ಡಾಂಬರು ಭಾಗ್ಯ ಕಾಣದ ರಾಜರಾಜೇಶ್ವರಿ ನಗರದ ರಸ್ತೆ
Recommended Video
ಬೆಂಗಳೂರು, ಅಕ್ಟೋಬರ್ 05 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಕಾರ್ಯಾಚರಣೆ ಆರಂಭಿಸಿದೆ. ಆದರೆ, ನಾಲ್ಕು ತಿಂಗಳು ಕಳೆದರೂ ರಸ್ತೆಯೊಂದಕ್ಕೆ ಡಾಂಬರು ಭಾಗ್ಯ ಸಿಕ್ಕಿಲ್ಲ. ರಸ್ತೆ ಸರಿಪಡಿಸುವಂತೆ ನಿವಾಸಿಗಳು ಬಿಬಿಎಂಪಿಯನ್ನು ಒತ್ತಾಯಿಸುತ್ತಿದ್ದಾರೆ.
ರಸ್ತೆಯ ದುಸ್ಥಿತಿ ತೆರೆದಿಡುವ ಓದುಗರು ಕಳುಹಿಸಿದ ಚಿತ್ರಗಳು
ರಾಜರಾಜೇಶ್ವರಿ ನಗರದ ಬಿಎಚ್ಇಎಲ್ ಲೇಔಟ್ನ ರಸ್ತೆಯ ಸ್ಥಿತಿ ಇದು. ಒನ್ ಇಂಡಿಯಾ ಕನ್ನಡದ ಓದುಗರೊಬ್ಬರು ಬಡಾವಣೆಯ ರಸ್ತೆಯ ಸ್ಥಿತಿಯ ಚಿತ್ರ, ವಿಡಿಯೋವನ್ನು ಕಳುಹಿಸಿದ್ದಾರೆ. ಎಲ್ಜಿ ಗೋಡಾನ್ ಬಳಿ ಇರುವ ಕೆಂಪೇಗೌಡ ರಸ್ತೆ ಆರಂಭದಿಂದ ಕೊನೆಯ ತನಕ ಹಾಳಾಗಿ ಹೋಗಿದೆ.
4ನೇ ಮೈನ್ನ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಗಾಗಿ ಚೆನ್ನಾಗಿದ್ದ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಪೈಪ್ ಅಳವಡಿಕೆ ಮಾಡಿ, ಕಾಮಗಾರಿ ಮುಗಿದು ನಾಲ್ಕು ತಿಂಗಳು ಕಳೆದಿದೆ. ಆದರೆ, ರಸ್ತೆಗೆ ಮಾತ್ರ ಡಾಂಬರು ಭಾಗ್ಯ ಸಿಕ್ಕಿಲ್ಲ.
ನಿಮ್ಮ ಬಡಾವಣೆಯಲ್ಲಿ ರಸ್ತೆ ಗುಂಡಿ ಬಾಯ್ತೆರೆದು ನಿಂತಿದ್ದರೆ ಫೋಟೋ ಕಳಿಸಿ
ಚೆನ್ನಾಗಿದ್ದ ರಸ್ತೆಯನ್ನು ಅಗೆದು ಹಾಕಿದ ಬಳಿಕ ಸಂಬಂಧಪಟ್ಟವರು ಇತ್ತ ತಿರುಗಿ ನೋಡಿಲ್ಲ. ನಿರಂತರವಾಗಿ ಸುರಿದ ಮಳೆಯಿಂದಾಗಿ ರಸ್ತೆ ಮತ್ತಷ್ಟು ಹದಗೆಟ್ಟಿದ್ದು, ನಿವಾಸಿಗಳು, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿದ್ದಾರೆ.
ಒಳಚರಂಡಿ ಪೈಪುಗಳು ಚೆನ್ನಾಗಿತ್ತು, ಆದರೂ ಅದನ್ನು ಬದಲಾವಣೆ ಮಾಡಲಾಗಿದೆ. ಪ್ರತಿ ಮನೆಗೆ ಮತ್ತೆ ಒಳಚರಂಡಿ ಸಂಪರ್ಕ ಕಲ್ಪಿಸಲು ಕಾಮಗಾರಿಯ ಗುತ್ತಿಗೆ ಪಡೆದವರು ನಿವಾಸಿಗಳಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಕಾರ್ಯಾಚರಣೆ ಆರಂಭಿಸಿರುವ ಬಿಬಿಎಂಪಿ ಅಧಿಕಾರಿಗಳು, ಡಾಂಬರು ಭಾಗ್ಯವಿಲ್ಲದ ಈ ರಸ್ತೆಯನ್ನು ಒಮ್ಮೆ ನೋಡಲಿ, ತಕ್ಷಣ ಇದನ್ನು ರಿಪೇರಿ ಮಾಡಿಸಲಿ ಎಂಬುದು ನಿವಾಸಿಗಳ ಒತ್ತಾಯವಾಗಿದೆ.