6 ವರ್ಷದಲ್ಲೇ ಜೂನ್ನಲ್ಲಿ ಬೆಂಗಳೂರಿನಲ್ಲಿ ಕಡಿಮೆ ಮಳೆ!
ಬೆಂಗಳೂರು, ಜುಲೈ 02: ನೈಋತ್ಯ ಮುಂಗಾರು ಮಳೆ ಈ ಬಾರಿ ಕರ್ನಾಟಕದ ಮೇಲೆ ಮುನಿಸಿಕೊಂಡಿದೆ. ರಾಜ್ಯದಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆಯಷ್ಟು ಸಹ ಮಳೆಯಾಗಿಲ್ಲ. ಮಳೆ ಕೊರತೆ ಎದುರಿಸುತ್ತಿರುವ ರಾಜ್ಯದಲ್ಲಿ ಜಲಾಶಯಗಳು ಖಾಲಿಯಾಗಿದ್ದು, ಕುಡಿಯುವ ನೀರಿನ ಕೊರತೆ ಎದುರಾಗಿದೆ.
ಬೆಂಗಳೂರು ನಗರದ ಹವಾಮಾನ ಚೆನ್ನಾಗಿರುತ್ತದೆ. ಅದರಲ್ಲೂ ಬೆಂಗಳೂರು ಮಳೆಗಾಲದಲ್ಲಿ ಸದಾ ತಂಪು ತಂಪು. ಆದರೆ ಈ ಬಾರಿ ಇದು ಬದಲಾಗಿದೆ. 6 ವರ್ಷಗಳಲ್ಲೇ ಉದ್ಯಾನ ನಗರಿ ಬೆಂಗಳೂರು ಜೂನ್ನಲ್ಲಿ ಭಾರೀ ಮಳೆಯ ಕೊರತೆ ಎದುರಿಸಿದೆ.

ಈ ಬಾರಿಯ ಬೇಸಿಗೆಯಲ್ಲಿ ಬೆಂಗಳೂರು ನಗರದಲ್ಲಿ ಬಿಸಿಲು ನೆತ್ತಿ ಸುಡುತ್ತಿತ್ತು. ಜೂನ್ ಆರಂಭದಲ್ಲಿ ಮೋಡ ಕವಿದ ವಾತಾವರಣ ಉಂಟಾದಾಗ ಜನರು ಸಹ ಸಂತಸಪಟ್ಟಿದ್ದರು. ಆದರೆ ಕಾರ್ಮೋಡಗಳು ಅತ್ತ ಇತ್ತ ಅಲೆದಾವು ಬಿಟ್ಟರೆ ವಾಡಿಕೆಯಷ್ಟು ಸಹ ಮಳೆ ಸುರಿಸುವಲ್ಲಿ ವಿಫಲವಾದವು.
ಬೆಂಗಳೂರು ನಗರದಲ್ಲಿ ಮಳೆ ಕೊರತೆ; ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ಬೆಂಗಳೂರು ನಗರದಲ್ಲಿ ಜೂನ್ ತಿಂಗಳಿನಲ್ಲಿ ಸುರಿಯಬೇಕಿದ್ದ ವಾಡಿಕೆ ಮಳೆ 110.3 ಮಿ. ಮೀ.. ಆದರೆ ಈ ಬಾರಿ ನಗರದಲ್ಲಿ ಕೇವಲ 80 ಮಿ. ಮೀ. ಮಳೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯಭಾರ ಕುಸಿತ, ಅರಬ್ಬಿ ಸಮುದ್ರದಲ್ಲಿನ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಜೂನ್ ತಿಂಗಳಿನಲ್ಲಿ ಸದಾ ಮೋಡ ಕವಿದ ವಾತಾವರಣ ಉಂಟಾಗಿತ್ತು. ಆದರೆ ಮಳೆ ಸುರಿದಿದ್ದು, ಕಡಿಮೆ. ಕೆಲವು ದಿನ ಸಂಜೆ ಮಳೆಯಾಗಿದ್ದು, ಬಿಟ್ಟರೆ ಸದಾ ಮೋಡಗಳ ಚಿತ್ತಾರ ಮಾತ್ರ ಕಣ್ಣಿಗೆ ಕಾಣುತ್ತಿತ್ತು.
ಬೆಂಗಳೂರು ನಗರದಲ್ಲಿ 2018ರ ಜೂನ್ನಲ್ಲಿ 91.5 ಮಿ. ಮೀ., 2019ರಲ್ಲಿ 83.3, 2020ರಲ್ಲಿ 115, 2021ರಲ್ಲಿ 92.1 ಮಿ. ಮೀ. ಮಳೆಯಾಗಿತ್ತು. ಅದೇ 2022ರ ಜೂನ್ ತಿಂಗಳಿನಲ್ಲಿ ನಗರದಲ್ಲಿ ಸುರಿದ ಮಳೆ 207.7 ಮಿ. ಮೀ. ಆಗಿದೆ. ಇವುಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ನಗರದಲ್ಲಿ ಮಳೆಯ ಕೊರತೆ ಉಂಟಾಗಿದೆ.
ಜೂನ್ ತಿಂಗಳ ಆರಂಭದಲ್ಲಿ ಜೂನ್ 15ರ ಬಳಿಕ ನಗರದಲ್ಲಿ ಉತ್ತಮ ಮಳೆಯಾಗಲಿ ಎಂದು ಅಂದಾಜಿಸಲಾಗಿತ್ತು. ಆದರೆ ಮೋಡಗಳು ಚಲನೆ ಕಂಡು ಬಂದಿತು ಬಿಟ್ಟರೆ ನಗರದಲ್ಲಿ ನೀರು ಹರಿದು ಹೋಗುವಷ್ಟು ಮಳೆಯಾಗಲಿಲ್ಲ. ಆಗಾಗ ತುಂತುರು ಮಳೆ ಬಂದಿತು, ಮೋಡ ಕವಿದ ವಾತಾವರಣ ಮುಂದುವರೆಯಿತು.
ಭಾರತೀಯ ಹವಾಮಾನ ಇಲಾಖೆ ಜುಲೈ ತಿಂಗಳ ಮಳೆ ಮುನ್ಸೂಚನೆ ಕುರಿತು ವರದಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಮತ್ತು ಬೆಂಗಳೂರು ನಗರದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಆಗುವ ಕೆಆರ್ಎಸ್ನಲ್ಲಿಯೂ ನೀರಿನ ಮಟ್ಟ ಇಳಿಕೆಯಾಗಿದೆ. ಮಳೆ ಕೊರತೆ ಕಾರಣ ಬೆಂಗಳೂರು ನಗರದ ಹೊರವಲಯದ ಬೋರ್ವೆಲ್ಗಳು ಬತ್ತಿ ಹೋಗಿವೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ, ಡ್ಯಾಂಗೆ ನೀರು ಹರಿದು ಬಾರದಿದ್ದರೆ 20 ದಿನಗಳ ಬಳಿಕ ಬೆಂಗಳೂರು, ಮೈಸೂರು, ಮಂಡ್ಯಕ್ಕೆ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ. ಮಳೆಯಾಗದಿದ್ದರೆ ನಗರದಲ್ಲಿಯೂ ಅಂತರ್ಜಲ ಮಟ್ಟ ಕುಸಿತವಾಗಿ ಬೋರ್ ವೆಲ್ ಬತ್ತುವ ಆತಂಕ ಎದುರಾಗಿದೆ.
ಹವಾಮಾನ ಇಲಾಖೆ ಮಾಹಿತಿಯಂತೆ ಕರ್ನಾಟಕದಲ್ಲಿ ಜೂನ್ ತಿಂಗಳಿನಲ್ಲಿ ಸುರಿಯಬೇಕಿದ್ದ ವಾಡಿಕೆ ಮಳೆ 150 ಮಿ. ಮೀ.. ಆದರೆ ಜೂನ್ 30ರ ತನಕ 75 ಮಿ. ಮೀ. ಮಳೆಯಾಗಿದೆ. ಬೆಂಗಳೂರು ನಗರ ಮಾತ್ರವಲ್ಲ ಇಡೀ ರಾಜ್ಯದಲ್ಲಿಯೇ ಮುಂಗಾರು ಹಂಗಾಮಿನ ಮೊದಲ ತಿಂಗಳಿನಲ್ಲಿ ಮಳೆ ಕೊರತೆಯಾಗಿದೆ.
2021 ಮತ್ತು 2022ರ ಜೂನ್ ತಿಂಗಳಿನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಜುಲೈ ಮೊದಲಾರ್ಧದಲ್ಲಿಯೇ ಉತ್ತಮ ಮಳೆಯಾಗಲಿದೆ ಎಂಬ ಮುನ್ಸೂಚನೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವ ಮೊದಲು 15 ದಿನ ಸುರಿಯುವ ಮಳೆಯನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications