ಮಹಾನಾಯಕನ ಬುಡಕ್ಕೆ ಬೆಂಕಿ ಇಡುತ್ತಾ ಜಾರಕಿಹೊಳಿ ಜೇಬಲ್ಲಿ ಇರುವ ಮಹಾ ಸಾಕ್ಷಿ !
ಬೆಂಗಳೂರು, ಮಾರ್ಚ್ 27: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇದೊಂದು ರಾಜಕೀಯ ಷಡ್ಯಂತ್ರ ಎಂಬುದನ್ನು ಸಾಕ್ಷಾಧಾರ ಸಮೇತ ಸಾಬೀತು ಮಾಡಲು ಜಾರಕಿಹೊಳಿ ಟೊಂಕಕಟ್ಟಿ ನಿಂತಿದ್ದಾರೆ. ಸಿಡಿಲೇಡಿ ಬಿಡುಗಡೆ ಮಾಡುತ್ತಿರುವ ವಿಡಿಯೋಗಳೇ ಒಂದು ರೀತಿ ರಮೇಶ್ ಜಾರಕಿಹೊಳಿಗೆ ವರದಾನವಾಗುತ್ತಿವೆ. ಸಿಡಿಲೇಡಿ ಸರಣಿ ವಿಡಿಯೋ ಬಿಡುಗಡೆ ಬೆನ್ನಲ್ಲೇ , ನನ್ನ ಜೇಬಲ್ಲಿ ಮಹಾ ಸಾಕ್ಷಿಯಿದೆ. ಅದನ್ನು ಇವತ್ತು ಸಂಜೆ ನಾಲ್ಕು ಗಂಟೆಗೆ ಬಿಡುಗಡೆ ಮಾಡುತ್ತೇನೆ ಎಂದು ಸ್ವತಃ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಜೇಬಿನಲ್ಲಿರುವ ಆ ಮಹಾ ಸಾಕ್ಷಿ ಯಾವುದು ? ಸಿಡಿ ಹಿಂದಿರುವ ಮಹಾನಾಯಕ ಯಾರು ಎಂಬ ಪಶ್ನೆಗೆ ಉತ್ತರ ಕೊಡಲಿದೆಯಾ ? ಇದು ತೀವ್ರ ಕುತೂಹಲ ಕೆರಳಿಸಿದೆ.
Recommended Video
ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾದರೆ ಬಂಧನಕ್ಕೆ ಒಳಗಾಗಿ ಪ್ರಕರಣಕ್ಕೆ ಹೊಸ ಆಯಾಮ ಸಿಗಲಿದೆ ಎಂದೇ ಭಾವಿಸಲಾಗಿತ್ತು. ಎಫ್ಐಆರ್ ದಾಖಲಾದರೂ ರಮೇಶ್ ಜಾರಕಿಹೊಳಿ ನಡೆಯಲ್ಲಿ ಸ್ವಲ್ಪವೂ ಬದಲಾವಣೆ ಆಗಿಲ್ಲ. ನಾನು ನಿರೀಕ್ಷಣಾ ಜಾಮೀನು ಕೋರಿ ಕೂಡ ಅರ್ಜಿ ಸಲ್ಲಿಸುವುದಿಲ್ಲ. ಇದರಲ್ಲಿ ನಾನು ತಪ್ಪು ಮಾಡಿಲ್ಲ. ಸರ್ಕಾರವನ್ನೇ ತೆಗೆದ ಮಗ ನಾನು, ಇಂತಹ ಹತ್ತು ಸಿಡಿ ಬಿಡುಗಡೆಯಾದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಹೀಗೆ ಹೇಳಿಕೆ ನೀಡಿದ ಬೆನ್ನಲ್ಲೇ ಸಂತ್ರಸ್ತೆ ಎನ್ನಲಾದ ಯುವತಿ ತನ್ನ ಸಹೋದರ ಹಾಗೂ ತಾಯಿ ಜತೆ ಮಾತನಾಡಿರುವ ಅಡಿಯೋ ಬಿಡುಗಡೆ ಆಯಿತು. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪವಾಗಿರುವುದು ರಾಜಕೀಯ ವಲಯದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿದೆ. ಅಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಅದು ಹೇಗೆ ಹೊರಗೆ ಬಂದಿದೆಯೋ ಗೊತ್ತಿಲ್ಲ. ಆದರೆ, ನನ್ನ ಜೇಬಲ್ಲಿ ಮಹಾ ಸಾಕ್ಷಿ ಇದೆ. ಅದನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಜಾರಕಿಹೊಳಿ ಸಹೋದರರು ಹೇಳಿದಂತೆ ಇಂದು ನಾಲ್ಕು ಗಂಟೆಗೆ ಮಹಾ ಸಾಕ್ಷಿ ಬಿಡುಗಡೆ ಆಗಲಿದೆಯಾ ? ಅದು ಬಿಡುಗಡೆಯಾದ ಬಳಿಕ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿಡಿಯೋ ಕೊಟ್ಟ ಕ್ಲೂ : ರಮೇಶ್ ಜಾರಕಿಹೊಳಿ ನನಗೆ ಮೋಸ ಮಾಡಿದ್ದಾರೆ. ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಂತ್ರಸ್ತೆ ಅಪಾದಿಸಿದ ಬೆನ್ನಲ್ಲೆ, ಆಕೆ ಸರ್ಕಾರಿ ಕೆಲಸ ಬಯಸಿ ಅರ್ಜಿ ಹಾಕಿದ್ದಳೇ, ಅದರಲ್ಲೂ ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತಾ ? ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಸದೇ ಈಕೆ ಯಾಕೆ ಸರ್ಕಾರಿ ಕೆಲಸ ಬೇಡಿಕೆ ಇಟ್ಟಳು, ಆರಂಭದಲ್ಲಿ ಸಾಕ್ಷ್ಯ ಚಿತ್ರ ತೆಗೆಯಲು ಅನುಮತಿ ಕೇಳಲು ಸಂಪರ್ಕಿಸಿದವಳು ಇದೀಗ ಸರ್ಕಾರಿ ಕೆಲಸದ ವಿಚಾರ ಪ್ರಸ್ತಾಪ ಮಾಡುತ್ತಿದ್ದಾಳೆ ಎಂಬುದಕ್ಕೆ ಎಲ್ಲಾ ಮಾಹಿತಿಯನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಅದರ ಪ್ರಕಾರ ಜಲ ಸಂಪನ್ಮೂಲ ಇಲಾಖೆ ಅಲ್ಲ, ಸರ್ಕಾರಿ ಕೆಲಸ ಬಯಸಿ ಆಕೆ ಅರ್ಜಿ ಕೂಡ ಸಲ್ಲಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಸರ್ಕಾರಿ ಕೆಲಸದ ಹೆಸರು ಇಲ್ಲಿ ಯಾಕೆ ತರುತ್ತಿದ್ದಾಳೆ ಎಂಬ ಗೊಂದಲ ಮೂಡಿಸಿದೆ. ಈ ಕುರಿತು ಮಹತ್ವದ ಮಾಹಿತಿಯನ್ನು ಕಲೆ ಹಾಕಿರುವ ಎಸ್ಐಟಿ ಅಧಿಕಾರಿಗಳು, ಸಿಡಿ ಲೇಡಿ ಹೇಳಿಕೆ ದಾಖಲಿಸುವ ವೇಳೆ ಈ ಎಲ್ಲವೂ ಪ್ರಸ್ತಾಪವಾಗಲಿದೆ. ರಮೇಶ್ ಜಾರಕಿಹೊಳಿ ನನಗೆ ಸರ್ಕಾರಿ ಕೆಲಸದ ಅಮಿಷೆ ತೋರಿಸಿ ಮೋಸ ಮಾಡಿದರು ಎಂದು ಸಿಡಿಲೇಡಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಬಳಿಕ ಈ ಕುರಿತ ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ ಎನ್ನಲಾಗಿದೆ.

ವಿಡಿಯೋ ಅಸ್ತ್ರಗಳು : ಇನ್ನು ಸಂತ್ರಸ್ತೆ ಎನ್ನಲಾದ ಯುವತಿ ದೂರು ಆಧರಿಸಿ ಎಫ್ಐಆರ್ ಕೂಡ ದಾಖಲಿಸಿ ಆಗಿದೆ. ಇದೀಗ ಆಕೆ ವಿಚಾರಣೆಗೆ ಹಾಜರಾಗಬೇಕು. ಇಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿರುವ ಕಾರಣ ಆಕೆಯನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಬೇಕಾಗುತ್ತದೆ. ಸಂತ್ರಸ್ತೆ ಎನ್ನಲಾದ ಯುವತಿ ವಿಡಿಯೋ ಬಿಡುಗಡೆಗೂ ಮುನ್ನ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲಿ, ಕಾನೂನಾತ್ಮಕವಾಗಿ ಬೇರೆಯದ್ದೇ ಆಗುತ್ತಿತ್ತು. ಈ ಪ್ರಕರಣದಲ್ಲಿ ಆದ ಒಂದೊಂದು ಬೆಳವಣಿಗೆ ಕೂಡ ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇದೀಗ ಸರಣಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಸಂತ್ರಸ್ತೆ ಎನ್ನಲಾದ ಯುವತಿ ಇದೀಗ ಆತ್ಮಹತ್ಯೆಯ ಬೆದರಿಕೆ ವಿಡಿಯೋ ಕೊನೆಯ ಅಸ್ತ್ರವನ್ನಾಗಿ ಪ್ರಯೋಗಿಸಿದ್ದಾಳೆ.

ಜಾರಕಿಹೊಳಿ ಜೇಬಿನ ಅಸ್ತ್ರ ಯಾವುದು ? ಇದೊಂದು ರಾಜಕೀಯ ಷಡ್ಯಂತ್ರ ಎಂದೇ ವಾದ ಮುಂದಿಟ್ಟುಕೊಂಡು ಬರುತ್ತಿರುವ ರಮೇಶ್ ಜಾರಕಿಹೊಳಿ ಇವತ್ತು ಸಂಜೆ ಬಿಡುಗಡೆ ಮಾಡಲಿರುವ ಮಹಾ ಸಾಕ್ಷಿ ಮಹತ್ವ ಪಡೆದುಕೊಂಡಿದೆ. ನಾನಾ ಆಯಾಮ ಪಡೆದುಕೊಂಡಿರುವ ಈ ಪ್ರಕರಣ ಇದೀಗ ಡಿ.ಕೆ. ಶಿವಕುಮಾರ್ ಅವರತ್ತ ಬೆರಳು ತೋರಿದೆ. ನಿನ್ನೆ ಸಂತ್ರಸ್ತೆ ಎನ್ನಲಾದ ಯುವತಿ ಪೋಷಕರೊಂದಿಗೆ ಮಾತನಾಡಿರುವ ಅಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪವಾಗಿದೆ. ಇದು ಜಾರಕಿಹೊಳಿ ಸಹೋದರರ ಪಾಲಿಗೆ ಅಲ್ಪ ಜಯ ಎಂದರೂ ತಪ್ಪಾಗಲಾರದು. ಸಿಡಿ ಬಿಡುಗಡೆಯಾದ ಕ್ಷಣದಿಂದ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಜಾರಕಿಹೊಳಿ ಸಹೋದರರ ಬಳಿ ಇನ್ನು ಯಾವ ಅಸ್ತ್ರಗಳಿವೆ ಎಂಬ ಗುಟ್ಟು ಮಾತ್ರ ಬಿಟ್ಟು ಕೊಟ್ಟಿಲ್ಲ.












Click it and Unblock the Notifications