ವಾಕಿಂಗ್ ಹೋದ ಸೈನಿಕ್ ಶಾಲೆ ಸ್ಟುಡೆಂಟ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ?
ಬೆಂಗಳೂರು, ಸೆ. 17: ವಿದ್ಯಾರ್ಥಿಗಳ ಮೇಲೆ ಓದಿನ ಒತ್ತಡ ಹಾಕಬಾರದು ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಸೈನಿಕ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ನಿವೃತ್ತ ಆರ್ಮಿ ಅಧಿಕಾರಿಯ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಉತ್ತರಖಂಡ ಮೂಲದ ಭಗತ್ ಸಿಂಗ್ ಮತ್ತು ಬಾಬ್ನಾ ದಂಪತಿಯ ಪುತ್ರ ರಾಹುಲ್ ಭಂಡಾರಿ (17) ಸಾವನ್ನಪ್ಪಿದ ಯುವಕ. ಸಂಬಂಧ ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ವಿದ್ಯಾರ್ಥಿಯ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ. ಪ್ರೀತಿ- ಪ್ರೇಮ ವಿಚಾರವಾಗಿ ಕೆಲವು ಮೊಬೈಲ್ ಸಂದೇಶಗಳು ಕಳುಹಿಸಿದ್ದು, ಆತ್ಮಹತ್ಯೆಯ ನಿಖರ ಕಾರಣ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಸದಾಶಿವನಗರದ ಸೈನಿಕ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ರಾಹುಲ್ ಭಂಡಾರಿ ನಡತೆಯಲ್ಲಿ ಬದಲಾವಣೆಯಾಗಿತ್ತು. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರಾಹುಲ್, ಬೆಳಗಿನ ಜಾವ ಎದ್ದು ಒಬ್ಬೊಂಟಿಯಾಗಿ ವಾಕ್ ಮಾಡುತ್ತಿದ್ದ. ಎಂದಿನಂತೆ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ವಾಕ್ ಬಂದಿದ್ದಾನೆ. ಬಂದವನು ವಾಪಸು ಮನೆಗೆ ಹೋಗಿಲ್ಲ. ಅನುಮಾನಗೊಂಡಿದ್ದ ಪೋಷಕರು ನಿರಂತರ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ.
ಮಾನಸಿಕ ಖಿನ್ನತೆ ಒಳಗಾಗಿದ್ದ ರಾಹುಲ್ ತನ್ನ ತಂದೆಗೆ ಸೇರಿದೆ ಎನ್ನಲಾದ ಪಿಸ್ತೂಲಿನಿಂದ ತಲೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಷ್ಟೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಿದಾಗ ಫುಟ್ಪಾತ್ನಲ್ಲಿ ರಾಹುಲ್ ಮೃತ ದೇಹ ಬಿದ್ದಿರುವುದು ಗೊತ್ತಾಗಿದೆ. ರಾಹುಲ್ ಮನೆಯಿಂದ ಮೊಬೈಲ್ನಲ್ಲಿ ಚಾಟ್ ಮಾಡಿಕೊಂಡು ವಾಕ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಗತ್ ಸಿಂಗ್ ಹಾಗೂ ಬಾಬ್ನಾ ದಂಪತಿಗೆ ಏಕೈಕ ಪುತ್ರನಾಗಿದ್ದ ರಾಹುಲ್ ಎಸ್ಎಸ್ಎಲ್ಸಿಯಲ್ಲಿ ಶೇ. 90 ರಷ್ಟು ಅಂಕ ಗಳಿಸಿದ್ದ. ಆರ್ಮಿ ಶಾಲೆಯಲ್ಲಿ ಪಿಯುಸಿಗೆ ದಾಖಲಿಸಲಾಗಿತ್ತು. ಈ ವರ್ಷ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂಬ ಸಂಗತಿ ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ 20 ವರ್ಷದಿಂದ ವಾಸವಾಗಿದ್ದ ಭಗತ್ ಸಿಂಗ್ ಆರ್. ಟಿ. ನಗರದ ಗಂಗಾ ಬೇಕರಿ ಸಮೀಪ ಮನೆ ಮಾಡಿಕೊಂಡಿದ್ದರು. ಮನೆಯಲ್ಲಿ ಓದುವಂತೆ ಯಾವುದೇ ಒತ್ತಡ ಹಾಕಿರಲಿಲ್ಲ. ಯಾವ ಕಾರಣಕ್ಕೆ ತನ್ನ ಪುತ್ರ ಹೀಗೆ ಮಾಡಿಕೊಂಡಿದ್ದಾನೋ ಗೊತ್ತಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ರಾತ್ರಿ ಊಟ ಮುಗಿಸಿ ಮನೆಯಲ್ಲಿಯೇ ಮಲಗಿದ್ದ. ನಾಲ್ಕು ಗಂಟೆ ವೇಳೆಯಲ್ಲಿ ತಾಯಿ ಮಲಗಿರುವಾಗ ಮನೆಯಿಂದ ಎದ್ದು ಹೊರ ಬಂದಿದ್ದಾನೆ. ಇದಾದ ಬಳಿಕ ಮಗ ವಾಪಸು ಬರಲಿಲ್ಲ ಎಂದು ಮೃತನ ತಾಯಿ ಕಣ್ಣೀರಿಟ್ಟಿದ್ದಾಳೆ.
ನಾನಾ ವಿಚಾರ ಬೆಳಕಿಗೆ: ಒಂದಡೆಗೆ ಬಾಲಕ ಐದು ನೂರು ರೂಪಾಯಿ ನೀಡುವಂತೆ ಕೇಳಿದ್ದ. ಕೊಡಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಹಬ್ಬಿತು. ಇದಾದ ಬಳಿಕ ಓದಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂಬ ವಿಚಾರ ಹೊರಗೆ ಬಿದ್ದಿದೆ. ಇದೀಗ ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಮೃತ ರಾಹುಲ್ ಭಂಡಾರಿ ತನ್ನ ಸ್ನೇಹಿತರ ಜತೆ ಮಾಡಿರುವ ಚಾಟ್ ಪರಿಶೀಲನೆ ಮಾಡಿದ್ದು, ಪ್ರೀತಿ ವಿಚಾರವಾಗಿ ಹೀಗೆ ಮಾಡಿಕೊಂಡನೇ ? ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಬೆಳಗಿನ ಜಾವ ಮನೆಯಿಂದ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತನಿಖೆ ನಡೆಸಿದ ಬಳಿಕ ಆತ್ಮಹತ್ಯೆಗೆ ಕಾರಣ ಗೊತ್ತಾಗಲಿದ್ದು, ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Recommended Video
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777