ಶಬ್ದ ಮಾಲಿನ್ಯಕ್ಕೆ ಸದ್ಯದಲ್ಲೇ ಬೀಳಲಿದೆ ಕಡಿವಾಣ?
ಬೆಂಗಳೂರು, ನ. 13: ನಗರದಲ್ಲಿ ವಾಹನಗಳು ಮಾಡುವ ಹಾರ್ನ್ಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಬೆಂಗಳೂರಿನಲ್ಲಿರುವ ಆಟೋ ಹಾಗೂ ದ್ವಿಚಕ್ರ ವಾಹನಗಳಿಂದಲೇ ಹೆಚ್ಚು ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಆದ್ದರಿಂದ ಆಟೋ ಹಾಗೂ ದ್ವಿಚಕ್ರ ವಾಹನಗಳಲ್ಲಿರುವ ಹಾರ್ನ್ ಸೌಲಭ್ಯವನ್ನು ತೆಗೆದುಹಾಕಲು ಮಂಡಳಿ ಸಲಹೆ ನೀಡಿದೆ. [ಕೆಎಸ್ ಪಿಸಿಬಿ ಸೂಪರ್ ಸೀಡ್ ಮಾಡಬಹುದೇ?]

ಈ ಕುರಿತು ವಿವರಣೆ ನೀಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ವಾಮನ ಆಚಾರ್ಯ, "ಭಾರತದ ತಾಂತ್ರಿಕತೆಯ ರಾಜಧಾನಿ ಎನ್ನಿಸಿಕೊಂಡಿರುವ ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ ನಿಗ್ರಹಿಸಲು 32 ಮಾರ್ಗದರ್ಶಿ ಸೂತ್ರಗಳನ್ನು ಹೇಳಲಾಗಿದೆ. ಅವುಗಳಲ್ಲಿ ನಾಲ್ಕು ಚಕ್ರಗಳ ವಾಹನಗಳಲ್ಲಿ ಹಾರ್ನ್ ಉಪಯೋಗವನ್ನು ಕಡಿಮೆಗೊಳಿಸುವ ಪ್ರಸ್ತಾವನೆಯೂ ಇದೆ ಎಂದು ತಿಳಿಸಿದ್ದಾರೆ. [ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ: ಹೈಕೋರ್ಟ್ ಗರಂ]
ಸಮಯ ಉಳಿತಾಯ ಸಾಧ್ಯ: ಜರ್ಮನಿ, ಜಪಾನ್ ಸೇರಿದಂತೆ ಕೆಲವು ದೇಶಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಈ ಮೂಲಕ ತಿಂಗಳಿಗೆ 15 ನಿಮಿಷ ಹಾಗೂ ವರ್ಷಕ್ಕೆ ಕನಿಷ್ಠ ಮೂರು ಗಂಟೆ ಹೆಚ್ಚು ಸಮಯ ಸಿಗಲಿದೆ ಎಂದು ವಾಮನ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಶಬ್ದವು ಕಣ್ಣಿಗೆ ಕಾಣಿಸದ ಕಸ. ಎಲ್ಲರನ್ನೂ ಕೆಲಸ ಮಾಡದಂತೆ ತಡೆಯಬಲ್ಲದು. ಆರ್ಥಿಕ ಅಭಿವೃದ್ಧಿಯ ಮೇಲೂ ಪರಿಣಾಮ ಬೀರಬಲ್ಲದು ಎಂದು ಹೇಳಿದರು.
ಬೆಂಗಳೂರಿನಲ್ಲಿರುವ ಶಬ್ದ ಮಾಲಿನ್ಯ ಕಾನೂನಿನಲ್ಲಿ ಹೇಳಿರುವುದಕ್ಕಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಕೈಗಾರಿಕಾ ಪ್ರದೇಶ ಪೀಣ್ಯಾದಲ್ಲಿ ಮಾತ್ರ ಶಬ್ದ ಮಾಲಿನ್ಯ ನಿಗದಿಗಿಂತ ಕಡಿಮೆ ಇರುವುದು ಕಂಡುಬಂದಿದೆ ಎಂದು ಆಚಾರ್ಯ ತಿಳಿಸಿದರು. [ನಿಧಾನ ವಿಷಕ್ಕೆ ಮತ್ತೊಂದು ಹೆಸರು ಆಟೋರಿಕ್ಷಾ]
ನಗರದಲ್ಲಿ ಶಬ್ದಮಾಲಿನ್ಯ ಹೆಚ್ಚುತ್ತಿರುವ ಕುರಿತು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದ ನಂತರ ಮಾಲಿನ್ಯ ನಿಯಂತ್ರಣ ಮಂಡಳಿಯು ಸಾರಿಗೆ ಇಲಾಖೆಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ನಗರದ ವಾಹನಗಳಲ್ಲಿ ಶೇ. 71ರಷ್ಟು ಪ್ರಮಾಣದಲ್ಲಿರುವ 37.63 ಲಕ್ಷ ದ್ವಿಚಕ್ರ ವಾಹನಗಳಿಂದ ಹಾರ್ನ್ ತೆಗೆಯುವಂತೆ ಸಲಹೆ ನೀಡಲಾಗಿದೆ. ಆದರೆ, ಈ ಸಲಹೆಗೆ ಸರ್ಕಾರದಿಂದಾಗಲಿ, ಸಾರ್ವಜನಿಕರಿಂದಾಗಲಿ ಬೆಂಬಲ ಸಿಕ್ಕಿಲ್ಲ ಎಂದು ತಿಳಿಸಿದರು.
ಅಪಘಾತದ ಭಯವಿದೆ: ಈ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ವಾಹನಗಳಿಂದ ಹಾರ್ನ್ ತೆಗೆದರೆ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ. ಸಾರಿಗೆ ನಿಯಮಗಳನ್ನು ಉಲ್ಲಂಘಿಸುವುದರಿಂದಲೂ ಶಬ್ದ ಮಾಲಿನ್ಯ ಉಂಟಾಗುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. [ಬೆಂಗಳೂರಿನ ಆರು ಲಕ್ಷ ಮಕ್ಕಳು ಪಟಾಕಿ ಹೊಡೆಯಲ್ಲ]
ಆದರೆ, ಇದನ್ನು ತಿರಸ್ಕರಿಸಿರುವ ವಾಮನ ಆಚಾರ್ಯ, ಮಲೇಶಿಯಾ, ಸಿಂಗಪುರದಲ್ಲಿ ಈ ನಿಯಮದಿಂದ ಯಾವುದೇ ಅಪಘಾತ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.
ಸಾಧಕ-ಬಾಧಕ ಪರಿಶೀಲಿಸುತ್ತೇವೆ: ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ ದಯಾನಂದ ಪ್ರತಿಕ್ರಿಯಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಇಂತಹ ಸಲಹೆ ನೀಡಿದ್ದರೆ ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications