ಭಾನುವಾರದ ಸುತ್ತಾಟಕ್ಕೆ ತಡೆ ಹಾಕಿದ ಬೆಂಗಳೂರು ಮಳೆ
ಬೆಂಗಳೂರು, ಸೆಪ್ಟೆಂಬರ್ 16 : ಉದ್ಯಾನ ನಗರಿ ಬೆಂಗಳೂರಿನ ಜನರ ವೀಕೆಂಡ್ ಸುತ್ತಾಟಕ್ಕೆ ಮಳೆರಾಯ ಅಡ್ಡಿ ಮಾಡಿದ್ದಾನೆ. ಹೌದು..ಭಾನುವಾರ ಮಧ್ಯಾಹ್ನದ ಬಳಿಕ ನಗರದ ವಿವಿಧ ಬಡಾವಣೆಗಳಲ್ಲಿ ಭಾರಿ ಮಳೆಯಾಗಿದೆ.
ಭಾನುವಾರ ಮಧ್ಯಾಹ್ನ 2 ಗಂಟೆ ಬಳಿಕ ನಗರದ ವಿವಿಧ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ರಾತ್ರಿ ಮಳೆ ಸುರಿಯುವ ನೀರಿಕ್ಷೆ ಇದೆ.
ಜಯನಗರ, ವಿಧಾನಸೌಧ, ಶಾಂತಿನಗರ, ಮಲ್ಲೇಶ್ವರ, ರಾಜಾಜಿನಗರ, ಹನುಮಂತನಗರ, ಮೈಸೂರು ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಉತ್ತಮ ಮಳೆಯಾಗಿದೆ. ಇನ್ನೂ ತುಂತುರು ಹನಿ ಬೀಳುತ್ತಿದ್ದು, ಜನರು ಹೊರಗೆ ಸುತ್ತಾಡಲು ಹೋಗಲು ಆಲೋಚಿಸುವಂತಾಗಿದೆ.

ಮಲ್ಲೇಶ್ವರದಲ್ಲಿ ಮಳೆಯಿಂದಾಗಿ ದೊಡ್ಡ ಮರವೊಂದು ಉರುಳಿ ಬಿದ್ದಿದೆ. ಮರದಡಿ 2 ಆಟೋ, 1 ಕಾರು ಸಿಕ್ಕಿಹಾಕಿಕೊಂಡಿದೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಗಳೂರು ನಗರದಲ್ಲಿ ಇನ್ನೂ 3 ರಿಂದ 4 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಕಳೆದ ಐದು ದಿನಗಳಿಂದ ನಗರದಲ್ಲಿ ಸಂಜೆ ಮಳೆಯಾಗುತ್ತಿದೆ.












Click it and Unblock the Notifications