ಬೆಂಗಳೂರಿನ ವಿವಿಧೆಡೆ ವರುಣನ ಆರ್ಭಟ ಜೋರು, ಮುಂದಿನ 2 ದಿನ ಭಾರಿ ಮಳೆ ಸಾಧ್ಯತೆ
ಬೆಂಗಳೂರು, ಜುಲೈ 05: ಹಲವು ದಿನಗಳ ಬಳಿಕ ಭಾನುವಾರ ಸಂಜೆ ಬೆಂಗಳೂರಿನಲ್ಲಿ ವರುಣ ದೇವ ಕೃಪೆ ತೋರಿದ್ದಾನೆ.
ರಾಜ್ಯಕ್ಕೆ ಮುಂಗಾರು ಕಾಲಿಟ್ಟರೂ ಬೆಂಗಳೂರಿನಲ್ಲಿ ಅಷ್ಟಾಗಿ ಮಳೆಯಾಗಿರಲಿಲ್ಲ, ಮೋಡಕವಿದ ವಾತಾವರಣವಿರುತ್ತಿತ್ತು, ಆದರೆ ನಿನ್ನೆ ಸಂಜೆಯಿಂದ ತಡರಾತ್ರಿವರೆಗೂ ಹಲವೆಡೆ ಮಳೆಯಾಗಿದೆ.
ನಗರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಗಾಂಧಿನಗರ, ಗೋವಿಂದರಾಜ ನಗರ, ಕಾಮಾಕ್ಷಿ ಪಾಳ್ಯ, ವಿಜಯನಗರ, ಪಟ್ಟೇಗಾರ ಪಾಳ್ಯ, ರಾಜಾಜಿ ನಗರ, ಸುಮ್ಮನಹಳ್ಳಿ, ನಾಗರಭಾವಿ, ಜಾಲಹಳ್ಳಿ ಸೇರಿದಂತೆ ಅನೇಕ ಕಡೆ ಮಳೆ ಆರ್ಭಟ ಜೋರಾಗಿತ್ತು. ಅಚಾನಕ್ ಮಳೆಯಿಂದಾಗಿ ರಸ್ತೆ ಬದಿಯಲ್ಲಿ ಆಶ್ರಯ ಪಡೆದ ಕೆಲ ವಾಹನ ಸವಾರರು ಮನೆಗೆ ಮರಳಲು ಪರದಾಡುತ್ತಿದ್ದದ್ದು ಕಂಡು ಬಂತು. ಜೋರು ಮಳೆಯಾದ್ದರಿಂದ ರಸ್ತೆಗಳ ಮೇಲೆ ಭಾರೀ ಪ್ರಮಾಣದ ನೀರು ಹರಿಯಿತು.

ನಗರದ ಹಲವು ಕಡೆಗಳಲ್ಲಿ ಭಾನುವಾರ ತಡರಾತ್ರಿವರೆಗೂ ಗುಡುಗು ಸಹಿತ ಭಾರಿ ಮಳೆ ದುರಿದ ಪರಿಣಾಮ ಕೆಲವು ಕಡೆಗಳಲ್ಲಿ ಮರಗಳು ಬುಡಮೇಲಾಗಿದೆ. ಹಲವು ಕಡೆ ಕೊಂಬೆಗಳು ಮುರಿದು ಬಿದ್ದಿವೆ, ತಗ್ಗುಪ್ರದೇಶಗಳಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು.
ಮಲ್ಲೇಶ್ವರ ಪೊಲೀಸ್ ಠಾಣೆ ಸಮೀಪ , ವೈಟ್ಫೀಲ್ಡ್ನಲ್ಲಿ ಹಾಗೂ ಹೊಸಕೆರೆಹಳ್ಳಿಯ ದತ್ತಾತ್ರೇಯ 162 ವಾರ್ಡ್ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿ ಮರ ಧರೆಗುರುಳಿದೆ. ಹೊಸಗುಡ್ಡದಹಳ್ಳಿ ಎಚ್ ಕ್ರಾಸ್ನಲ್ಲಿ ರಸ್ತೆ ಬದಿಯಲ್ಲಿದ್ದ ಮನೆಗೆ ನೀರು ನುಗ್ಗಿತ್ತು, ದೂರಿನ ಮೇರೆಗೆ ಬಿಬಿಎಂಪಿ ಸಿಬ್ಬಂದಿ ತೆರಳಿ ನೀರು ಹೊರಹಾಕಿದ್ದಾರೆ. ಉಳಿದಂತೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಗಣಿಯಲ್ಲಿ 103 ಮಿ.ಮೀ, ವರ್ತೂರು 80.5 ಮಿ.ಮೀ, ನಾಗರಭಾವಿಯಲ್ಲಿ 76 ಮಿ.ಮೀ, ಯಶವಂತಪುರದಲ್ಲಿ 60 ಮಿ.ಮೀ, ಎಚ್ಎಸ್ಆರ್ ಲೇಔಟ್ನಲ್ಲಿ 56 ಮಿ.ಮೀ, ವಿವಿಪುರಂನಲ್ಲಿ 55 ಮಿ.ಮೀ, ಮಹಾದೇವಪುರದಲ್ಲಿ 50.5ಮಿ.ಮೀ, ನಗರದಲ್ಲಿ 47 ಮಿ.ಮೀ, ಎಚ್ಎಎಲ್ನಲ್ಲಿ 30 ಮಿ.ಮೀ ಮಳೆಯಾಗಿದೆ.












Click it and Unblock the Notifications