Namma Metro: ನಮ್ಮ ಮೆಟ್ರೋದ ಹಳಿಗೆ ಹಾರಿ ಯುಪಿ ವ್ಯಕ್ತಿ ಆತ್ಮಹತ್ಯೆಗೆ ಕಾರಣ ಬಹಿರಂಗ
ಬೆಂಗಳೂರು ಆಗಸ್ಟ್ 4: ಕಳೆದ ದಿನ ಉತ್ತರಪ್ರದೇಶದ ವ್ಯಕ್ತಿಯೊಬ್ಬರು ನಮ್ಮ ಮೆಟ್ರೋ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿನ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ ಈ ವ್ಯಕ್ತಿಯ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದು ಬಂದಿದೆ.
ಕಳೆದ ದಿನ ಸಂಜೆ 5:45ರ ವೇಳೆಗೆ ನಾಗಸಂದ್ರ ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ (ಹಸಿರು) ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಹೆಸರು ನವೀನ್ ಅರೋರ (57). ಇವರಿಗೆ 26 ವರ್ಷದ ಪುತ್ರ ಹಾಗೂ 22 ವರ್ಷದ ಪುತ್ರಿ ಹಾಗೂ ಪತ್ನಿ ಇದ್ದಾರೆ. ಇವರು ಮೂಲತ: ಉತ್ತರ ಪ್ರದೇಶದವರಾಗಿದ್ದಾರೆ. ನವೀನ್ ಅರೋರ ಅವರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.

ನವೀನ್ ಅರೋರ ಅವರ ಪುತ್ರ ಸ್ವಂತ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಪುತ್ರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾಳೆ. ನವೀನ್ ಕೆಆರ್ ಮಾರುಕಟ್ಟೆಯಲ್ಲಿ ಹಾರ್ಡ್ವೇರ್ ಅಂಗಡಿ ನಡೆಸುತ್ತಿದ್ದರು. ಚೆನ್ನಾಗಿದ್ದ ವ್ಯಾಪಾರ ಅದ್ಯಾಕೋ ಏನೋ ನೆಲಕ್ಕಚ್ಚಿ ಹೋಯಿತು.
ಇದೇ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿ ನವೀನ್ ಮನೆಯನ್ನು ತೊರೆದಿದ್ದರು. ಜೊತೆಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಮೃತ ನವೀನ್ ಕಳೆದ ಏಳು ವರ್ಷದಿಂದ ಕುಟುಂಬಸ್ಥರಿಂದ ದೂರವಿದ್ದು ಜೆಪಿ ನಗರದ ಹೋಟೆಲ್ವೊಂದರಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದರು.
ಬಳಿಕ ಕೆಆರ್ ಮಾರುಕಟ್ಟೆಯಲ್ಲಿ ರೂಮ್ ಮಾಡಿಕೊಂಡು ಇದ್ದರು. ಕುಟುಂಬಸ್ಥರಿಂದ ಹಣ ತರಿಸಿಕೊಳ್ಳುತ್ತಿದ್ದರು. ಕುಟುಂಬಸ್ಥರು ನೀಡಿದ ಹಣದಲ್ಲಿ ರೂಮ್ ಬಾಡಿಗೆ, ಊಟ, ತಿಂಡಿ ಎಲ್ಲವೂ ನಡೆಯುತ್ತಿತ್ತು. ಆದರೆ ನವೀನ್ ಮಾಡಿಕೊಂಡಿದ್ದ ಸಾಲ ಕುಟುಂಬಸ್ಥರಿಗೆ ತಲೆ ನೋವಾಗಿ ಪರಿಣಮಿಸಿತ್ತು.
ನವೀನ್ ಅಣ್ಣನಿಗೆ ಸಾಲಗಾರರು ಕರೆ ಮಾಡಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಆತ್ಮಹತ್ಯೆಗೂ ಮುನ್ನ ಅಣ್ಣನಿಗೆ ಕರೆ ಮಾಡಿ ಹಣ ಕೇಳಿದ್ದರು. ಹೀಗೆ ಖಿನ್ನತೆಗೆ ಒಳಗಾಗಿದ್ದ ನವೀನ್ ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.












Click it and Unblock the Notifications