ಆರ್. ಆರ್. ನಗರ ಚುನಾವಣೆ; ಅಕ್ರಮ ತಡೆಗೆ ಬಿಬಿಎಂಪಿ ಕ್ರಮಗಳು
ಬೆಂಗಳೂರು, ಅಕ್ಟೋಬರ್ 04: ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕ್ಷೇತ್ರವಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, 10ರಂದು ಫಲಿತಾಂಶ ಪ್ರಕಟವಾಗಲಿದೆ.
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣೆ ವೇಳೆ ಅಕ್ರಮಗಳು ನಡೆಯದಂತೆ, ನೀತಿ ಸಂಹಿತೆ ಉಲ್ಲಂಘನೆ ತಡೆಯಲು ಪೊಲೀಸ್, ಬಿಬಿಎಂಪಿ ಅಧಿಕಾರಿಗಳ ತಂಡ ಜಂಟಿಯಾಗಿ ಕೆಲಸ ಮಾಡಲಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ನೇತೃತ್ವದಲ್ಲಿ ಚುನಾವಣೆಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳ ಸಭೆ ನಡೆಯಿತು. ಹಲವಾರು ಸೂಚನೆಗಳನ್ನು ಸಭೆಯಲ್ಲಿ ನೀಡಲಾಯಿತು.
ಆಡಳಿತಾರೂಢ ಬಿಜೆಪಿ ಸೇರಿದಂತೆ ಯಾವುದೇ ಪಕ್ಷ ಇನ್ನೂ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಅಕ್ಟೋಬರ್ 16ರ ತನಕ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ.

31 ನೋಡೆಲ್ ಅಧಿಕಾರಿಗಳ ನೇಮಕ
ಉಪ ಚುನಾವಣೆ ಸಂಬಂಧ 31 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನೀತಿಸಂಹಿತೆ ಜಾರಿ, ಮತಗಟ್ಟೆ ನಿರ್ವಹಣೆ, ಇವಿಎಂ ಮತ್ತು ವಿವಿಪ್ಯಾಟ್ಗಳ ವ್ಯವಸ್ಥೆ, ಚುನಾವಣಾ ಖರ್ಚು ವೆಚ್ಚಗಳು ಸೇರಿದಂತೆ ಇನ್ನಿತರೆ ವಿಯಗಳ ಕುರಿತು ಅಧಿಕಾರಿಗಳ ನೇಮಕವಾಗಿದೆ.

27 ಪ್ಲೈಯಿಂಗ್ ಸ್ಕ್ವಾಡ್
ನೋಡೆಲ್ ಅಧಿಕಾರಿಗಳು ಆದಾಯ ತೆರಿಗೆ, ಅಬಕಾರಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದಾರೆ. ಆರ್. ಆರ್. ನಗರ ವ್ಯಾಪ್ತಿಯಲ್ಲಿ 9 ವಾರ್ಡ್ಗಳಿವೆ. ವಾರ್ಡ್ಗಳಿವೆ ಚುನಾವಣಾ ಆಯೋಗದ ಪ್ರಕಾರ 18 ಪ್ಲೈಯಿಂಗ್ ಸ್ಕ್ವಾಡ್ಗಳನ್ನು 3 ಮೂರು ಪಾಳಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಅದನ್ನು 27ಕ್ಕೆ ಹೆಚ್ಚಿಸಲಾಗಿದೆ. ಈ ತಂಡದಲ್ಲಿ ಪಾಲಿಕೆ, ಪೊಲೀಸ್, ಅಬಕಾರಿ ಅಧಿಕಾರಿಗಳು ಇದ್ದಾರೆ.

688 ಮತಗಟ್ಟೆಗಳ ಸ್ಥಾಪನೆ
ಉಪ ಚುನಾವಣೆ ಮತದಾನಕ್ಕೆ 688 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. 10 ಮತಗಟ್ಟೆಗಳಿಗೆ ಒಬ್ಬರಂತೆ 70 ಸೆಕ್ಟರ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮ/ಪತ್ರಿಕೆಗಳಲ್ಲಿ ದೂರು ಬಂದರೆ 24 ಗಂಟೆಗಳೊಳಗಾಗಿ ತನಿಖೆ ನಡೆಸಿ ಕ್ರಮಕೈಗೊಂಡು ವರದಿ ನೀಡಲು ಸೂಚನೆ ನೀಡಲಾಗಿದೆ.
Recommended Video

ನೀತಿ ಸಂಹಿತೆ ಕಾಪಾಡುವುದು
ಆರ್. ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳ ಭಾವಚಿತ್ರ, ಹೆಸರಿರುವ ಭಿತ್ತಿ ಪತ್ರ, ನಾಮಫಲಗಳನ್ನು ಕೂಡಲೆ ತೆರವುಗೊಳಿಸಲು ಸೂಚಿಸಲಾಗಿದೆ. ಬಸ್ ನಿಲ್ದಾಣ, ಶುದ್ಧ ಕುಡಿಯುವ ನೀರಿನ ಘಟಕ, ಉದ್ಯಾನವನಗಳಲ್ಲಿ ಭಾವಚಿತ್ರ ಹಾಗೂ ಹೆಸರುಗಳಿದ್ದರೆ ತೆಗೆಯಲು ಸೂಚಿಸಲಾಗಿದೆ.












Click it and Unblock the Notifications