ಮಕ್ಕಳೇ! ಗುಮ್ಮನ ನೋಡಲು ರಂಗಶಂಕರಕ್ಕೆ ಬನ್ನಿ
ಬೆಂಗಳೂರು, ಜು.02: ಆಸ್ವಾದ, ಅಹ್ಲಾದದ ಉದ್ಗಾರವಾದ 'ಆಹಾ.!' ಎಂಬ ಹೆಸರಿನಲ್ಲಿ, ಮಕ್ಕಳಿಗಾಗಿ ರಂಗಭೂಮಿಯ ಚಟುವಟಿಕೆ ಆರಂಭಿಸಿ ಯಶಸ್ವಿಯಾಗಿರುವ ಬೆಂಗಳೂರಿನ ರಂಗ ಪರಂಪರೆಗೆ ಹೊಸ ಆಯಾಮ ತಂದು ಕೊಟ್ಟ ರಂಗ ಶಂಕರದಲ್ಲಿ ಮತ್ತೊಮ್ಮೆ ಗುಮ್ಮ ಕಾಣಿಸಿಕೊಳ್ಳುತ್ತಿದ್ದಾನೆ.
ಕಳೆದ ಒಂದು ದಶಕದಲ್ಲಿ ಬೆಂಗಳೂರು ಮಾತ್ರವಲ್ಲದೇ, ಭಾರತೀಯ ರಂಗಭೂಮಿಯ ಕ್ಷೇತ್ರದಲ್ಲೂ ರಂಗಶಂಕರ ವಿಶಿಷ್ಟವಾದ ಸ್ಥಾನ ಪಡೆದಿದೆ. ಬೆಂಗಳೂರಿನ ಸಾಂಸ್ಕೃತಿಕ ವಲಯದಲ್ಲಿ ತನ್ನದೇ ಛಾಪು ಮೂಡಿಸಿರುವ ರಂಗ ಶಂಕರ, ರಂಗ ಪ್ರಯೋಗಗಳಿಗೆ ಸ್ಥಳಾವಕಾಶ ಮಾಡಿಕೊಡುವುದಷ್ಟೇ ಅಲ್ಲದೇ, ತನ್ನದೇ ಆದ ಸ್ವತಂತ್ರ ಪ್ರಯೋಗಗಳು, ಕಾರ್ಯಾಗಾರಗಳು ಮತ್ತು ಉತ್ಸವಗಳನ್ನು ನಡೆಸುತ್ತಾ ಬಂದಿದೆ.

'ಆಹಾ.!' ಎಂಬ ಹೆಸರಿನಲ್ಲಿ, ಮಕ್ಕಳಿಗಾಗಿ ರಂಗಭೂಮಿಯ ಚಟುವಟಿಕೆಗಳನ್ನು 8 ವರ್ಷಗಳ ಹಿಂದೆ ಪ್ರಾರಂಭಿಸಿತ್ತು. ಈ ಯೋಜನೆಯ ಅಡಿಯಲ್ಲಿ, ವರ್ಷಾವಧಿ ಮಕ್ಕಳಿಗಾಗಿ ಅಂತರಾಷ್ಟ್ರೀಯ ಮಕ್ಕಳ ನಾಟಕೋತ್ಸವ, ಬೇಸಿಗೆ ಶಿಬಿರ, ಮಕ್ಕಳ ನಾಟಕ ಪ್ರದರ್ಶನಗಳು ಮತ್ತು ಶಾಲಾ ಪ್ರದರ್ಶನಗಳು ಮುಂತಾದವು ಪ್ರಮುಖವಾದವು.
ರಂಗ ಶಂಕರದ ಜನಪ್ರಿಯ ನಾಟಕ 'ಗುಮ್ಮ ಬಂದ ಗುಮ್ಮ' 2006 ರಲ್ಲಿ ಮೊದಲ ಪ್ರಯೋಗ ಕಂಡಿತ್ತು, ಇಂದಿಗೂ ಮಕ್ಕಳಿಗೆ ಮತ್ತು ಪೋಷಕರಿಗೆ ಅತೀ ಪ್ರಿಯವಾದ ನಾಟಕವಾಗಿದೆ. ಅಂದಿನಿಂದ ಇಂದಿನ ವರೆಗೂ, ಬಹಳಷ್ಟು ಬಾರಿ ಮರು ನಿರ್ಮಿಸಲ್ಪಟ್ಟ ಈ ನಾಟಕ , ಈಗ, ಮತ್ತೆ ಸುಂದರ್ ರವರ ನಿರ್ದೇಶನದಲ್ಲಿ ನಿಮ್ಮ ಮುಂದೆ ಕಾಣಲಿದೆ.
ಮೂಲ ಜರ್ಮನ್ ನಾಟಕ ಮ್ಯಾಕ್ಸ್ ಅಂಡ್ ಮಿಲಿ ಯ ಆಧಾರಿತ 'ಗುಮ್ಮ ಬಂದ ಗುಮ್ಮ', ಮಕ್ಕಳ ಮನಸ್ಥಿತಿಯನ್ನು ಬಿಂಬಿಸುತ್ತದೆ, ಮಕ್ಕಳು ಹೇಗೆ ಭಾಷೆ, ಬಣ್ಣ, ಮೇಲು ಕೀಳಿನ ಹಂಗಿಲ್ಲದೇ, ಮತ್ತೊಬ್ಬರೊಂದಿಗೆ ಬೆರೆಯುತ್ತಾರೆಂಬುದೇ ಈ ನಾಟಕದ ತಿರುಳು.
ಮಕ್ಕಳನ್ನು ಮಾತ್ರವಲ್ಲದೇ, ಎಲ್ಲ ವಯಸ್ಸಿನ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ 'ಗುಮ್ಮ ಬಂದ ಗುಮ್ಮ' ನಾಟಕ.

ನಾಟಕದ ವಿವರ
ನಾಟಕದ ಹೆಸರು : 'ಗುಮ್ಮ ಬಂದ ಗುಮ್ಮ'
ಕನ್ನಡಕ್ಕೆ : ಸುರೇಂದ್ರನಾಥ್ ಎಸ್.
ನಿರ್ದೇಶನ : ಸುಂದರ್
ಸ್ಥಳ : ರಂಗ ಶಂಕರ
ದಿನಾಂಕ ಮತ್ತು ಸಮಯ : ಜುಲೈ 3 , ಸಂಜೆ 7:30 ಕ್ಕೆ
ಜುಲೈ 4 ಮತ್ತು 5 , ಮಧ್ಯಾಹ್ನ 3:30 ಮತ್ತು
ಸಂಜೆ 7:30 ಕ್ಕೆ
ಟಿಕೆಟ್ ದರ : ರೂ. 100/-
Online booking : www.bookmyshow.com
ದೂರವಾಣಿ: 080-26493982 / 26592777
(ಒನ್ ಇಂಡಿಯಾ ಸುದ್ದಿ)












Click it and Unblock the Notifications