬಿಬಿಎಂಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಆದರೆ ಕಾನೂನಿನ ಪ್ರಕಾರ ಬೆಸ್ಕಾಂ, ಅಥವಾ ಜಲಮಂಡಳಿ ಯಾರೇ ರಸ್ತೆ ಅಗೆದರೂ ಅವರೇ ರಸ್ತೆ ನಿರ್ಮಾಣ ಮಾಡಬೇಕೆನ್ನುವ ನಿಯಮವಿದೆ. ಆದರೆ ಯಾವ ಇಲಾಖೆಯೂ ಆ ಕೆಲಸ ಮಾತ್ರ ಮಾಡುತ್ತಿಲ್ಲ.

ಬಿಬಿಎಂಪಿಯು ಗುಂಡಿಗಳನ್ನು ಮುಚ್ಚಿ ರಸ್ತೆಯ ನಿರ್ಮಾಣ ಮಾಡಿ ಹೋದರೆ ಮರುದಿನ ಬೆಳಗ್ಗೆ ಜಲಮಂಡಳಿಯು ಪೈಪ್ ಅಳವಡಿಕೆಗಾಗಿ ಕಿಲೋಮೀಟರ್ಗಟ್ಟಲೆ ರಸ್ತೆಯನ್ನು ಅಗೆದು, ಪೈಪ್ ಹಾಕಿ ಹಾಗೆಯೇ ಗುಂಡಿ ಮುಚ್ಚಿ ಹೋಗುತ್ತಾರೆ. ಆದರೆ ರಸ್ತೆ ಬಗ್ಗೆ ಕೇಳಿದರೆ ಅದು ನಮಗೆ ಗೊತ್ತಿಲ್ಲ ಬಿಬಿಎಂಪಿಯನ್ನು ಕೇಳಿ ಎನ್ನುವ ಹಾರಿಕೆ ಉತ್ತರಗಳನ್ನು ಬೇರೆ ಕೇಳಬೇಕಾಗುತ್ತದೆ.
ಇದೀಗ ಜಲಮಂಡಳಿ ಸಾಕಷ್ಟು ಕಡೆ ನೀರಿನ ಪೈಪ್ ಅಳವಡಿಕೆಗಾಗಿ ರಸ್ತೆ ಅಗೆದ ಬಳಿಕ ಇದೀಗ ಬೆಸ್ಕಾಂ ಕೂಡ ಗುಂಡಿ ತೋಡಲು ಸಿದ್ಧವಾಗಿದೆ. ನೆಲದೊಳಗೆ ಕೇಬಲ್ ಅಳವಡಿಸುವ ಕಾಮಗಾರಿ ಇರುವ ಕಾರಣ ಒಂದೆರೆಡು ದಿನಗಳಲ್ಲಿ ಜಯನಗರದಿಂದ ಕಾಮಗಾರಿ ಆರಂಭವಾಗಲಿವೆ.
ಒಟ್ಟಿನಲ್ಲಿ ಬೆಂಗಳೂರು ರಸ್ತೆಗಳಿಗೆ ಗುಂಡಿಗಳಿಂದ ಮುಕ್ತಿ ಇಲ್ಲ ಎನ್ನುವುದು ಸಾಬೀತಾದಂತಾಗಿದೆ. ಬೆಂಗಳೂರಲ್ಲಿ ಇನ್ನೂ 900ಕ್ಕಿಂತಲೂ ಹೆಚ್ಚು ಗುಂಡಿಗಳನ್ನು ಮುಚ್ಚುವುದು ಬಾಕಿ ಇದೆ.












Click it and Unblock the Notifications