ಕಾರ್ಮಿಕರ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ ಚನ್ನಪಟ್ಟಣ ಗೊಂಬೆ!
ಬೆಂಗಳೂರು, ಮೇ 20 : ಲಾಕ್ ಡೌನ್ ಪರಿಣಾಮ ಕೆಲಸ ಸಿಗದೇ ಪರದಾಡುತ್ತಿರುವ ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ. ವಲಸೆ ಕಾರ್ಮಿಕರು ಶ್ರಮಿಕ್ ವಿಶೇಷ ರೈಲಿನ ಮೂಲಕ ತಮ್ಮ ತವರು ರಾಜ್ಯಕ್ಕೆ ಕುಟುಂಬ ಸಮೇತ ತೆರಳುತ್ತಿದ್ದಾರೆ.
ನೈಋತ್ಯ ರೈಲ್ವೆಯ ಬೆಂಗಳೂರು ವಲಯ ಶ್ರಮಿಕ್ ರೈಲಿನಲ್ಲಿ ವಾಪಸ್ ಆಗುತ್ತಿರುವ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆಗಳನ್ನು ಉಡುಗೊರೆಯಾಗಿ ನೀಡುತ್ತಿದೆ. ಮೇ 19ರಂದು 700 ಗೊಂಬೆಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಗಿದೆ.
'ನಗು ಮರಳಲಿ' ಎಂಬ ಘೋಷಣೆಯೊಂದಿಗೆ ಚನ್ನಪಟ್ಟಣದ ಗೊಂಬೆಗಳನ್ನು ನೀಡಲಾಗುತ್ತಿದೆ. ಬೆಂಗಳೂರು ವಿಭಾಗದ ಮ್ಯಾನೇಜರ್ ಅಶೋಕ್ ಕುಮರ್ ವರ್ಮಾ ಮಕ್ಕಳಿಗೆ ಗೊಂಬೆಯನ್ನು ನೀಡಿ ಅವರ ಪ್ರಯಾಣಕ್ಕೆ ಶುಭ ಹಾರೈಸಿದರು.
ಚನ್ನಪಟ್ಟಣದ ಗೊಂಬೆಗಳಿಗೆ ಭೌಗೋಳಿಕ ವೈಶಿಷ್ಟ್ಯತೆ ಗುರುತು (ಜಿಐ ಟ್ಯಾಗ್) ಸಿಕ್ಕಿದೆ. ಮರ ಮತ್ತು ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ಮಾಡಿರುವ ಗೊಂಬೆಗಳು ಮಕ್ಕಳು ಆಟವಾಡಲು ಸುರಕ್ಷಿತವಾಗಿವೆ.
ಲಾಕ್ ಡೌನ್ನಂತಹ ಸಂಕಷ್ಟದ ಸಮಯದಲ್ಲಿ ತವರು ರಾಜ್ಯಕ್ಕೆ ಮರಳುತ್ತಿರುವ ಮಕ್ಕಳ ಮುಖದಲ್ಲಿ ನಗು ಮೂಡಲಿ ಎಂದು ಶ್ರಮಿಕ್ ರೈಲು ಹತ್ತುವಾಗ ಚಾಕೋಲೇಟ್, ಗೊಂಬೆಗಳನ್ನುಉಡುಗೊರೆಯಾಗಿ ನೀಡಲಾಗುತ್ತಿದೆ.
ಬೆಂಗಳೂರು ರೈಲು ವಿಭಾಗದ ಈ ಕ್ರಮದಿಂದಾಗಿ ಸ್ಥಳೀಯವಾಗಿ ಗೊಂಬೆ ತಯಾರು ಮಾಡುವವರಿಗೂ ಸಹಾಯಕವಾಗಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ.