ಲಾಲ್ ಬಾಗ್; ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು
ಬೆಂಗಳೂರು, ಜನವರಿ 07; ಬೆಂಗಳೂರು ನಗರ ಮತ್ತು ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಲಾಲ್ ಬಾಗ್ನಲ್ಲಿ ನಡೆಯುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಈ ವರ್ಷವೂ ರದ್ದಾಗಿದೆ.
ಕರ್ನಾಟಕ ಸರ್ಕಾರ ಹೊಸ ಕೋವಿಡ್ ಮಾರ್ಗಸೂಚಿಯನ್ನು ಪ್ರಕಟಿಸಿದ ಬಳಿಕ ತೋಟಗಾರಿಕಾ ಇಲಾಖೆ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಫಲಪುಷ್ಪ ಪ್ರದರ್ಶನ ರದ್ದುಗೊಳಿಸಿದೆ. ಸತತ ಎರಡು ವರ್ಷಗಳಿಂದ ಫಲಪುಷ್ಪ ಪ್ರದರ್ಶನ ನಡೆಯುತ್ತಿಲ್ಲ.
ಲಾಲ್ ಬಾಗ್ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು
ಬೆಂಗಳೂರು ನಗರದಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳಲ್ಲಿ ಫಲಪುಷ್ಪ ಪ್ರದರ್ಶನ ಸಹ ಸೇರಿದೆ. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಪ್ರದರ್ಶನ ಆಯೋಜನೆ ಮಾಡಲಿದ್ದು, ಲಕ್ಷಾಂತರ ಜನರು ಇದರಲ್ಲಿ ಭಾಗಿಯಾಗುತ್ತಾರೆ.
ಮಂಗಳೂರು ಮಹಿಳೆಯ ಪ್ರಯೋಗ; ಟೆರಸ್ನಲ್ಲೇ ತಾವರೆ ತೋಟ!
ಕಳೆದ ವರ್ಷ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿಯೇ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದುಗೊಂಡಿತ್ತು. ಈ ವರ್ಷ ತೋಟಗಾರಿಕಾ ಇಲಾಖೆ ಮತ್ತು ಮೈಸೂರು ತೋಟಗಾರಿಕಾ ಸೊಸೈಟಿ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡುವ ಸಿದ್ಧತೆಯಲ್ಲಿದ್ದವು.
ಬೆಂಗಳೂರು; ಲಾಲ್ ಬಾಗ್ ಪ್ರವೇಶ, ಪಾರ್ಕಿಂಗ್ ಶುಲ್ಕ ಏರಿಕೆ
ಆದರೆ ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಯಾಗಿದೆ. ಕರ್ನಾಟಕ ಸರ್ಕಾರ 50 ಜನಕ್ಕಿಂತ ಹೆಚ್ಚು ಜನರು ಸೇರುವ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು 'ಆಜಾದಿ ಕಾ ಅಮೃತ ಮಹೋತ್ಸವ' ಪರಿಕಲ್ಪನೆಯಲ್ಲಿ ನಡೆಸಲು ಉದ್ದೇಶಿಲಾಗಿತ್ತು. ದಿ. ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸುವ ಮಾದರಿಯಲ್ಲಿಯೂ ಹೂವುಗಳನ್ನು ಜೋಡಿಸಲು ತೀರ್ಮಾನಿಸಲಾಗಿತ್ತು.
ಆದರೆ ಸರ್ಕಾರದ ಹೊಸ ಕೋವಿಡ್ ಮಾರ್ಗಸೂಚಿಯ ಕಾರಣದಿಂದಾಗಿ ಫಲಪುಷ್ಪ ಪ್ರದರ್ಶನ ರದ್ದುಗೊಂಡಿದೆ. ಈ ಬಾರಿಯ ಪ್ರದರ್ಶನಕ್ಕಾಗಿ 40 ರಿಂದ 50 ಸಾವಿರ ಹೂವಿನ ಗಿಡಗಳನ್ನು ಬೆಳೆಸಲಾಗಿತ್ತು. ಲಾಲ್ ಬಾಗ್ ಆವರಣದಲ್ಲಿಯೇ ಜನರ ದಟ್ಟಣೆ ಕಡಿಮೆ ಮಾಡಲು 4 ರಿಂದ 5 ಕಡೆ ವಿವಿಧ ಪ್ರದರ್ಶನ ಏರ್ಪಡಿಸಲು ಚಿಂತನೆ ನಡೆಸಲಾಗಿತ್ತು.
ಸರ್ಕಾರದ ಆದೇಶವನ್ನು ನಾವು ಪಾಲನೆ ಮಾಡಬೇಕಿದೆ. ಫಲಪುಷ್ಪ ಪ್ರದರ್ಶನಕ್ಕಾಗಿಯೇ ಬೆಳೆಸಿದ್ದ ಗಿಡಗಳನ್ನು ಬೋಟಾನಿಕಾಲ್ ಗಾರ್ಡನ್ನಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಬಾರಿ ಬುಧವಾರ ಗಣರಾಜ್ಯೋತ್ಸವ ನಡೆಯಲಿದೆ. ಅದಕ್ಕೂ ಎರಡು ದಿನ ಮುಂಚಿವಾಗಿ ಮತ್ತು ಎರಡು ದಿನಗಳ ಬಳಿಕ ಸಹ ಫಲಪುಷ್ಪ ಪ್ರದರ್ಶನ ನಡೆಯುತ್ತಿತ್ತು. ಈ ಬಾರಿ ಕೋವಿಡ್ ಕಾರಣದಿಂದಾಗಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿಯಾದರೂ ಸಹ ಫಲಪುಷ್ಪ ಪ್ರದರ್ಶನ ನಡೆಯಲಿದೆಯೇ? ಕಾದು ನೋಡಬೇಕಿದೆ.
ಕೋವಿಡ್ ಪ್ರಕರಣ ಏರಿಕೆ; ಕರ್ನಾಟಕ ಸೇರಿದಂತೆ ದೇಶದ 5 ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ. ವಿವಿಧ ರಾಜ್ಯಗಳು ಸೋಂಕು ಹರಡುವಿಕೆ ತಡೆಯಲು ಹಲವಾರು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿವೆ.
ಕರ್ನಾಟಕ ಸರ್ಕಾರ ಸಹ ವಾರಾಂತ್ಯ ಮತ್ತು ನೈಟ್ ಕರ್ಫ್ಯೂ ಸೇರಿದಂತೆ ಹಲವಾರು ಕಠಿಣ ನಿಯಮಗಳನ್ನು ಘೋಷಣೆ ಮಾಡಿದ್ದು, ಹೊಸ ಮಾರ್ಗಸೂಚಿ ಬುಧವಾರ ರಾತ್ರಿ 10 ಗಂಟೆಯಿಂದ ಜಾರಿಗೆ ಬಂದಿದೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ವಾರಾಂತ್ಯ ಕರ್ಫ್ಯೂ ಜಾರಿಗೆ ಬರುತ್ತಿದೆ. ಈ ಸಂದರ್ಭದಲ್ಲಿ ತುರ್ತು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.
ಗುರುವಾರ ಕರ್ನಾಟಕದಲ್ಲಿ 5031 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 22,173ಕ್ಕೆ ಏರಿಕೆಯಾಗಿದೆ. ರಾಜ್ಯದ ದಿನದ ಪಾಸಿಟಿವಿಟಿ ದರ 3.95 ಆಗಿದೆ. ಬೆಂಗಳೂರು ನಗರದಲ್ಲಿ 4324 ಹೊಸ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳು 18,913.
ಕರ್ನಾಟಕದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಬೆಂಗಳೂರು ನಗರದಲ್ಲಿಯೇ ದಾಖಲಾಗುತ್ತಿವೆ. ಈ ಹಿನ್ನಲೆಯಲ್ಲಿ ವಾರಾಂತ್ಯ ಕರ್ಫ್ಯೂವನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ.
Recommended Video