ಬೆಂಗಳೂರಿಗೆ 2ದಿನ ಮಳೆ ನಿರೀಕ್ಷೆ: ಭಾನುವಾರ ನಗರದಲ್ಲಿ ಮಳೆ ಹೇಗಿತ್ತು?
ಬೆಂಗಳೂರು ಆಗಸ್ಟ್ 21: ಬೆಂಗಳೂರಿನಲ್ಲಿ ಭಾನುವಾರ ವಿವಿಧ ಪ್ರದೇಶಗಳಲ್ಲಿ ಹಗುರ ಮಳೆ ದಾಖಲಾಗಿದ್ದು, ಈ ಮಳೆ ಮುಂದಿನ ಎರಡು ದಿನವೂ ಹೀಗೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಕೇಂದ್ರ (ಕೆಎಸ್ಎನ್ಡಿಎಂಸಿ) ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮತ್ತೆ ಮುಂಗಾರು ಚುರುಕುಗೊಂಡಿದೆ. ಈ ಕಾರಣಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಅಬ್ಬರಿಸುತ್ತಿದೆ. ಬಂಗಾಳಕೊಲ್ಲಿ ಸಮುದ್ರಮಟ್ಟದಲ್ಲಿ ಉಂಟಾದ ಬದಲಾವಣೆಗಳು ಇದಕ್ಕೆ ಕಾರಣ ಎನ್ನಲಾಗಿದೆ. ಇದಲ್ಲದೆ ಆಂಧ್ರ ಪ್ರದೇಶದ ಕರಾವಳಿ ಭಾಗದ ಹಾಗೂ ರಾಯಸೀಮಾದಿಂದ ಕನ್ಯಾಕುಮಾರಿವರೆಗೆ ಉಂಟಾಗಿದ್ದ ಮೇಲ್ಮೈ ಸುಳಿಗಾಳಿ ತೀವ್ರತೆಯಿಂದಾಗಿ ಮುಂಗಾರು ಮಳೆ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಮಂಗಳವಾರ (ಆಗಸ್ಟ್ 23)ದವರೆಗೆ ಮಳೆ ಹುಗರದಿಂದ ಸಾಧಾರಣವಾಗಿ, ಕೆಲವು ಕಡೆಗಳಲ್ಲಿ ಜೋರ ಮಳೆ ಅಬ್ಬರಿಸುವ ಮುನ್ಸೂಚನೆ ಇದೆ. ಈ ಅವಧಿಯಲ್ಲಿ ಉಷ್ಣಾಂಶದಲ್ಲಿ ಇಳಿಕೆ ಕಂಡು ಬರಲಿದೆ. ಗರಿಷ್ಠ ಉಷ್ಣಾಂಶ 29 ಹಾಗೂ ಕನಿಷ್ಠ ಉಷ್ಣಾಂಶ 20ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

ಭಾನುವಾರ ಸುರಿದ ಜೋರು ಮಳೆ
ಸಿಲಿಕಾನ್ ಸಿಟಿಯಲ್ಲಿ ಕೆಲವು ವಾರಗಳಿಂದ ಕಣ್ಮರೆಯಾಗಿದ್ದ ವರುಣ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಶನಿವಾರ ಸಂಜೆ ನಂತರ ನಗರ ಕೆಲವು ಪ್ರದೇಶಗಳಲ್ಲಿ ಸುರಿದ ಮಳೆ ಭಾನುವಾರ ಮಧ್ಯಾಹ್ನದಿಂದಲೇ ನಗರದ ಬಹುತೇಕ ಕಡೆಗಳಲ್ಲಿ ಶುರುವಾಯಿತು.
ಏಕಾಎಕಿ ಬಂದ ಮಳೆಯಿಂದಾಗಿ ರಜಾದಿನವಾದ ಭಾನುವಾರ ಸಂಜೆ ಶಾಪಿಂಗ್, ಮೋಜು ಮಸ್ತಿಗೆ ತೆರಳಲು ಯೋಜಿಸಿದ್ದವರಿಗೆ ಮಳೆ ಅಡ್ಡಿಪಡಿಸಿತು. ಮಧ್ಯಾಹ್ನ ಒಮ್ಮೆ ಸುರಿದ ತಣ್ಣಗಾಗಿದ್ದ ಮಳೆ ಮತ್ತೆ ಸಂಜೆ 4ಗಂಟೆ ನಂತರ ಜೋರಾಗಿ ಸುರಿಯಲು ಆರಂಭಿಸಿದೆ. ಒಂದೇ ಸಮನೆ ಬಿಟ್ಟು ಬಿಡದೇ ಹಗುರ ಮಳೆ ದಾಖಲಾಯಿತು.

ವಾಹನ ಸಂಚಾರಕ್ಕೆ ಕಿರಿಕಿರಿ
ಇದರಿಂದ ಕೆ.ಆರ್.ವೃತ್ತ, ರಾಜಾಜಿನಗರ, ಕೆ.ಆರ್ ಮಾರುಕಟ್ಟೆ, ಸುಜಾತ, ವಿಜಯನಗರ, ನಾಯಂಡಹಳ್ಳಿ ವೃತ್ತ, ಓಕಳಿಪುರಂ ರಸ್ತೆ ಅಂಡರ್ಪಾಸ್, ಶಿವಾನಂದ್ ವೃತ್ತದ ರಸ್ತೆ ಅಂಡರ್ಪಾಸ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿಯಿತು. ಇದು ಕೆಲ ಕಾಲ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟು ಮಾಡಿತು. ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಮೇಟ್ರೋ ಪಿಲ್ಲರ್, ರಸ್ತೆ ಬದಿ ಅಂಗಡಿ ಮುಂಗಟ್ಟಲುಗಳಲ್ಲಿ, ಫ್ಲೈಓವರ್ ಕೆಳಗೆ ಆಶ್ರಯ ಪಡೆದದ್ದು ಕಂಡು ಬಂತು.

ವಿವಿಧೆ ಜೋರು ಮಳೆ ದಾಖಲು
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ವರದಿ ಪ್ರಕಾರ, ಸಂಜೆ 4.30 ಹೊತ್ತಿಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ, ರಾಜಾಜಿನಗರ, ಕೋರಮಂಗಲ, ಬಿಟಿಎಂ ಬಡಾವಣೆ, ರಾಜಮಹಲ್ ಗುಟ್ಟಹಳ್ಳಿ, ಕೆಂಗೇರಿ, ದಯಾನಂದನಗರ, ದೊಡ್ಡಬಿದರಕಲ್ಲು, ಚೊಕ್ಕಸಂದ್ರ, ಎಚ್ಎಂಟಿ ವಾರ್ಡಗಳಲ್ಲಿ ಜೋರು ಮಳೆ ದಾಖಲಾಗಿದೆ. ಈ ಭಾಗದಲ್ಲಿ 5ಮಿ.ಮೀ.ಗೂ ಹೆಚ್ಚು ಮಳೆ ದಾಖಲಾಗಿದೆ.

ಕೆಲವೆಡೆ ತುಂತುರು ಮಳೆಯ ಅಬ್ಬರ
ಇನ್ನು ನಗರದ ಹೊಯ್ಸಳನಗರ, ಬಿಳೇಕಳಿ, ಕುಮಾರಸ್ವಾಮಿ ಬಡಾವಣೆ, ವಿಜಯನಗರ, ಹಂಪಿನಗರ, ಬೊಮ್ಮನಹಳ್ಳಿ, ವಿಶ್ವನಾಥ್ ನಾಗೇನಹಳ್ಳಿ, ಬನಶಂಕರಿ, ಜಯನಗರ, ಪುಲಕೇಶಿನಗರ, ಹೆಗ್ಗನಹಳ್ಳಿ, ದಾಸರಹಳ್ಳಿ, ವಿದ್ಯಾರಣ್ಯಪುರ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ತುಂತುರು ಮಳೆ ಬಿದ್ದ ಬಗ್ಗೆ ವರದಿ ಆಗಿದೆ. ಮುಂದಿನ ಎರಡು ದಿನ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದೇ ರೀತಿ ಮಳೆ ಮುಂದುವರಿಯುವುದಾಗಿ ಕೆಎಸ್ಎನ್ಡಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.











Click it and Unblock the Notifications