ಸುದೀರ್ಘ ರಜೆ ಬಳಿಕ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಕರ್ತವ್ಯಕ್ಕೆ ಹಾಜರು
ಬೆಂಗಳೂರು, ಜು. 30: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಸುದೀರ್ಘ ರಜೆ ಮೇಲೆ ತೆರಳಿದ್ದ ಸೌಮೇಂದು ಮುಖರ್ಜಿ ಇದೀಗ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ತನಿಖೆ ನೇತೃತ್ವ ವಹಿಸಿ ನಿಷ್ಪಕ್ಷಪಾತ ತನಿಖೆ ಮಾಡುತ್ತಿದ್ದರು.
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ನಾನಾ ತಿರುವು ಪಡೆಯಿತು. ಪ್ರಕರಣದ ಮೇಲೆ ರಾಜಕೀಯ ಒತ್ತಡ ಬಿದ್ದ ಆರೋಪ ಕೇಳಿ ಬಂತು. ಅಶ್ಲೀಲ ಸಿಡಿ ಪ್ರಕರಣದಲ್ಲಿ ನಿಜವಾದ ತಪ್ಪಿಸ್ಥರನ್ನು ಬಂಧಿಸಲು ಸೌಮೇಂದು ಮುಖರ್ಜಿ ಮುಂದಾಗಿದ್ದರು. ತನಿಖಾ ಕಾಲದಲ್ಲಿ ಸಿಕ್ಕಿದ್ದ ಸಾಕ್ಷ್ಯಾಧಾರಗಳನ್ನು ಆಧರಿಸಿ ಎರಡೂ ಪ್ರಕರಣದಲ್ಲಿ ತಪ್ಪಿಸ್ಥರನ್ನು ಪತ್ತೆ ಮಾಡಲು ಮುನ್ನಡಿ ಬರೆದಿದ್ದ ವೇಳೆ ಸರ್ಕಾರವೇ ಅವರನ್ನು ಬಲವಂತವಾಗಿ ರಜೆ ಮೇಲೆ ಕಳಿಸಿತು ಎಂಬ ಮಾತು ಕೇಳಿ ಬಂದಿತ್ತು.
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ನಾನಾ ತಿರುವು ಪಡೆಯಿತು. ರಾಜಕೀಯ ಸ್ವರೂಪ ಪಡೆದುಕೊಂಡಿತು. ಇದರ ಬೆನ್ನಲ್ಲೇ ಅನಾರೋಗ್ಯ ಕಾರಣ ನೀಡಿ ತನಿಖಾ ತಂಡದ ಮುಖ್ಯಸ್ಥರು ರಜೆ ಮೇಲೆ ಹೊರಟಿದ್ದರು. ಮುಂದೆ ಓದಿ...
ಎಸ್ಐಟಿ ಮುಖಸ್ಯರಿಲ್ಲದೇ ಕೋರ್ಟ್ ಗರಂ
ಸೌಮೇಂದು ಮುಖರ್ಜಿ ಅವರನ್ನು ಸರ್ಕಾರವೇ ಉದ್ದೇಶ ಪೂರ್ವಕವಾಗಿ ರಜೆ ಮೇಲೆ ಕಳಿಸಿತು ಎಂಬ ಮಾತುಗಳು ಕೇಳಿ ಬಂದಿದ್ದವು. ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡದ ಮುಖ್ಯಸ್ಥರ ಸಹಿ ಇಲ್ಲದೇ ಸಲ್ಲಿಸಿದ ವರದಿ ಬಗ್ಗೆ ಹೈಕೋರ್ಟ್ ಕೆಂಡಾಮಂಡಲವಾಗಿತ್ತು. ತನಿಖಾ ತಂಡದ ಮುಖ್ಯಸ್ಥರ ಸಹಿ ಇಲ್ಲದೇ ವರದಿ ಸಲ್ಲಿಸದ ಬಗ್ಗೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ಇದೇ ವಿಚಾರವನ್ನು ಇತ್ತೀಚೆಗೆ ಸಹ ಕೈಕೋರ್ಟ್ ಪ್ರಸ್ತಾಪಿಸಿ, ತನಿಖಾ ತಂಡದ ಮುಖ್ಯಸ್ಥರು ರಜೆ ಮೇಲೆ ತೆರಳಿದ್ದರೆ ಹೊಸಬರನ್ನು ನೇಮಿಸಿ ಅವರ ಸಹಿ ಸಮೇತ ವರದಿ ಸಲ್ಲಿಸುವಂತೆ ಹೈಕೋರ್ಟ್ ಗರಂ ಆಗಿತ್ತು. ಇದೀಗ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಸೌಮೇಂದು ಮುಖರ್ಜಿ, ಮೂರು ತಿಂಗಳ ರಜೆ ಮುಗಿಸಿ ವಾಪಸು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಡೆಸಿದ ತನಿಖಾ ವರದಿಗೆ ನಿಜವಾಗಿಯೂ ಸಹಿ ಹಾಕುತ್ತಾರಾ? ಅಥವಾ ಬೇರೆ ತನಿಖಾ ಮುಖ್ಯಸ್ಥರನ್ನು ನೇಮಿಸಿ ಅವರ ಸಹಿ ಪಡೆಯಲು ಸೂಚಿಸುತ್ತಾರಾ ಕಾದು ನೋಡಬೇಕು.
ಎಸ್ಐಟಿ ತನಿಖೆಯಿಂದ ಮುಖರ್ಜಿಯನ್ನು ಹೊರಗಿಟ್ಟರಾ?
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸಮರ್ಥ ತನಿಖೆಗೆಂದು ಸರ್ಕಾರವೇ ಸೌಮೇಂದು ಮುಖರ್ಜಿಯನ್ನು ನೇಮಿಸಿತ್ತು. ಸಂತ್ರಸ್ತ ಆರೋಪಿ ದೂರು ನೀಡುವ ಮೊದಲೇ ರಮೇಶ್ ಜಾರಕಿಹೊಳಿ ಅಪರಿಚಿತರ ವಿರುದ್ಧ ಬ್ಲಾಕ್ ಮೇಲ್ ದೂರು ನೀಡಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ದಕ್ಷ ಅಧಿಕಾರಿ ಸೌಮೇಂದು ಮುಖರ್ಜಿ ಅವರ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗಿತ್ತು. ತನಿಖಾ ತಂಡದಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ , ಡಿಸಿಪಿ ರವಿಕುಮಾರ್, ಸೇರಿದಂತೆ ಅಪರಾಧ ಪ್ರಕರಣ ತನಿಖೆಯಲ್ಲಿ ಚಾಣಾಕ್ಷತೆ ಹೊಂದಿದವರನ್ನೇ ತಂಡಕ್ಕೆ ಕಳುಹಿಸಲಾಗಿತ್ತು.
ಆರಂಭದ ತನಿಖೆಯಲ್ಲಿಯೇ ಹನಿಟ್ರ್ಯಾಪ್ ಶಂಕೆ
ಸಿಡಿ ಪ್ರಕರಣದ ಆರಂಭದ ತನಿಖೆಯಲ್ಲಿಯೇ ಹನಿಟ್ರ್ಯಾಪ್ ಎಂಬುದಕ್ಕೆ ತನಿಖಾ ತಂಡ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿತ್ತು. ಸಾಕಷ್ಟು ಬೆಳವಣಿಗೆಗಳ ನಡುವೆ ಸಂತ್ರಸ್ತ ಯುವತಿ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ ದೂರು ನೀಡಿದ್ದರು. ಈ ಪ್ರಕರಣದ ತನಿಖೆಯಲ್ಲಿ ತಾರ್ಕಿಕ ಅಂತ್ಯ ಕಾಣಿಸುವ ಹಂತದಲ್ಲಿಯೇ ಸೌಮೇಂದು ಮುಖರ್ಜಿ ಅವರನ್ನು ಸರ್ಕಾರವೇ ಉದ್ದೇಶ ಪೂರ್ವಕವಾಗಿ ರಜೆ ಮೇಲೆ ತೆರಳಲು ಸೂಚಿಸಿದೆ.
Recommended Video
ತನಿಖಾ ವರದಿಗೆ ಎಸ್ಐಟಿ ಮುಖ್ಯಸ್ಥರ ಸಹಿ ಬೀಳುವುದೇ?
ಮೊದಲು ಕೇವಲ ಒಂದು ತಿಂಗಳ ರಜೆ ಮೇಲೆ ತೆರಳಿದ ಸೌಮೇಂದು ಮುಖರ್ಜಿ ಹತ್ತು ದಿನ ಕೂಡ ಮನೆಯಲ್ಲಿರಲಾಗದೇ ತನಿಖೆಯನ್ನು ಬೇಗ ಮುಗಿಸಿ, ನಾನು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಹೇಳಿಕೊಂಡಿದ್ದಾರೆ. ಆದರೆ, ಜಾರಕಿಹೊಳಿ ಪ್ರಕರಣ ನಾನಾ ಸ್ವರೂಪ ಪಡೆದ ಪರಿಣಾಮ ಸುಮಾರು ಮೂರು ತಿಂಗಳು ಕಾಲ ರಜೆ ಪಡೆದು ಇದೀಗ ಅವರೇ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತನಿಖಾ ತಂಡದ ಮುಖ್ಯಸ್ಥರ ಸಹಿ ಇಲ್ಲದ ತನಿಖಾ ವರದಿಗಳನ್ನು ನ್ಯಾಯಾಲಯ ಮಾನ್ಯ ಮಾಡಿಲ್ಲ. ತನಗೆ ಗೊತ್ತಿಲ್ಲದೇ ನಡೆದ ತನಿಖಾ ವರದಿಗೆ ಸೌಮೇಂದು ಮುಖರ್ಜಿ ಸಹಿ ಹಾಕುತ್ತಾರಾ ? ಎಂಬುದು ಯಕ್ಷ ಪ್ರಶ್ನೆಯಾಗಿದೆ.