ಬೆಂಗಳೂರಿನ ಹಾಳಾದ ರಸ್ತೆಗೆ ಮತ್ತೊಬ್ಬ ವ್ಯಕ್ತಿ ಸಾವು: ತಪ್ಪು ಒಪ್ಪದ ಬಿಬಿಎಂಪಿ
ಬೆಂಗಳೂರು, ನವೆಂಬರ್ 15: ಬೆಂಗಳೂರಿನ ರಸ್ತೆ ಅಸಮರ್ಪಕ ನಿರ್ವಹಣೆಯಿಂದಾಗಿ ಸೋಮವಾರ ಮತ್ತೊಂದು ಜೀವ ಬಲಿಯಾಗಿದೆ.
ಸುಬ್ರಹ್ಮಣ್ಯ ನಗರದ 2ನೇ ಮುಖ್ಯರಸ್ತೆಯಲ್ಲಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ 55 ವರ್ಷದ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಆದರೆ ಬಿಬಿಎಂಪಿ ಮಾತ್ರ ತನ್ನ ಬೇಜಬ್ದಾರಿಯನ್ನು ಒಪ್ಪಿಕೊಳ್ಳುತ್ತಿಲ್ಲ.
ಮೃತ ಪಟ್ಟ ವ್ಯಕ್ತಿ ಮರಿಯಪ್ಪನಪಾಳ್ಯ ನಿವಾಸಿ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಪ್ಲಂಬರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಅಪಘಾತ ಕುರಿತು ಬಿಬಿಎಂಪಿಗೆ ತಿಳಿಸಲಾಗಿದೆ. ಆದರೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಅವಘಡಕ್ಕೆ ನಾವು (ಬಿಬಿಎಂಪಿ) ಜವಾಬ್ದಾರಿ ಅಲ್ಲ ಎಂದಿದ್ದಾರೆ.

ಮೃತ ವ್ಯಕ್ತಿ ಕುಮಾರ್ ಅವರು ಮನೆಯಿಂದ ರಾಜಾಜಿನಗರ ಡಿ.ಬ್ಲಾಕ್ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಅವರ ಮುಂದೆ ಮಣ್ಣು ತುಂಬಿದ ಟ್ರ್ಯಾಕ್ಟರ್ ಮುಂದೆ ಸಾಗುತ್ತಿತ್ತು. ರಸ್ತೆ ಹಾಳಾಗಿದ್ದು, ಡಾಂಬರ್ ಮಾಡದ್ದರಿಂದ ಜಲ್ಲಿಕಲ್ಲುಗಳು ರಸ್ತೆ ತುಂಬೆಲ್ಲ ಹರಡಿದ್ದವು. ಹೀಗಾಗಿ ಬೈಕ್ ಟ್ರ್ಯಾಕ್ಟರ್ ಪಕ್ಕ ಹೋಗುತ್ತಿದ್ದಂತೆ ಸ್ಕಿಡ್ ಆಗಿ ಬಿದ್ದಿದೆ. ಆಗ ಟ್ರ್ಯಾಕ್ಟರ್ ಚಕ್ರಗಳು ಕುಮಾರ್ ಮೇಲೆ ಹರಿದಿವೆ.
ಹೊಟ್ಟೆ ಮೇಲೆ ಚಕ್ರ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಕುಮಾರ್ ಅವರ ಪುತ್ರ ಮಂಜುನಾಥ್ ಎಂಬುವವರು ಟ್ರ್ಯಾಕ್ಟರ್ ಚಾಲಕನ ವಿರುದ್ಧ ಮಲ್ಲೇಶ್ವರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರು ಪ್ರತಿಯಲ್ಲಿರುವ ವಿವರಗಳ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಮಂಜುನಾಥ್ ದೂರಿನಲ್ಲಿ ಬಿಬಿಎಂಪಿಯ ರಸ್ತೆ ಅಸಮರ್ಪಕ ನಿರ್ವಹಣೆ ಬಗ್ಗೆ ಉಲ್ಲೇಖಿಲ್ಲ. ಒಂದು ವೇಳೆ ಬಿಬಿಎಂಪಿ ನಿರ್ಲಕ್ಷ್ಯ ಸಾಬೀತಾದರೆ ತನಿಖೆಯ ಮುಂದಿನ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಹಾಳಾದ ರಸ್ತೆ: ರಸ್ತೆಗುಂಡಿ ಪ್ರಸ್ತಾಪ ಇಲ್ಲ
ಸುಬ್ರಹ್ಮಣ್ಯ ನಗರದ 2ನೇ ಕೆಲವು ತಿಂಗಳುಗಳಿಂದ ರಸ್ತೆಗಳು ಹದಗೆಟ್ಟಿವೆ. ಹೀಗಿದ್ದರು ಈ ಹಿಂದೆ ಬಿಬಿಎಂಪಿ ರಸ್ತೆಗೆ ಡಾಂಬರು ಹಾಕಿ ಗುಂಡಿ ಮುಚ್ಚದೇ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಹದಗೆಟ್ಟ ರಸ್ತೆಯಿಂದ ಕುಮಾರ್ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜೊತೆಗೆ ಸ್ಥಳೀಯ ಎಂಜಿನಿಯರ್ ಗಳನ್ನು ಬಂಧಿಸಿ ಶಿಕ್ಷಿಸಬೇಕು. ಈ ಅಪಘಾತಕ್ಕೆ ಬಿಬಿಎಂಪಿಯನ್ನೇ ಹೊಣೆಯನ್ನಾಗಿ ಮಾಡಬೇಕು ಎಂದು ಸ್ಥಳಿಯರು ಒತ್ತಾಯಿಸಿದರು.
ಕಳೆದ ನವೆಂಬರ್ 1ರಂದು ಗಂಗಮ್ಮ ವೃತ್ತದಲ್ಲಿ ಬೈಕ್ ಅಪಘಾತದಲ್ಲಿ ಸವಾರನೊಬ್ಬ ತೀವ್ರ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದರು. ಈ ಬಗ್ಗೆ ದೂರು ನೀಡಿದ್ದರೂ ಸಹ ನಗರ ಸಂಚಾರ ಪೊಲೀಸರು ರಸ್ತೆಗುಂಡಿ ವಿಚಾರವನ್ನು ಪ್ರಸ್ತಾಪಿಸಿರಲಿಲ್ಲ. ಸದ್ಯ ಸುಬ್ರಹ್ಮಣ್ಯ ನಗರದ 2ನೇ ರಸ್ತೆಯಲ್ಲಿ ಅನೇಕ ದ್ವಿಚಕ್ರ ವಾಹನಗಳು ಸ್ಕಿಡ್ ಆಗುತ್ತಿವೆ. ಸವಾರರು ಗುಂಡಿಗಳ ಮೇಲೆ ಸವಾರಿ ಮಾಡಬೇಕಾದ ಪರಿಸ್ಥಿತಿ ಇದೆ. ಇತ್ತ ತನಿಖೆ ನಡೆಸುತ್ತಿರುವ ಪೊಲೀಸರು ಶೀಘ್ರವೇ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಿ ಆತನನ್ನು ವಿಚಾರಣೆ ನಡೆಸು ಸತ್ಯ ಬಹಿರಂಗಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.












Click it and Unblock the Notifications