Exclusive ಪತ್ರ: ಎಸ್ಐಟಿ ತಂಡದಿಂದಲೇ ಸಿಡಿ ಪ್ರಕರಣದ ಸಾಕ್ಷ್ಯನಾಶ!?
ಬೆಂಗಳೂರು, ಏಪ್ರಿಲ್ 4: ಸಿಡಿ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ. ಎಸ್ಐಟಿ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ಸ್ವತಃ ಸಂತ್ರಸ್ತ ಯುವತಿಯೇ ಪತ್ರವೊಂದನ್ನು ಬರೆದಿದ್ದಾರೆ.
ಸಿಡಿ ಪ್ರಕರಣವನ್ನು ಎಸ್ಐಟಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿಲ್ಲ. ನನಗೆ ಪ್ರತಿಬಾರಿ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗುತ್ತಿದೆ. ಆರೋಪಿ ಸ್ಥಾನದಲ್ಲಿ ಇರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ವಿಚಾರಣೆ ಮಾಡುತ್ತಿಲ್ಲ. ಅವರನ್ನು ರಾಜಾರೋಷವಾಗಿ ಓಡಾಡಿಕೊಂಡಿರಲು ಬಿಟ್ಟಿದ್ದೀರಿ ಎಂದು ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಆರ್ಟಿ ನಗರದ ಪಿಜಿಯಲ್ಲಿ ಎಸ್ಐಟಿ ಮಹಜರು
ಸಿಡಿ ಪ್ರಕರಣದಲ್ಲಿ ಸ್ವತಃ ಎಸ್ಐಟಿ ಅಧಿಕಾರಿಗಳೇ ಕೆಲವು ಸಾಕ್ಷ್ಯಗಳ ನಾಶಕ್ಕೆ ಮುಂದಾಗಿದ್ದಾರೆ. ಹೀಗೆ ಆದರೆ ನನಗೆ ನ್ಯಾಯ ಸಿಗುವುದಾದರೂ ಹೇಗೆ?. ನಾನು ಈ ಪ್ರಕರಣದಲ್ಲಿ ಸಂತ್ರಸ್ತೆ ಆಗಿದ್ದೇನೆ. ನನಗೆ ನ್ಯಾಯ ಒದಗಿಸಬೇಕು. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಲಾಗಿದೆ. ಯುವತಿಯೇ ಬರೆದಿದ್ದಾರೆ ಎನ್ನಲಾದ ಪತ್ರ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಹಾಗಿದ್ದರೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ಏನಿದೆ ಎನ್ನುವುದನ್ನು ಇಲ್ಲಿ ಯಥವತ್ತಾಗಿ ನೀಡಲಾಗಿದೆ...ಓದಿ.
ಎಸ್ ಐಟಿ ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ ನನ್ನನ್ನು ಆರೋಪಿ ಮಾಡುವ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿ ಸಿಡಿ ಲೇಡಿ ಕಮಲ್ ಪಂತ್ ಅವರಿಗೆ ಪತ್ರ ಬರೆದಿದ್ದಾಳೆ. ಪತ್ರದ ಪ್ರತಿ ವೈರಲ್ ಆಗಿದೆ. #KamalPant #CDCase #RameshJarkiholiCDCase pic.twitter.com/8aqzTXAYMo
— oneindiakannada (@OneindiaKannada) April 4, 2021
ಇವರಿಗೆ ದಿನಾಂಕ: 04-04-2021
ಶ್ರೀ ಕಮಲ್ ಪಂಥ್, ಐಪಿಎಸ್
ಪೊಲೀಸ್ ಆಯುಕ್ತರು, ಬೆಂಗಳೂರು ನಗರ
ಇನ್ ಫೆಂಟ್ರಿ ರಸ್ತೆ, ಬೆಂಗಳೂರು
ಮಾನ್ಯರೇ,
ವಿಷಯ: ನಾನು ನೀಡಿದ ಅತ್ಯಾಚಾರ ಪ್ರಕರಣದ ದೂರಿನ ವಿಚಾರಣೆಯಲ್ಲಿ ಆರೋಪಿ ರಕ್ಷಿಸುವ ಸಲುವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಿ ತನಿಖಾಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರುತ್ತಿರುವ ಬಗ್ಗೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 16-03-2021ರಂದು ನನ್ನ ವಕೀಲರಾದ ಶ್ರೀ ಜಗದೀಶ್ ಕೆ ಎನ್ ಅವರ ಮುಖಾಂತರ ತಮಗೆ ಮಾಜಿ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಮಾಡಿ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಹಾಕಿದ ಸಂಬಂಧ ದೂರನ್ನು ಸಲ್ಲಿಸಿರುತ್ತೇನೆ.
ಈ ದೂರನ್ನು ತಾವೇ ಸ್ವೀಕರಿಸಿ ನನಗೆ ನ್ಯಾಯ ಕೊಡಿಸುವ ಸಲುವಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿ ಮೊಕದ್ದಮೆ ಸಂಖ್ಯೆ 30/2021ರಲ್ಲಿ ಐಪಿಸಿ 354(A), 506, 504, 376(C), 417 ಹಾಗೂ IT Act 67(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ನಂತರ ಪೊಲೀಸರು ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಮತ್ತು ಭದ್ರತೆ ಕಲ್ಪಿಸುವಂತೆ ಮಾಹಿತಿ ಒದಗಿಸುವಂತೆ ಪೊಲೀಸ್ ನೋಟಿಸ್ ನೀಡಲಾಗಿರುತ್ತದೆ.
ನಂತರ ನಾನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಲಾಗಿ ನನ್ನ 164 ಹೇಳಿಕೆ ದಾಖಲಿಸಲು ಸೂಕ್ತ ಭದ್ರತೆಯೊಂದಿಗೆ ನ್ಯಾಯಾಲಯದಲ್ಲಿ ಅವಕಾಶ ಮಾಡಿಕೊಟ್ಟ ಕಾರಣ 30-03-2021ರಂದು ನಾನು ನನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾದೆನು. ಹಾಜರಾದ ದಿನ ಎಸ್ಐಟಿ ಮುಖ್ಯಸ್ಥರಾದ ಶ್ರೀ ಸೌಮೇಂದು ಮುಖರ್ಜಿ ಅವರು ನನ್ನನ್ನು ವಿಚಾರಣೆಗಾಗಿ ಆಡುಗೋಡಿ ಟೆಕ್ನಿಕಲ್ ವಿಭಾಗಕ್ಕೆ ಭದ್ರತೆಯೊಂದಿಗೆ ಕರೆದೊಯ್ದರು. ಅಲ್ಲಿ ಅವರೊಂದಿಗೆ ಎಸ್ಐಟಿ ತಂಡದ ತನಿಖಾಧಿಕಾರಿಗಳಾದ ಶ್ರೀ ಸಂದೀಪ್ ಪಾಟೀಲ್(ಐಪಿಎಸ್), ಹಾಗೂ ಶ್ರೀಮತಿ ಕವಿತಾ (ಎಸಿಪಿ) ಇವರು ನನಗೆ ಪ್ರಕರಣ ಸಂಬಂಧವಾಗಿ ಪ್ರಶ್ನೆಗಳನ್ನು ಕೇಳಿದರು. ನಾನು ಸಂಪೂರ್ಣವಾಗಿ ಎಲ್ಲ ವಿಚಾರಗಳನ್ನು ಅವರಿಗೆ ವಿವರಿಸಿದೆನು. ನಂತರ ದಿನಾಂಕ 31-03-2021ರಂದು ನನಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅಲ್ಲಿಂದ ಆಡುಗೋಡಿ ಟೆಕ್ನಿಕಲ್ ವಿಭಾಗಕ್ಕೆ ಕರೆದೊಯ್ದು 161 ಹೇಳಿಕೆ ಪಡೆದಿರುವ ಪ್ರಕ್ರಿಯೆ ಪ್ರಾರಂಭಿಸಿದರು.
ನಂತರ ಸಮಯವಾದ ಕಾರಣ 01-04-2021ರಂದು ನನ್ನ 161 ಹೇಳಿಕೆಯ ಮುಂದುವರಿದ ವಿಚಾರಗಳನ್ನು ದಾಖಲಿಸಿಕೊಳ್ಳಲಾಯಿತು. ನನಗೆ ಒಟ್ಟಾರೆ ಪ್ರಕ್ರಿಯೆಗಳನ್ನು ನೋಡುತ್ತಿದ್ದರೆ ನಾನು ಸಂತ್ರಸ್ತೆಯೋ ಇಲ್ಲವೋ ಪ್ರಕರಣದ ಆರೋಪಿಯೋ ಎಂದು ಅನುಮಾನ ಮೂಡಿದೆ. ಪ್ರಕರಣದ ಆರೋಪಿಗೆ ಕೇವಲ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ವಕೀಲರೊಂದಿಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿದ್ದು ಅವರನ್ನು ಮುಕ್ತವಾಗಿ ಓಡಾಡಿಕೊಂಡು ಇರಲು ಎಸ್ಐಟಿ ತಂಡ ಅವಕಾಶ ಮಾಡಿಕೊಟ್ಟು ನನ್ನನ್ನು ನಿರಂತರವಾಗಿ ಒಂದು ದಿನವೂ ಬಿಡುವು ನೀಡದಂತೆ ಹೇಳಿಕೆಗಳನ್ನು ಪಡೆಯಲಾಗುತ್ತಿದೆ.
ನನ್ನ ಹೆಸರು ರಮೇಶ್ ಜಾರಕಿಹೊಳಿ ಅವರು ನೀಡಿದ ದೂರಿನಲ್ಲಿ ಉಲ್ಲೇಖವಾಗದಿದ್ದರೂ ನನ್ನ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿ ಇರುವ ಸಾಕ್ಷ್ಯಗಳನ್ನು ನಾಶಮಾಡಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸರ್ಕಾರದ ಒತ್ತಡಕ್ಕೆ ಮಣಿದಿರುತ್ತಾರೆ.
ಈ ಕ್ಷಣದವರೆಗೂ ನನ್ನ ತೇಜೋವಧೆ ಮಾಡುವಂತಾ ಅಸಂಬದ್ಧ ಕಪೋಲ ಕಲ್ಪಿತ ವಿಚಾರಗಳನ್ನು ಮಾಧ್ಯಮಗಳಲ್ಲಿ ವರದಿಯಾಗುವಂತೆ ಮಾಡುವ ಮೂಲಕ ಆರೋಪಿಯ ರಕ್ಷಣೆಗೆ ಮುಂದಾಗಿರುವುದು ಎದ್ದು ಕಾಣುತ್ತಿದೆ.
ನಾನು ಪ್ರಕರಣದ ದೂರುದಾರಳಾಗಿದ್ದು ನನ್ನನ್ನು ಚಾರಿತ್ರ್ಯ ವಧೆ ಮಾಡುವಂತಹ ಷಡ್ಯಂತ್ರವನ್ನು ರಮೇಶ್ ಜಾರಕಿಹೊಳಿ ಮಾಡುತ್ತಿದ್ದು, ಎಸ್ಐಟಿ ಅಧಿಕಾರಿಗಳ ಮೇಲೆ ತೀವ್ರವಾದ ಒತ್ತಡವನ್ನು ಸರ್ಕಾರದಿಂದ ಹಾಕಿಸುತ್ತಿದ್ದಾರೆ.
ಪ್ರತಿನಿತ್ಯ ಮಾಧ್ಯಮಗಳಲ್ಲಿ ನಾನು ಅತ್ಯಾಚಾರದ ಸಂತ್ರಸ್ತೆ ಎಂಬುದನ್ನು ಮರೆಮಾಡಲು ಅನೇಕ ಸೃಷ್ಟಿತ ಸುದ್ದಿಗಳನ್ನು ಅವಹೇಳನಕಾರಿಯಾಗಿ ಪ್ರಸಾರ ಮಾಡಲಾಗುತ್ತಿದೆ. ಈ ಕ್ಷಣದವರೆಗೂ ನನಗೆ ನಾನು ನೀಡಿದ ದೂರಿನ ವಿಚಾರವಾಗಿ ಆರೋಪಿ ವಿರುದ್ಧ ಯಾವುದೇ ಗಂಭೀರ ವಿಚಾರಣೆ ನಡೆಸುತ್ತಿರುವ ಬಗ್ಗೆ ನನಗೆ ವಿಶ್ವಾಸ ಬಂದಿಲ್ಲ. ಇದರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ಆರೋಪಮುಕ್ತರಾಗಿ ಹೊರಗೆ ಬರುತ್ತಾರೆ ಎಂದು ಹೇಳಿರುವುದು ನನಗೆ ತೀವ್ರ ಆತಂಕ ಉಂಟು ಮಾಡಿದೆ.
ನನ್ನ ಸಹಮತ ಪಡೆಯದೇ ಈ ಪ್ರಕರಣಕ್ಕೆ ಗೃಹ ಇಲಾಖೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿರುವುದಕ್ಕೆ ನನ್ನ ಆಕ್ಷೇಪವಿದೆ. ಇಡೀ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತಿರುವ ಬಗ್ಗೆ ನನಗೆ ನಂಬಿಕೆ ವಿಶ್ವಾಸ ಇಲ್ಲದಂತಾಗಿದೆ. ದಯಮಾಡಿ ತಾವು ನನ್ನ ದೂರನ್ನು ಒಬ್ಬ ಸಂತ್ರಸ್ತ, ಅಸಹಾಯಕ, ಯುವತಿಯ ದೃಷ್ಟಿಯಿಂದ ನೋಡುವ ಮೂಲಕ ಸರ್ಕಾರದ ಒತ್ತಡಗಳಿಗೆ ಮಣಿಯದೇ ಆರೋಪಿಗೆ ಯಾವುದೇ ರಿಯಾಯತಿ ನೀಡದೇ ನ್ಯಾಯ ಸಮ್ಮತವಾಗಿ ವಿಚಾರಣೆ ನಡೆಸಬೇಕೆಂದು ಕಳಕಳಿಯಿಂದ ಪ್ರಾರ್ಥಿಸುತ್ತೇನೆ.
Recommended Video
ತಮ್ಮ
ನಂಬುಗೆಯ
ಸಂತ್ರಸ್ತ
ಯುವತಿ