Rain: ಬೆಂಗಳೂರಿನ ವಿಜಯನಗರದಲ್ಲಿಂದು ಧಾರಾಕಾರ ಮಳೆ: ವರುಣನ ಅರ್ಭಟಕ್ಕೆ ಬೆಚ್ಚಿದ ಬೆಂಗಳೂರು!
ಬೆಂಗಳೂರು ಅಕ್ಟೋಬರ್ 30: ಬೆಂಗಳೂರಿನಲ್ಲಿ ಕೊಂಚ ವಿರಾಮ ಪಡೆದಿದ್ದ ಮಳೆರಾಯ ಇಂದು ಮತ್ತೆ ಧರೆಗಿಳಿಯಲು ಆರಂಭಿಸಿದ್ದಾನೆ. ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಮಧ್ಯಾಹ್ನದ ವೇಳೆಗೆ ಜಿಟಿ ಜಿಟಿ ಮಳೆ ತರಿಸಲು ಆರಂಭಿಸಿದೆ. ಇದರಿಂದಾಗಿ ಹಬ್ಬದ ತಯಾರಿಯಲ್ಲಿದ್ದ ಜನ ಕೊಂಚ ಆತಂಕಗೊಂಡಿದ್ದಾರೆ.
ಹೌದು... ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆ ಇರಲಿಲ್ಲ. ಕಳೆದ ವಾರ ನಿರಂತರವಾಗಿ ಸುರಿದ ಧಾರಾಕಾರ ಮಳೆ ಸಿಲಿಕಾನ್ ಸಿಟಿ ಜನರಿಗೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿತ್ತು. ಕೆಲ ದಿನಗಳ ಕಾಲ ವಿರಾಮ ಪಡೆದಿದ್ದ ಮಳೆ ಇಂದು ಮತ್ತೆ ನಿಧಾನವಾಗಿ ಬರಲಾರಂಭಿಸಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಜನ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಾಗ್ರಿಗಳ ಖರೀದಿಯಲ್ಲಿ ನಿರತರಾಗಿದ್ದಾರೆ. ಆದರೆ ಜಿಟಿ ಜಿಟಿ ಮಳೆ ಹಬ್ಬದ ಆಚರಣೆಗೆ ಅಡ್ಡಿಯನ್ನುಂಟು ಮಾಡುವ ಆತಂಕ ಎದುರಾಗಿದೆ. ನಗರದ ಕೆಆರ್ ಮಾರುಕಟ್ಟೆ, ರಾಜರಾಜೇಶ್ವರಿ ನಗರ, ಮೆಜೆಸ್ಟಿಕ್, ಗಾಂಧಿ ಬಜಾರ್, ವಿಜಯನಗರ ಸೇರಿದಂತೆ ಹಲವೆಡೆ ತುಂತುರು ಮಳೆಯಾಗುತ್ತಿದೆ. ಸಂಜೆ ವೇಳೆ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.
ಬೆಂಗಳೂರಿನಲ್ಲಿ ಈಗಾಗಲೇ ಸುರಿದ ಮಳೆಗೆ ಜನ ಚೇತರಿಸಿಕೊಳ್ಳಲು ಆಗಿಲ್ಲ. ಈಗಲೂ ಹಲವೆಡೆ ಮಳೆ ನೀರು ಬತ್ತಿಲ್ಲ. ಚರಂಡಿ ನೀರು ಅಲ್ಲಲ್ಲಿ ಮಣಕಾಲು ಮೇರಿ ನಿಂತಿದೆ. ಹೀಗಾಗಿ ನಗರದ ಜನರಿಗೆ ಮಳೆ ಅಂದರೆ ಆತಂಕ ಶುರುವಾಗಿದೆ. ವಿಶೇಷವಾಗಿ ಹಬ್ಬದ ಸಮಯದಲ್ಲಿ ಮಳೆ ಮುನಸ್ಊಚನೆ ಇರುವುದು ಬೇಸರ ತಂದಿದೆ.
ಇಂದು ರಾಜ್ಯದ ಕೆಲ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಭಾಗಶ: ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಡಾನಾ ಚಂಡಮಾರುತದ ಅರ್ಭಟ ಕಮ್ಮಿಯಾಗಿದ್ದರೂ ಸಹ ಅದರ ಪರಿಣಾಮ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಸುತ್ತಮುತ್ತಲಿನ ರಾಜ್ಯಗಳಲ್ಲಿ ಕಂಡುಬರುತ್ತಿದೆ. ಹೀಗಾಗಿ ಹವಾಮಾನ ಇಲಾಖೆಯು ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.
ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿದ್ದು, ಕೆರೆ ಕಟ್ಟೆಗಳು ಭರ್ತಿಯಾಗಿವೆ. ಕೆರೆ-ಕಟ್ಟೆಗಳ ಏರಿ ಮೇಲೆ ಮತ್ತು ಅಕ್ಕಪಕ್ಕ ಹಾದು ಹೋಗುವ ರಸ್ತೆಗಳಲ್ಲಿ ಸುರಕ್ಷತಾ ತಡೆಗೋಡೆಗಳಿಲ್ಲದ ಕಾರಣ ಚಾಲಕರು ಹಾಗೂ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ ಮಾಡುವಂತಾಗಿದೆ.
“ಸಂಚಾರ ಸಲಹೆ/Traffic Advisory"
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) October 30, 2024
ಸುಮನಹಳ್ಳಿ ಜಂಕ್ಷನ್ನಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ.
Slow-moving traffic due to water logging at Sumanahalli Junction, Kindly co-operate. pic.twitter.com/g7QVRaEnks
ಬೆಂಗಳೂರು ಸಂಚಾರ ಪೊಲೀಸರ ಮನವಿ
ಧಾರಾಕಾರ ಮಳೆಗೆ ಸುಮನಹಳ್ಳಿ ಜಂಕ್ಷನ್ನಲ್ಲಿ ಮಳೆ ನೀರು ನಿಂತಿದ್ದು ನಿಧಾನವಾಗಿ ವಾಹನ ಸಂಚಾರ ಇರುತ್ತದೆ, ಇದಕ್ಕೆ ಸಹಕರಿಸಬೇಕು ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡು ಇದರೊಂದಿಗೆ ವಿಡಿಯೋ ಸಹ ಹಂಚಿಕೊಳ್ಳಲಾಗಿದೆ.












Click it and Unblock the Notifications