ಕೊರೊನಾ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡುವಂತೆ ರೆಡ್ಕ್ರಾಸ್ ಮನವಿ
ಬೆಂಗಳೂರು, ಏಪ್ರಿಲ್ 29: ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಲಸಿಕೆ ತೆಗೆದುಕೊಳ್ಳುವ ಮುನ್ನ ಯುವಜನರು, ಸ್ವಯಂ ಪ್ರೇರಿತ ರಕ್ತದಾನಿಗಳು, ಸ್ವಯಂಸೇವಕರು ರಕ್ತದಾನ ಮಾಡಿ ನಂತರ ಲಸಿಕೆ ತೆಗೆದುಕೊಳ್ಳಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಗೌರವ ಕೋಶಾಧ್ಯಕ್ಷ ಆನಂದ ಎಸ್ ಜಿಗಜಿನ್ನಿ ಮನವಿ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆ, ಲಾಕ್ ಡೌನ್, ಕರ್ಫ್ಯೂನಿಂದಾಗಿ ಈಗಾಗಲೇ ರಕ್ತ ಸಂಗ್ರಹ ಪ್ರಮಾಣ ಶೇಕಡಾ 50ರಷ್ಟು ಕುಸಿದಿದೆ. ಮೇ ತಿಂಗಳಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭವಾಗುತ್ತಿದೆ. ರಾಷ್ಟ್ರೀಯ ರಕ್ತಚಾಲನ ಪರಿಷತ್ ನೀರ್ದೇಶನ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಪಡೆದವರು ಮುಂದಿನ 28 ದಿನ ರಕ್ತದಾನ ಮಾಡುವಂತಿಲ್ಲ. ಎರಡು ಡೋಸ್ಗಳ ನಡುವೆ 28 ದಿನ ಅಂತರವಿದ್ದು ಒಟ್ಟು 56 ದಿನ ರಕ್ತದಾನ ಮಾಡುವಂತಿಲ್ಲ. ಇದರಿಂದ ರಾಜ್ಯದಲ್ಲಿ ರಕ್ತದ ತೀವ್ರ ಕೊರತೆ ಎದುರಾಗುವ ಆತಂಕವಿದೆ ಎಂದು ತಿಳಿಸಿದ್ದಾರೆ.
ಹೆರಿಗೆ ಸಂದರ್ಭ, ಕ್ಯಾನ್ಸರ್ ನಿಂದ ಬಳಲುತ್ತಿರುವವರು, ಡಯಾಲಿಸಿಸ್, ಅಪಘಾತಗಳು, ಹೃದಯ ಮತ್ತಿತರ ಶಸ್ತ್ರಚಿಕಿತ್ಸೆ ಮುಂತಾದ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಬಹುಮುಖ್ಯವಾಗಿದೆ. ಇದೆಲ್ಲವನ್ನು ಗಮನಿಸಿ ರಕ್ತದಾನಿಗಳು ರಕ್ತ ನೀಡಲು ಮುಂದಾಗಬೇಕು ಎಂದು ಕೇಳಿಕೊಂಡಿದ್ದಾರೆ.

ಖಾಸಗಿ ರಕ್ತನಿಧಿ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಸೋಂಕು ತಗುಲದಂತೆ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದು ಸಾರ್ವಜನಿಕರು ಧೈರ್ಯವಾಗಿ ರಕ್ತದಾನ ಮಾಡಬಹುದು
ಸಂಘ-ಸಂಸ್ಥೆಗಳು ಅನುಮತಿ ಪಡೆದು ರಕ್ತನಿಧಿ ಕೇಂದ್ರ ಸಹಕಾರದೊಂದಿಗೆ ಸಣ್ಣ ಮಟ್ಟದಲ್ಲಿ ರಕ್ತದಾನ ಆಯೋಜಿಸಬಹುದು. ಅಂಥವರ ನೆರವಿಗೆ ರೆಡ್ ಕ್ರಾಸ್ ಸಂಸ್ಥೆ ಇದೆ. ಸಂಸ್ಥೆಯ ಪದಾಧಿಕಾರಿಗಳನ್ನು ಸಂಪರ್ಕಿಸಿ ರಕ್ತದಾನ ಮಾಡುವವರು ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ. 9611082678, 8904705064, 98451 67186 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications