ಸಿಡಿ ಪ್ರಕರಣ ದೂರು ವಾಪಸ್ ಹಿಂದಿನ ಕಾರಣ ಬಿಚ್ಚಿಟ್ಟ ದಿನೇಶ್ ಪರ ವಕೀಲ
ಬೆಂಗಳೂರು, ಮಾರ್ಚ್ 7: ರಾಜ್ಯದಲ್ಲಿ ಭಾರಿ ಚರ್ಚೆಗೀಡಾಗಿ, ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೂ ಕಾರಣವಾದ ಸಿಡಿ ಪ್ರಕರಣ ಭಾನುವಾರದಂದು ಮಹತ್ವದ ತಿರುವು ಪಡೆದುಕೊಂಡಿತು. ದೂರುದಾರ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ತಮ್ಮ ದೂರು ವಾಪಸ್ ಪಡೆಯಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದರು. ಈ ಬಗ್ಗೆ ಸ್ಪಷ್ಟನೆ ಇರುವ ಸುದೀರ್ಘ ಪತ್ರವನ್ನು ಮಾಧ್ಯಮಗಳ ಮುಂದಿಟ್ಟರು. ಇಷ್ಟಕ್ಕೂ ದಿನೇಶ್ ಅಂದು ದೂರು ನೀಡಿದ್ದೇಕೆ? ಇಂದು ಹಿಂಪಡೆಯಲು ಮುಂದಾಗಿದ್ದೇಕೆ? ಎಂಬುದರ ಬಗ್ಗೆ ದಿನೇಶ್ ಪರ ವಕೀಲ ಕುಮಾರ್ ಪಾಟೀಲ್ ವಿವರಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ನೀಡಿದ್ದ ದೂರನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆಯುತ್ತಿರುವುದು ನಿಜ. ದೂರು ಹಿಂಪಡೆಯುವ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ವಕೀಲ ಕುಮಾರ್ ಪಾಟೀಲ್ ಹೇಳಿದರು.
''ದಿನೇಶ್ ಅಂದು ದೂರು ನೀಡಿದ್ದು ನಿಜ. ಆದರೆ ಪೊಲೀಸರು ಇಲ್ಲಿ ತನಕ ಪ್ರಕರಣ ದಾಖಲಾಗಿಲ್ಲ. ಕಾನೂನಿನಲ್ಲಿ ದೂರು ಹಿಂಪಡೆಯಲು ಅವಕಾಶ ಇದೆ, ನನ್ನ ಕಕ್ಷೀದಾರ ದಿನೇಶ್ ಅವರ ಮೇಲೆ ಯಾವುದೇ ಒತ್ತಡ ಇಲ್ಲ. ಅವರು ಭಯಪಟ್ಟಿದ್ದಾರೆ ಎಂಬುದು ಸುಳ್ಳು'' ಎಂದು ಪಾಟೀಲ್ ಹೇಳಿದ್ದಾರೆ.

ಸಂತ್ರಸ್ತೆಗೆ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಿಂದ ಅನ್ಯಾಯ ಆಗಿದೆ. ಅಂಗಿ ಮುಳ್ಳಿಗೆ ಬಿದ್ದರೂ ಮುಳ್ಳು ಅಂಗಿಯ ಮೇಲೆ ಬಿದ್ದರೂ ಹರಿಯುವುದು ಅಂಗಿಯೇ. ಹೀಗಾಗಿ ದಿನೇಶ್ ಅವರ ಸೂಚನೆಯಂತೆ ದೂರು ಹಿಂಪಡೆಯಲಾಗುತ್ತಿದೆ. ದಿನೇಶ್ ಅವರ ಉದ್ದೇಶವನ್ನೇ ಹಾಳುಗೆಡವಂಥ ಪರಿಸ್ಥಿತಿ ಎದುರಾಯಿತು. ದೂರಿನಲ್ಲಿ ತಾಂತ್ರಿಕ ಸಮಸ್ಯೆಗಳಿವೆ, ಪೊಲೀಸರ ನಿರ್ಧಾರ ಏನೆಂಬುದನ್ನು ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications