ಮೇಯರ್ ಚುನಾವಣೆ : ಪಕ್ಷೇತರ ಸದಸ್ಯರ ಜೊತೆ ರಾಮಲಿಂಗಾ ರೆಡ್ಡಿ ಸಭೆ
ಬೆಂಗಳೂರು, ಸೆಪ್ಟೆಂಬರ್ 11 : ಅತ್ತ ರಾಜ್ಯ ಸರ್ಕಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೈತ್ರಿ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಬಿಎಂಪಿಯ ಪಕ್ಷೇತರ ಕಾರ್ಪೊರೇಟರ್ಗಳ ಜೊತೆ ಸಭೆ ನಡೆಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೋಟೆಲ್ನಲ್ಲಿ ರಾಮಲಿಂಗಾ ರೆಡ್ಡಿ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು 8 ಪಕ್ಷೇತರ ಸದಸ್ಯರ ಜೊತೆ ಸಭೆ ನಡೆಸಿದ್ದಾರೆ. ಸೆ.28ರಂದು ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಇರುವುದರಿಂದ ಈ ಸಭೆ ಮಹತ್ವ ಪಡೆದಿದೆ.

ಬಿಬಿಎಂಪಿಯಲ್ಲಿ ಮೂರು ವರ್ಷದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. ಕಾಂಗ್ರೆಸ್ ಮೇಯರ್ ಪಟ್ಟವನ್ನು ಜೆಡಿಎಸ್ ಉಪ ಮೇಯರ್ ಪಟ್ಟವನ್ನು ಹಂಚಿಕೊಂಡಿವೆ. 'ಈ ವರ್ಷವೂ ಮೈತ್ರಿಗೆ ಬೆಂಬಲ ನೀಡಬೇಕು' ಎಂದು ರಾಮಲಿಂಗಾ ರೆಡ್ಡಿ ಅವರು ಪಕ್ಷೇತರ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.
2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14, 8 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಬಿಜೆಪಿ ದೊಡ್ಡ ಪಕ್ಷವಾದರೂ ಕಾಂಗ್ರೆಸ್-ಜೆಡಿಎಸ್-ಪಕ್ಷೇತರರ ಮೈತ್ರಿಯಿಂದಾಗಿ ಪಕ್ಷಕ್ಕೆ ಅಧಿಕಾರ ಕೈ ತಪ್ಪಿದೆ.
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರು ಪಕ್ಷೇತರ ಕಾರ್ಪೊರೇಟರ್ಗಳನ್ನು ಭೇಟಿ ಮಾಡಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ನಾಯಕರು ಪಕ್ಷೇತರರನ್ನು ಭೇಟಿಯಾಗಿ ಮೈತ್ರಿಗೆ ಈ ವರ್ಷವೂ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಸೆ.28ರಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಆದರೆ, ಈ ಬಾರಿ ಮೇಯರ್ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ. ಮೇಯರ್ ಪಟ್ಟಕ್ಕೆ ಪ್ರಬಲ ಪೈಪೋಟಿ ನಡೆಯುತ್ತಿದೆ.











Click it and Unblock the Notifications