ಗೃಹ ಖಾತೆ ವಹಿಸಿಕೊಳ್ಳಲು ಸಿದ್ಧ ː ರಾಮಲಿಂಗಾ ರೆಡ್ಡಿ
ಬೆಂಗಳೂರು, ಜುಲೈ 10: ಜಿ. ಪರಮೇಶ್ವರ್ ಅವರ ರಾಜಿನಾಮೆಯಿಂದ ತೆರವಾಗಿರುವ ರಾಜ್ಯ ಗೃಹ ಸಚಿವರ ಸ್ಥಾನಕ್ಕೆ ಯಾರನ್ನು ನೇಮಿಸಲಾಗುತ್ತದೆ? ಸಿದ್ದರಾಮಯ್ಯ ಸಂಪುಟ ಸೇರಲಿರುವ ಮೂವರು ಯಾರು? ಎಂಬ ಕುತೂಹಲ ಇನ್ನೂ ಜೀವಂತವಾಗಿದೆ. ಈ ನಡುವೆ ಗೃಹ ಖಾತೆ ಬೇಡ ಎಂದಿದ್ದ ರಾಮಲಿಂಗ ರೆಡ್ಡಿ ಅವರು, ಪಕ್ಷದ ನೀಡುವ ಯಾವುದೇ ಅಧಿಕಾರವನ್ನು ನಿಭಾಯಿಸುವೆ ಎಂದಿದ್ದಾರೆ.
ಸಂಪುಟ ವಿಸ್ತರಣೆ: ಹೊಸದುರ್ಗ ಗೋವಿಂದಪ್ಪ ರೇಸಿನಲ್ಲಿ ಮುಂದೆ!
ಖಾತೆ ಕೊಟ್ಟರೆ ಯಾರು ಬೇಡ ಅಂತಾರೆ? ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಸಾರಿಗೆ ಖಾತೆಯನ್ನು ನಿಭಾಯಿಸುತ್ತಿದ್ದೇನೆ. ಯಾವುದೇ ಖಾತೆಯನ್ನು ನಾನು ಕೇಳುವುದಿಲ್ಲ. ಅದರ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿಲ್ಲ. ಯಾರಿಗೆ ಯಾವ ಖಾತೆ ನೀಡಬೇಕು ಎಂದು ಅವರು ನಿರ್ಧರಿಸುತ್ತಾರೆ. ಕೊಡದೇ ಇದ್ದರೂ ಬೇಸರವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ನ ಹಿರಿಯ ನಾಯಕರಾದ ಆರ್.ವಿ. ದೇಶಪಾಂಡೆ ಅಥವಾ ರಮೇಶ್ ಕುಮಾರ್ ಅವರಲ್ಲೊಬ್ಬರನ್ನು ನೇಮಿಸಲು ಕೆಪಿಸಿಸಿಯೊಳಗೆ ಚಿಂತನೆ ನಡೆಸಲಾಯಿತು.ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿರುವುದರಿಂಡ ಅವರಿಗೆ ಸದ್ಯಕ್ಕೆ ಗೃಹ ಸಚಿವಾಲಯ ವಹಿಸಲು ಸಾಧ್ಯವಿಲ್ಲ ಎಂಬ ಸುಳಿವು ಸಿಕ್ಕಿತು.
ನಂತರ ಈ ಬಾರಿ ಗೃಹ ಖಾತೆಯನ್ನು ಅಲ್ಫಸಂಖ್ಯಾತರಿಗೆ ನೀಡುವ ಬಗ್ಗೆ ಸುಳಿವು ಸಿಕ್ಕಿತು. ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಅವರಿಗೆ ಮತ್ತೊಮ್ಮೆ ಗೃಹ ಖಾತೆ ಒಲಿಯಲಿದೆ ಎಂಬ ಸುದ್ದಿಯೂ ಹಬ್ಬಿತು. ರೋಷನ್ ಬೇಗ್ ಅವರ ಹೆಸರು ಕೇಳಿ ಬಂದಿತು.
ಖಾಲಿ ಇರುವ ಮೂರು ಸ್ಥಾನಗಳಲ್ಲಿ ಒಂದು ಕುರುಬ ಸಮುದಾಯಕ್ಕೆ, ಮತ್ತೊಂದು ಪರಿಶಿಷ್ಟ ಬಲಗೈ ಗೆ ಹಾಗೂ ಇನ್ನೊಂದನ್ನು ವೀರಶೈವ ಸಮುದಾಯಕ್ಕೆ ನೀಡುವ ಸಾಧ್ಯತೆಯಿದೆ. ಇರುವ ಮೂರು ಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಲಾಬಿ ಆರಂಭವಾಗಿದೆ.ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಮುಗಿದ ಬಳಿಕ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಜುಲೈ 17ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ಹಾಗೂ ಜುಲೈ 20ರಂದು ಮತ ಎಣಿಕೆ ನಡೆಯಲಿದೆ.