ಮನೆ-ಮನೆ ಪ್ರಚಾರ ಮಾಡಲ್ಲ, ಮತ ಮಾರಿಕೊಂಡವರು ಎಕ್ಕಡ ಸಮಾನ!
ಬೆಂಗಳೂರು, ಮೇ 24 : 'ನಾನು ಮನೆ-ಮನೆಗೆ ಬಂದು ಮತ ಕೇಳುವುದಿಲ್ಲ. ಯಾರು ದುಡ್ಡಿಗೆ ವೋಟು ಮಾರಿಕೊಳ್ಳವರೋ ಅವರು ನನ್ನ ಎಕ್ಕಡ ಸಮಾನ' ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹುಚ್ಚ ವೆಂಕಟ್ ಹೇಳಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಹುಚ್ಚ ವೆಂಕಟ್ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು. 'ಡ್ಯಾನ್ಸ್ ಮಾಡಿ, ತಮಟೆ ಹೊಡೆದು, ಬಣ್ಣ ಬಣ್ಣದ ಮಾತನಾಡಿ ವೋಟು ಹಾಕಿಸಿಕೊಳ್ಳುವುದು ನನಗೆ ಬೇಡ. ನಾನು ಮನೆ-ಮನೆಗೆ ಹೋಗಿ ಮತ ಕೇಳಲ್ಲ' ಎಂದರು.
'ಕ್ಷೇತ್ರದಲ್ಲಿ ಏನು ಮಾಡಬೇಕು, ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬೇಕು ಎಂಬ ಬಗ್ಗೆ ಯೋಚಿಸಿದ್ದೇನೆ. ನನಗೆ ಮತ ನೀಡಿ' ಎಂದು ಅವರು ಆರ್.ಆರ್.ನಗರ ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.

'ನಾನು ಸಿನಿಮಾದಿಂದ ಫೇಮಸ್ ಆಗಿಲ್ಲ, ಸಮಾಜ ಸೇವೆಯ ಮೂಲಕ ಫೇಮಸ್ ಆಗಿದ್ದೀನಿ. ನಿಜವಾದ ಅಭಿವೃದ್ಧಿ ಮಾಡುವವರು ಮತ ಹಾಕುವಂತೆ ಬೇಡಿಕೊಳ್ಳುವುದಿಲ್ಲ. ನಾನು ಸುಳ್ಳು ಆಶ್ವಾಸನೆಗಳನ್ನು ಜನರಿಗೆ ಕೊಡುವುದಿಲ್ಲ' ಎಂದು ಹುಚ್ಚ ವೆಂಕಟ್ ಹೇಳಿದರು.
ಲೋಕಸಭೆಗೆ ಸ್ಪರ್ಧೆ : 'ವಿಧಾನಸಭೆ ಚುನಾವಣೆ ಮಾತ್ರವಲ್ಲ. ಲೋಕಸಭೆ ಚುನಾವಣೆಗೂ ನಾನು ಸ್ಪರ್ಧಿಸುತ್ತೇನೆ. ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ. ಯಾರು ಚೆನ್ನಾಗಿ ಕೆಲಸ ಮಾಡುವರೋ ಅವರ ಪರವಾಗಿ ನಾನಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿಲ್ಲ ಅಂದರೆ ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ' ಎಂದರು.
ಮೇ 12ರಂದು ನಡೆಯಬೇಕಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಮೇ 28ರಂದು ಚುನಾವಣೆ ನಡೆಯಲಿದ್ದು, ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications