PM Of Kailasa: ನಿತ್ಯಾನಂದನ ಕೈಲಾಸಕ್ಕೆ ಪ್ರಧಾನಿಯಾದ ರಂಜಿತಾ!
ಅತ್ಯಾಚಾರ, ವಿವಾದಗಳಿಂದ ವಿವಾದಕ್ಕೆ ಸಿಲುಕಿ ಭಾರತದಿಂದ ಪರಾರಿಯಾಗಿರು ನಿತ್ಯಾನಂದ ಕೈಲಾಸ ಎನ್ನುವ ದೇಶವನ್ನು ನಿರ್ಮಿಸಿಕೊಂಡಿದ್ದೇನೆ ಎಂದು ಘೋಷಿಸಿಕೊಂಡಿರುವುದು ಗೊತ್ತಿದೆ. ಅಚ್ಚರಿ ಎನ್ನುವಂತೆ ನಿತ್ಯಾನಂದನ ಕೈಲಾಸಕ್ಕೆ ಶಿಷ್ಯೆ ರಂಜಿತಾ ಅವರನ್ನು ಪ್ರಧಾನಿಯನ್ನಾಗಿ ನೇಮಿಸಲಾಗಿದೆ ಎಂದು ತಮಿಳು ದೈನಿಕವೊಂದು ವರದಿ ಮಾಡಿದೆ.
ವರದಿಯ ಪ್ರಕಾರ ನಿತ್ಯಾನಂದ ನಿರ್ಮಿಸಿದ್ದಾನೆ ಎಂದು ಹೇಳಲಾಗುವ ಕೈಲಾಸ ದೇಶಕ್ಕೆ ನಟಿ, ನಿತ್ಯಾನಂದನ ಶಿಷ್ಯೆ ರಂಜಿತಾ ನೇಮಕವಾಗಿದ್ದಾರೆ ಎಂದು ಹೇಳಲಾಗಿದೆ. ಹಿಂದೂಗಳಿಗಾಗಿ ಸ್ಥಾಪಿತವಾದ ಕೈಲಾಸದ ಪ್ರಧಾನ ಮಂತ್ರಿಯಾಗಿ ರಂಜಿತಾ ಅವರನ್ನು ಒಳಗೊಂಡ ಚಿತ್ರದ ಕೆಳಭಾಗದಲ್ಲಿ 'ನಿತ್ಯಾನಂದಮಯಿ ಸ್ವಾಮಿ' ಎಂಬ ಹೆಸರನ್ನು ಹೊಂದಿರುವ ನಿತ್ಯಾನಂದನಿಗೆ ಸಂಬಂಧಿಸಿದ ವೆಬ್ಸೈಟ್ನಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.

ಈ ಬೆಳವಣಿಗೆಯು ಅಚ್ಚರಿಯನ್ನುಂಟು ಮಾಡಿದೆ. ಕೈಲಾಸವನ್ನು ಪ್ರತಿನಿಧಿಸುವ ಮಹಿಳಾ ರಾಯಭಾರಿಗಳು ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು ಎಂದು ವರದಿಯಾಗಿತ್ತು. ಈ ಸಂದರ್ಭಗಳನ್ನು ಗಮನಿಸಿದರೆ, ನಟಿ ರಂಜಿತಾ ಶೀಘ್ರದಲ್ಲೇ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಸ್ವಯಂಘೋಷಿತ ದೇಶವಾದ ಕೈಲಾಸದ ಪ್ರಧಾನಿಯಾಗಿ ಭಾಗವಹಿಸಬಹುದು ಎಂದು ಊಹಿಸಲಾಗಿದೆ.
ಸ್ವಾಮಿ ನಿತ್ಯಾನಂದರ ಭಾರತದಿಂದ ಪಲಾಯನ ಮತ್ತು ನಂತರದ ರಂಜಿತಾ ಅವರನ್ನು ಕೈಲಾಸ ದೇಶದ ಪ್ರಧಾನಿಯಾಗಿ ಘೋಷಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೈಲಾಸದ ಸ್ಥಾಪನೆ ಮತ್ತು ವಿಶ್ವಸಂಸ್ಥೆಯಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅದರ ಪ್ರಾತಿನಿಧ್ಯವು ಈ ಹಿಂದೆ ಕಾನೂನು ಮತ್ತು ನೈತಿಕ ವಿವಾದಗಳಲ್ಲಿ ಸಿಲುಕಿರುವ ನಿತ್ಯಾನಂದನ ನಡೆಯನ್ನು ಸೂಚಿಸುತ್ತದೆ.
ರಂಜಿತಾ ತಂಗಿ ಕೂಡ ಕೈಲಾಸದಲ್ಲಿ?
ಈ ಮೊದಲೇ ನಿತ್ಯಾನಂದನ ಜೊತೆ ರಂಜಿತಾ ಕೂಡ ಕೈಲಾಸದಲ್ಲಿ ಇದ್ದಾರೆ ಎನ್ನಲಾಗಿತ್ತು, ರಂಜಿತಾ ಮಾತ್ರವಲ್ಲ ರಂಜಿತಾ ತಂಗಿ ಕೂಡ ಕೈಲಾಸದಲ್ಲೇ ಇರುವುದಾಗಿ ದಕ್ಷಿಣ ಭಾರತದ ಖ್ಯಾತ ಹಿರಿಯ ನಟ ರಂಜಿತಾ ತಂದೆ ಅಶೋಕ್ ಕುಮಾರ್ ಹೇಳಿದ್ದರು. ನನ್ನ ಇಬ್ಬರು ಮಕ್ಕಳು ತಮ್ಮ ತಮ್ಮ ಗಂಡಂದಿರಿಗೆ ಡಿವೋರ್ಸ್ ನೀಡಿದ್ದಾರೆ. ಇದೀಗ ನಿತ್ಯಾನಂದ ಸ್ವಾಮಿ ಆಶ್ರಮ ಸೇರಿದ್ದಾರೆ ಎಂದು ಕಣ್ಣೀರಾಕಿದ್ದರು.
ದೇಶದ ಕರೆನ್ಸಿ ಬಿಡುಗಡೆ ಮಾಡಿದ್ದ ನಿತ್ಯಾನಂದ
ಭಾರತದಿಂದ ಪರಾರಿಯಾದ ನಂತರ ಒಂದು ವರ್ಷ ಎಲ್ಲೂ ಕಾಣಿಸಿಕೊಳ್ಳದ ನಿತ್ಯಾನಂದ ನಂತರ ತನ್ನದೇ ಕೈಲಾಸ ದೇಶ ನಿರ್ಮಿಸಿಕೊಂಡಿದ್ದೇನೆ ಎಂದು ಘೋಷಿಸಿಕೊಂಡಿದ್ದ. ಅಲ್ಲದೆ ತನ್ನ ದೇಶದ ಕರೆನ್ಸಿಯನ್ನು ಕೂಡ ಬಿಡುಗಡೆ ಮಾಡಿದ್ದ. ದೇಶಕ್ಕೆ ಬರಲು ವೀಸಾ ನಿಯಮ ಕೂಡ ಜಾರಿಗೆ ತಂದಿದ್ದಾನೆ. ನಿತ್ಯಾನಂದನ ವೆಬ್ಸೈಟ್ನಲ್ಲಿ ತನ್ನ ದೇಶಕ್ಕೆ ಬರಲು ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ಬರೆಯಲಾಗಿದೆ.












Click it and Unblock the Notifications