ಬಿಬಿಎಂಪಿ ಮೇಯರ್, ಉಪ ಮೇಯರ್ ಪಟ್ಟಕ್ಕೆ ಪೈಪೋಟಿ
ಬೆಂಗಳೂರು, ಆ.21 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಪಟ್ಟಕ್ಕಾಗಿ ಪೈಪೋಟಿ ಆರಂಭವಾಗಿದೆ. ಮೇಯರ್ ಕಟ್ಟೆ ಸತ್ಯನಾರಾಯಣ ಹಾಗೂ ಉಪ ಮೇಯರ್ ಇಂದಿರಾ ಅವರ ಆಡಳಿತಾವಧಿ ಸೆ. 4ರಂದು ಕೊನೆಗೊಳ್ಳಲಿದೆ.
ಪುಸ್ತುತ ಆಯ್ಕೆಯಾಗಿರುವ ಕೌನ್ಸಿಲ್ನ ಕೊನೆಯ ಅವಧಿ ಇದಾಗಿದ್ದು, 2015ರ ಏಪ್ರಿಲ್ನಲ್ಲಿ ಮತ್ತೆ ಪಾಲಿಕೆಗೆ ಚುನಾವಣೆ ನಡೆಯಲಿದೆ. ಆರು ತಿಂಗಳ ಅವಧಿಯ ಮೇಯರ್ ಮತ್ತು ಉಪ ಮೇಯರ್ ಪಟ್ಟ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಪಟ್ಟದ ಮೇಲೆ ಕಣ್ಣಿಟ್ಟಿರುವ ಅಭ್ಯರ್ಥಿಗಳು ತಮ್ಮ ಪ್ರಯತ್ನ ಆರಂಭಿಸಿದ್ದಾರೆ.

ಬಿಜೆಪಿಯ ಹಿರಿಯ ಪಾಲಿಕೆ ಸದಸ್ಯರು ತಮಗೆ ಅವಕಾಶ ನೀಡುವಂತೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಬಳಿ ಮನವಿ ಮಾಡಿದ್ದರೆ, ಕಳೆದ ಅವಧಿಯಲ್ಲೇ ತಮಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದ ಮೂಡಲಪಾಳ್ಯ ವಾರ್ಡ್ನ ಸದಸ್ಯೆ ಶಾಂತಕುಮಾರಿ ಅವರು ಮೇಯರ್ ಹುದ್ದೆಗೆ ತಮ್ಮನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. [ಬಿಬಿಎಂಪಿ ಚುನಾವಣೆ ಮೇಲೆ ಆಮ್ ಆದ್ಮಿ ಕಣ್ಣು]
ಮೇಯರ್ ಪಟ್ಟದ ಆಕಾಂಕ್ಷಿಗಳು : ಮೂಡಲಪಾಳ್ಯ ವಾರ್ಡ್ನ ಶಾಂತಕುಮಾರಿ, ಡಾ.ರಾಜ್ಕುಮಾರ್ ವಾರ್ಡ್ನ ಗಂಗಭೈರಯ್ಯ, ಜೆ.ಪಿ.ಪಾರ್ಕ್ನ ಬಿ.ಆರ್. ನಂಜುಂಡಪ್ಪ, ಬನಶಂಕರಿ ದೇವಸ್ಥಾನದ ಎ.ಎಚ್. ಬಸವರಾಜು, ವಿಜಯನಗರದ ಎಚ್.ರವೀಂದ್ರ ಮತ್ತು ಪಟ್ಟಾಭಿರಾಮನಗರದ ಸಿ.ಕೆ. ರಾಮಮೂರ್ತಿ ಅವರ ಹೆಸರುಗಳು ಮೇಯರ್ ಪಟ್ಟಕ್ಕೆ ಕೇಳಿಬರುತ್ತಿವೆ.
ಬೇರೆ ವಲಯಗಳಿಗೆ ನೀಡಿ : ಮೇಯರ್ ಪಟ್ಟಕ್ಕೆ ಪ್ರತಿ ಬಾರಿಯು ದಕ್ಷಿಣ ವಲಯದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಈ ಬಾರಿ ಬೇರೆ ವಲಯಗಳಿಗೆ ಆದ್ಯತೆ ನೀಡಬೇಕು ಎಂಬ ಮಾತು ಕೇಳಿಬರುತ್ತಿದೆ. ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಬಿಜೆಪಿ ನಾಯಕರು ಮೇಯರ್ ಆಯ್ಕೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಈ ಬಾರಿ ಮೇಯರ್ ಮತ್ತು ಉಪ ಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಾಗಿಟ್ಟಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಮೇಯರ್ ಪಟ್ಟ ಸಿಗದಿದ್ದರೂ ಉಪ ಮೇಯರ್ ಪಟ್ಟವಾದರೂ ದೊರಕಲಿ ಎಂದು ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಅಂತಿಮವಾಗಿ ಮೇಯರ್ ಗೌನು ತೊಡುವವರು ಯಾರು ಎಂಬುದು ಕುತೂಹಲ ಮೂಡಿಸಿದೆ.











Click it and Unblock the Notifications