ರಾಹುಲ್ ಸಂವಾದ: ವಿಧಾನಸಭೆಯಲ್ಲಿ ಭಾರಿ ವಾಗ್ಯುದ್ಧ
ಬೆಂಗಳೂರು, ಫೆ.21-ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಅವರು ಲೋಕಸಭೆಗೆ ಹೋಗಲು ಕಳೆದ ವಾರ ವಿದ್ಯಾರ್ಥಿಗಳೊಂದಿಗೆ ಸಂಚಾದ ನಡೆಸಿದ್ದು ಇಂದು ವಿಧಾನಸಭೆಯಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತು.
ರಾಹುಲ್ ಗಾಂಧಿ ತಜೆಗೆ ಸಂವಾದ ನಡೆಸಲು ವಿದ್ಯಾರ್ಥಿಗಳನ್ನು ಕರೆತರಲು ಕಾಂಗ್ರೆಸ್ ಸರ್ಕಾರ ಆಡಳಿತ ಯಂತ್ರದ ದುರುಪಯೋಗ ಪಡಿಸಿಕೊಂಡಿದೆ ಎಂಬುದು ಪ್ರಮುಖ ಆರೋಪವಾಗಿತ್ತು.
ಶೂನ್ಯವೇಳೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಈ ವಿಷಯ ಪ್ರಸ್ತಾಪಿಸಿ ಬೆಂಗಳೂರು ಸೆಂಟ್ರಲ್ ಕಾಲೇಜು ಮೈದಾನದಲ್ಲಿ ರಾಹುಲ್ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮಕ್ಕೆ ಪ್ರತಿ ಶಾಲೆಯಿಂದ 40 ವಿದ್ಯಾರ್ಥಿಗಳನ್ನು ಕರೆತರಲು ಶಿಕ್ಷಣ ಇಲಾಖೆಗೆ ಜವಾಬ್ದಾರಿ ನೀಡಲಾಗಿತ್ತು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಕಾರ್ಯಕ್ರಮದ ಸ್ಥಳದಲ್ಲಿಯೇ ಹಾಜರಿದ್ದು, ಉಸ್ತುವಾರಿ ವಹಿಸಿದ್ದರು. ರಾಜಕೀಯ ಕಾರ್ಯಕ್ರಮಕ್ಕೆ ಆಡಳಿತ ಯಂತ್ರವನ್ನು ಬಳಸಿಕೊಳ್ಳುವುದು ಅನಾರೋಗ್ಯಕರ ಬೆಳವಣಿಗೆ ಎಂದು ಕಟುವಾಗಿ ಹೇಳಿದರು. ಇದರಿಂದ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲವನ್ನೇ ಸೃಷ್ಟಿಸಿತು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಇಂದಿನ ಸಚಿವ ಡಿಕೆ ಶಿವಕುಮಾರ್, ನಮ್ಮ ನಾಯಕ ರಾಹುಲ್ ಗಾಂಧಿ ಆಗಮಿಸಿದಾಗ ಪಕ್ಷದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಾವುದೇ ಅಧಿಕಾರಿಯನ್ನು ಬಳಸಿಕೊಂಡಿಲ್ಲ ಎಂದು ಉತ್ತಿಸಿದರು.

ಇದಕ್ಕೆ ಬಿಜೆಪಿ ಶಾಸಕರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಎಲ್ಲಾ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಕರೆತರಬೇಕೆಂದು ಶಿಕ್ಷಣ ಇಲಾಖೆಗೆ ಉನ್ನತ ಮಟ್ಟದಿಂದ ಸೂಚನೆ ಬಂದಿದೆ. ಸ್ಥಳದಲ್ಲಿ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರೇ ಕಾರ್ಯಕ್ರಮಕ್ಕೆ ಕರೆತರಲು ಸೂಚನೆ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ಸರ್ಕಾರ ಮೊಂಡು ವಾದ ಮಾಡುವುದು ಸರಿಯಲ್ಲ ಎಂದು ಒಕ್ಕೊರಲಿಂದ ಗುಡುಗಿದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವ ಮಹದೇವಪ್ಪ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸುವುದು ಆರೋಗ್ಯಕರ ಬೆಳವಣಿಗೆ. ಇದರಲ್ಲಿ ತಪ್ಪಿಲ್ಲ ಎಂದು ನೆಪ ಹೇಳಿದರು.
ಹಾಗಿದ್ದರೆ ಎಲ್ಲ ಪಕ್ಷಗಳ ನಾಯಕರು ಬಂದಾಗಲೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಸರ್ಕಾರ ಸೂಚನೆ ನೀಡಲಿ ಎಂದು ಪ್ರತಿಪಕ್ಷದವರು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಸರ್ಕಾರಿ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆದಿದೆ ಎಂಬುದು ಹೊರತುಪಡಿಸಿ, ಯಾವುದೇ ರೀತಿಯಲ್ಲೂ ಅಧಿಕಾರ ದುರುಪಯೋಗವಾಗಿಲ್ಲ. ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರಿಗೆ ಪ್ರವೇಶಾವಕಾಶ ಕಲ್ಪಿಸುವುದೇ ಕಷ್ಟವಾಗಿತ್ತು. ಇದರಲ್ಲಿ ಅಧಿಕಾರ ದುರುಪಯೋಗ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. ಸಚಿವ ಕೃಷ್ಣ ಬೈರೇಗೌಡ ಸಂವಾದ ಕಾರ್ಯಕ್ರಮದಲ್ಲಿ ದುಭಾಷಿಯಾಗಿದ್ದರು.
ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಮೋದಿ ರ್ಯಾಲಿ ಯಶಸ್ವಿಯಾಗಲಿಲ್ಲ ಎಂಬ ಹೊಟ್ಟೆಕಿಚ್ಚಿನಿಂದ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ತಪ್ಪು ಹುಡುಕಲು ಪ್ರಯತ್ನ ನಡೆಯುತ್ತಿದೆ ಎಂದು ಲೇವಡಿ ಮಾಡಿದರು. ಈ ನಡುವೆ ಸಚಿವ ರಮಾನಾಥ ರೈ ಅವರನ್ನು ಸ್ಪೀಕರ್ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ಪ್ರತಿಪಕ್ಷ ಆಡಳಿತಪಕ್ಷಗಳ ಶಾಸಕರು ಪದೇ ಪದೇ ಬಿರುಸಿನ ಮಾತುಕತೆ ನಡೆಸುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಲೋಪಗಳಾಗಿದ್ದರೆ ಪರಿಶೀಲಿಸಿ ಎಂದು ಹೇಳುವ ಮೂಲಕ ಚರ್ಚೆಗೆ ಮಂಗಳ ಹಾಡಿದರು.












Click it and Unblock the Notifications