ಬಿಬಿಎಂಪಿ: ಮಹದೇವಪುರದ 5 ಕಡೆ ಇಂದು ಒತ್ತುವರಿ ತೆರವು ಆರಂಭ
ಬೆಂಗಳೂರು, ಸೆಪ್ಟಂಬರ್ 19: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಳೆ ಪ್ರವಾಹಕ್ಕೆ ಕಾರಣವಾಗಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸೋಮವಾರವೂ ಮುಂದುವರಿದಿದೆ. ಇಂದು ಮಹದೇವಪುರ ವ್ಯಾಪ್ತಿಯ ಐದು ಕಡೆ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ.
ಈ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಸ್ತೆ ಪಕ್ಕ, ಸೇತುವೆಗಳನ್ನು ತೆರವು ಕಾರ್ಯ ಸೋಮವಾರ ಬೆಳಗ್ಗೆ 10.30ರಿಂದ ಆರಂಭವಾಗಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡ ದೊಡ್ಡ ದೊಡ್ಡ ವಿಲ್ಲಾಗಳ ಬಳಿ ಸುಳಿಯದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು, ಮನೆ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಿಬಿಎಂಪಿ ಸಹಾಯ ಎಂಜಿನಿಯರ್ ರಾಘವೇಂದ್ರ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಬಿಬಿಎಂಪಿ ನಿಯೋಜಿತ ಮಾರ್ಷಲ್ಗಳು ಇಂದು ಐದು ಕಡೆಗಳಲ್ಲಿ ಕಾರ್ಯೋನ್ಮುಖವಾಗಿದ್ದಾರೆ.

ಮಾರತ್ತಹಳ್ಳಿಯಲ್ಲಿ ಮುಂದುವರಿದ ಜೆಸಿಬಿ ಘರ್ಜನೆ
ಮಾರತ್ತಹಳ್ಳಿಯ ಪೊಲೀಸ್ ಠಾಣೆ ಹಿಂದೆ ಇರುವ ಬೆಂಗಳೂರು ನೀರು ಸರಬರಾಜು ಮತ್ತು ಒಂಚರಂಡಿ ಮಂಡಳಿಯ (BWSSB) ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್ಟಿಪಿ) ಸಮೀಪದಲ್ಲಿ ರಾಜಕಾಲುವೆಗೆ ಅಡ್ಡಲಾಗಿರುವ ವಿಶಾಲ ಸೇತುವೆಯನ್ನು ಕೆಡವಲಾಗುತ್ತಿದೆ. ಜತೆಗೆ ಇಲ್ಲಿನ ರಾಜಕಾಲುವೆ ಮೇಲಿರುವ ಮನೆಗಳನ್ನು ಜೆಸಿಬಿಗಳೂ ತೆರವು ಮಾಡುತ್ತಿವೆ.
ಕಸವನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಈ ಮೊದಲೇ ಗುರುತಿಸಲಾಗಿದ್ದ ವಿಪ್ರೋ ಕಂಪನಿ, ಸಲಾರ್ಪುರಿಯಾ ಹಾಗೂ ಗ್ರೀನ್ ವುಡ್ ರೆಸಿಡೆನ್ಸಿ ಯ ರಾಜಕಾಲುವೆ ಒತ್ತುವರಿಗಳನ್ನು ತೆರವು ಕಾರ್ಯಾಚರಣೆ ನಡೆದಿದೆ. ಕಾಡುಗೋಡಿಯ ವಾರ್ಡ್ 83ರಲ್ಲಿ ವಿಜಯಲಕ್ಷ್ಮಿ ಕಾಲೋನಿಯಲ್ಲೂ ಸಹ ಒತ್ತುವರಿಗಳು ತೆರವಾಗಲಿವೆ.

ಸ್ಟರ್ಲಿಂಗ್ ಹಿಂಭಾಗದಲ್ಲಿರುವ ಸಕ್ರಾ ಆಸ್ಪತ್ರೆ ರಸ್ತೆ ಭಾಗದಲ್ಲಿ ಆದ ಒತ್ತುವರಿಗಳು, ಪೂರ್ವ ಪಾರ್ಕ್ ರಿಡ್ಜ್ ಹಿಂಭಾಗದ ರಸ್ತೆ ಅಕ್ಕ ಪಕ್ಕದಲ್ಲಿ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಲಾಗಿರುವ ಶೆಡ್ಗಳನ್ನು ಸೋಮವಾರ ಬಿಬಿಎಂಪಿ ಅಧಿಕಾರಿಗಳು ನೆಲಸಮಗೊಳಿಸಲಿದ್ದಾರೆ ಎಂದು ಬಿಬಿಎಂಪಿಯು ತೆರವು ಕಾರ್ಯಾಚರಣೆ ದೈನಂದಿನ ಪಟ್ಟಿಯಲ್ಲಿ ತಿಳಿಸಿದೆ.












Click it and Unblock the Notifications