ಬೆಂಗಳೂರು : ಕಾರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ
ಸೋಮವಾರ ಮಧ್ಯಾಹ್ನ ನಿವೃತ್ತ ಡಿಸಿಪಿ ರಾಮಯ್ಯ ಪುತ್ರ ರಾಘವೇಂದ್ರ ಪ್ರಸಾದ್ (32) ಆರ್.ಟಿ.ನಗರದ ತರಳಬಾಳು ಕೇಂದ್ರದ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಎದೆಗೆ ಗುಂಡು ಹೊಡುದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ತಕ್ಷಣ ಅವರನ್ನು ರಕ್ಷಿಸಿದ ಸ್ಥಳೀಯರು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ಅವರು ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರ್.ಟಿ.ನಗರ ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ್ದ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರಾಘವೇಂದ್ರ ಅವರು ಕಾರಿನಲ್ಲಿ ಡೆತ್ ನೋಟ್ ಸಿಕ್ಕಿದ್ದು ನನ್ನ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿದೆ ಎಂದು ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.
ಮಧ್ಯಾಹ್ನ ಸುಮಾರು 12.30ರ ಸುಮಾರಿಗೆ ಅವರು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರು ತಿಳಿಸಿದ್ದು, ಹಣಕಾಸಿನ ತೊಂದರೆಯೇ ಘಟನೆಗೆ ಕಾರಣ ಎಂದು ಶಂಕಿಸಿದ್ದಾರೆ. ರಾಘವೇಂದ್ರ ಅವರು ತಮ್ಮ ಡೆತ್ ನೋಟ್ ನಲ್ಲಿ ನನ್ನ ಸಾವಿನ ಕುರಿತು ಸಂಬಂಧಿಕರಿಗೆ ಸುದ್ದಿ ತಿಳಿಸಿ ಎಂದು ಎರಡು ಮೊಬೈಲ್ ನಂಬರ್ ಗಳನ್ನು ಬರೆದಿಟ್ಟಿದ್ದಾರೆ. ಅವರು ಶೂಟ್ ಮಾಡಿಕೊಂಡ ಗನ್ ಅವರ ತಂದೆಯವರದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.