ರಾತ್ರಿಯಿಡಿ ಹೋಟೆಲ್, ರೆಸ್ಟೋರೆಂಟ್ ಓಪನಾದ್ರೆ, ಬರಿ ಕಿರಿಕಿರಿ, ತೊಂದರೆ
ಬೆಂಗಳೂರು, ಏಪ್ರಿಲ್ 25 : ಬೆಂಗಳೂರಿನಲ್ಲಿರುವ ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು 24/7 ತೆರೆದಿರಲು ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ಸದ್ಯ ಈ ಆದೇಶಕ್ಕೆ ಬೆಂಗಳೂರಿನ ಕೆಲ ಪ್ರದೇಶದ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ರಾತ್ರಿ ಸಮಯದಲ್ಲಿ ರೆಸ್ಟೋರೆಂಟ್ ಅಕ್ಕಪಕ್ಕದಲ್ಲಿರುವ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘ ಆರೋಪಿಸಿದೆ.
ಏಪ್ರಿಲ್ 16ರಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಬೆಂಗಳೂರು ಕಮಿಷನರ್ ಕಮಲ್ ಪಂತ್ ಅವರಿಗೆ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳನ್ನು 24/7 ತೆರಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದ್ದರು. ಅದರಂತೆ ಸರ್ಕಾರ ಕೂಡ ಈ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ಆದ್ರೆ ಪೊಲೀಸರು ರಾತ್ರಿ 11 ಗಂಟೆಯ ನಂತರ ಹೋಟೆಲ್ಗಳನ್ನು ತೆರೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೋಟೆಲ್ ಮಾಲೀಕರ ಸಂಘದವರು ದೂರಿದ್ದಾರೆ.
"ಅಬಕಾರಿ ನಿಯಮದ ಪ್ರಕಾರ ರಾತ್ರಿ 11 ರ ನಂತರ ಮದ್ಯ ಮಾರಾಟಕ್ಕೆಅವಕಾಶವಿಲ್ಲ. ಅಲ್ಲದೆ ಎಲ್ಲ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು 24/7 ತೆರೆದಿರಬೇಕು ಎಂಬ ಅನಿವಾರ್ಯವೇನಿಲ್ಲ. ಇದು ಆ ಹೋಟೆಲ್ಗಳಿಗೆ ಭೇಟಿ ನೀಡುವ ಗ್ರಾಹಕರ ಮೇಲೆ ಅವಲಂಬಿಸಿರುತ್ತದೆ," ಎಂದು ಸಂಘದ ಕಾರ್ಯದರ್ಶಿ ವಿನೋದ್ ಕಾಮತ್ ಹೇಳಿದ್ದಾರೆ.

ಇನ್ನು "ರಾತ್ರಿ ವೇಳೆ ಹೋಟೆಲ್ ರೆಸ್ಟೋರೆಂಟ್ಗಳಲ್ಲಿ ಪೊಲೀಸರು ಸಹ ಪೂರ್ಣ ಪ್ರಮಾಣದಲ್ಲಿ ಭದ್ರತೆ ನೀಡುವುದಕ್ಕೂ ಸಾಧ್ಯವಾಗುವುದಿಲ್ಲ. ಏಕೆಂದರೆ ರೆಸ್ಟೋರೆಂಟ್ಗಳಲ್ಲಿ ಮದ್ಯ ವಿತರಣೆ ಮಾಡ್ತಿದ್ದಾರಾ ಅಥವಾ ಆಹಾರ ನೀಡುತ್ತಿದ್ದಾರ ಅಂತ ಪರಿಶೀಲಿಸುವುದು ಕಷ್ಟ," ಎಂದು ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಕಾರ್ಯದರ್ಶಿ ನಿತಿನ್ ಶೇಷಾದ್ರಿ ತಿಳಿಸಿದ್ದಾರೆ.
ಇಂದಿರಾನಗರದಲ್ಲೂ ಇದೇ ವಿಚಾರಕ್ಕೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ರಾತ್ರಿ ಸಮಯದಲ್ಲಿ ಡೆಲಿವರಿ ಬಾಯ್ಗಳ ಓಡಾಟ ನಿರಂತರವಾದ ಶಬ್ದ, ಟ್ರಾಫಿಕ್ ಕಿರಿಕಿರಿಯಿಂದ ನಿದ್ರೆ ಮಾಡಲು ಭಾರೀ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಈ ರೀತಿಯ ಕೆಲವು ಕಾರಣಗಳಿಂದಾಗಿ ಇಂದಿರಾನಗರವನ್ನು ಬದಲಾಯಿಸಿ ಬೇರೆಡೆ ಸ್ಥಳಾಂತರವಾಗಿದ್ದೇನೆ ಎಂದು ಇಂದಿರಾನಗರದ ನಿವಾಸಿಯೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಕೀಲ ಹಾಗೂ ಹೋರಾಟಗಾರ ವಿನಯ್ ಶ್ರೀನಿವಾಸ್ ಹೋಟೆಲ್ 24/7 ತೆರೆದಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ್ದು, "ಇತ್ತೀಚಿಗೆ ಹೆಚ್ಚುತ್ತಿರುವ ಎಲ್ಪಿಜಿ ಸಿಲಿಂಡರ್ ಬೆಲೆಗಳು, ಇಂಧನ ವೆಚ್ಚ ಮತ್ತು ಜಿಎಸ್ಟಿ ಹೊರೆಯಿಂದಾಗಿ ಹೋಟೆಲ್ ಉದ್ಯಮವವು ನಷ್ಟವನ್ನು ಅನುಭವಿಸುತ್ತಿದೆ. ಆದರೆ ಸರ್ಕಾರ ಮಾತ್ರ ಹೋಟೆಲ್ಗಳ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಾಗಿ ಹೋಟೆಲ್ನವರು ಸಹ ವ್ಯಾಪಾರಕ್ಕಾಗಿ ರಾತ್ರಿಯಿಡೀ ತೆರಯಲು ಇಚ್ಛಿಸುತ್ತಾರೆ," ಎಂದು ಹೋಟೆಲ್ ಮಾಲೀಕರ ಪರವಾಗಿ ಮಾತನಾಡಿದ್ದಾರೆ.
ಸದ್ಯಕ್ಕೆ ಸರ್ಕಾರ ರಾತ್ರಿಯಿಡಿ ಹೋಟೆಲ್, ರೆಸ್ಟೋರೆಂಟ್ ತೆರಯಲು ಅವಕಾಶವೇನೂ ನೀಡಿದೆ. ಆದ್ರೆ ಇದರಿಂದ ನಗರದ ಕೆಲವು ನಿವಾಸಿಗಳಿಗೆ ತೊಂದರೆಯಾಗುತ್ತಿರುವುದಂತೂ ನಿಜ. ಬಾರ್ ರೆಸ್ಟೋರೆಂಟ್ಗಳು ತೆರೆಯುವುದರಿಂದ ಅಲ್ಲಿ ರಾತ್ರಿ ಸಮಯದಲ್ಲೂ ಜೋರಾದ ಶಬ್ದ ಅಕ್ಕಪಕ್ಕದ ನಿವಾಗಿಳಿಗೆ ಕಿರಿಕಿರಿ ಉಂಟಾಗುವಂತೆ ಮಾಡುತ್ತದೆ. ಹೀಗಾಗಿ ಸರ್ಕಾರ ಹಾಗೂ ಪೊಲೀಸರು ಹೋಟೆಲ್ಗಳಲ್ಲಿ ರಾತ್ರಿ ಸಮಯದಲ್ಲಿ ಬೇರೆ ನಿವಾಸಿಗಳಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುವಂತೆ ಸೂಚಿಸಬೇಕಿದೆ.












Click it and Unblock the Notifications