ಸ್ಪೀಕರ್ ಮುಂದೆ ಹಾಜರಾದ ರವಿ ಬೆಳಗೆರೆ, ಅನಿಲ್ ರಾಜ್
ಬೆಂಗಳೂರು, ಜುಲೈ 3: ಹೈಕೋರ್ಟ್ ಸೂಚನೆಯಂತೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಮುಂದೆ 'ಹಾಯ್ ಬೆಂಗಳೂರು' ಪತ್ರಿಕೆ ಸಂಪಾದಕ ಮತ್ತು ಮಾಲಿಕ ರವಿ ಬೆಳಗೆರೆ ಹಾಗೂ 'ಯಲಹಂಕ ವಾಯ್ಸ್' ಸಂಪಾದಕ ಅನಿಲ್ ರಾಜ್ ಹಾಜರಾದರು.
ನಂತರ ಮಾತನಾಡಿದ ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಪರ ವಕೀಲ ಶಂಕರಪ್ಪ, "ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದೆವು. ಹೈಕೋರ್ಟ್ ಸೂಚನೆಯಂತೆ ಇಬ್ಬರೂ ಪತ್ರಕರ್ತರು ಇದೀಗ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿದ್ದಾರೆ. ಯಾವ ಸಂದರ್ಭದಲ್ಲಿ ಶಿಕ್ಷೆ ವಿಧಿಸಬಹುದು ಎಂಬ ಬಗ್ಗೆ ಸ್ಪೀಕರ್ ಮುಂದೆ ವಾದ ಮಂಡಿಸಿದ್ದೇವೆ. ಇದು ಸದನದ ಹೊರಗಿನ ಪ್ರಕರಣ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ," ಎಂದು ಹೇಳಿದರು.
ಸ್ಪೀಕರ್ ಮುಂದೆ ಹಾಜರಾಗಲು ರವಿ ಬೆಳಗೆರೆಗೆ ಕೋರ್ಟ್ ಆದೇಶ
ಅಷ್ಟೇ ಅಲ್ಲದೆ, "ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ದೇಶಗಳಲ್ಲಿರುವ ಸದನದ ನೀತಿ ಬಗ್ಗೆ ಸಭಾಪತಿಗಳಿಗೆ ವಿವರಿಸಿದ್ದೇವೆ. ತಮಿಳುನಾಡಿನಲ್ಲಿಬಾಲಕೃಷ್ಣ ಪ್ರಕರಣದಲ್ಲಿ ಸರ್ಕಾರಕ್ಕೆ ಶಿಕ್ಷೆ ವಿಧಿಸಿದ್ದನ್ನೂ ಸ್ಪೀಕರ್ ಗಮನಕ್ಕೆ ತಂದಿದ್ದೇವೆ. ಯಾವ ಕಾರಣಕ್ಕೂ ಇಬ್ಬರೂ ಪತ್ರಕರ್ತರನ್ನು ಬಂಧಿಸಲಾಗುವುದಿಲ್ಲ," ಎಂದು ಹೇಳಿದರು.
ರವಿ ಬೆಳಗೆರೆ ಖಾಸ್ ಬಾತ್ : ಸಿದ್ದು ಪಂಚೆ ಪೀಕದೆ ಬಿಡಲ್ಲ!
ಇನ್ನು ಸ್ಪೀಕರ್ ಕೆ.ಬಿ ಕೋಳಿವಾಡ ಹೇಳಿಕೆ ನೀಡಿ, "ರವಿ ಬೆಳಗೆರೆ ಮತ್ತು ಅನಿಲ್ ರಾಜ್ ವಕೀಲರ ಮೂಲಕ ಪಿಟಿಷನ್ ಕೊಟ್ಟಿದ್ದಾರೆ. ಅವರ ಮನವಿ ಸ್ವೀಕಾರ ಮಾಡಿದ್ದೇವೆ. ನಮ್ಮದೇ ಆದ ನಿಯಮಾವಳಿ ಪ್ರಕಾರ ಮುಂದೆ ನಡೆದುಕೊಳ್ಳುತ್ತೇವೆ. ನಾನು ಯಾವುದೇ ಆದೇಶ ಕೊಟ್ಟಿಲ್ಲ. ಹಕ್ಕುಭಾದ್ಯತಾ ಸಮಿತಿಯವರು ವರದಿ ಕೊಟ್ಟಿದ್ದರು. ಸದನ ಪಕ್ಷಪಾತವಿಲ್ಲದೇ ಒಮ್ಮತದ ಅಭಿಪ್ರಾಯಕ್ಕೆ ಬಂದಿತ್ತು. ಸದನದ ನಿಯಮವನ್ನು ನಾನು ಕಾರ್ಯರೂಪಕ್ಕೆ ತಂದಿದ್ದೇನೆ ಅಷ್ಟೆ. ನಾನು ಇಲ್ಲಿ ಸ್ಪೀಕರ್ ಅಷ್ಟೆ. ಮುಂದೆ ಕಾನೂನು ಏನಿದೆ ಅದರಂತೆ ನಡೆದುಕೊಳ್ಳುತ್ತೇವೆ," ಎಂದು ಹೇಳಿದರು.