ಹೊಸ ವರ್ಷಾಚರಣೆಯಲ್ಲಿ ಅಸಭ್ಯವಾಗಿ ವರ್ತಿಸಿದವರ ಶೀಘ್ರ ಬಂಧನ
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರು, ಜನವರಿ 01: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ನಿನ್ನೆ ರಾತ್ರಿ ಕೆಲ ಕಿಡಿಗೇಡಿಗಳು ಯುವತಿಯರ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ, ಅಂತವರ ವಿರುದ್ದ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚಿಸುತ್ತೇನೆ ಎಂದರು.
ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಕಾಮುಕರ ಕೀಟಲೆ
ಮೊದ ಮೊದಲು ಇಷ್ಟೊಂದು ಯುವಜನರು ಎಂ.ಜಿ ರಸ್ತೆಯಲ್ಲಿ ಸೇರುತ್ತಿರಲಿಲ್ಲ, ಈಗ ಸಾವಿರಾರು ಯುವ ಸಮೂಹ ಬರುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೆ ದೊಡ್ಡ ಸಮಸ್ಯೆಯಾಗುತ್ತದೆ ಎಂದು ಹೇಳಿದರು.
ಬೆಂಗಳೂರು ನಗರ ಪೊಲೀಸರು ವಾರ ಪೂರ್ತಿ ಹಗಲು ರಾತ್ರಿಯೆನ್ನದೇ ಭದ್ರತೆ ಕೊಡುತ್ತಿದ್ದಾರೆ, ಇದನ್ನೂ ಮೀರಿ ಕೆಲವರು ದೌರ್ಜನ್ಯವೆಸಗುತ್ತಿದ್ದಾರೆ ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆ ಬದಲು ಪರ್ಯಾಯ ವ್ಯವಸ್ಥೆ ಮಾಡಲು ಯೋಚಿಸುತ್ತಿದ್ದೇವೆ. ಪ್ಯಾಲೆಸ್ ಗ್ರೌಂಡ್ ನಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಕೊಡಬಹುದು, ಆದರೆ ಅಲ್ಲಿ ಕೊಟ್ಟರೆ ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆಯಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನಕಪುರದ ಕಪಾಲಿಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಸ್ಥಗಿತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆರ.ಅಶೊಕ್, ಏಸು ಪ್ರತಿಮೆ ನಿರ್ಮಾಣವನ್ನು ಟ್ರಸ್ಟ್ ನವರೇ ಸ್ಥಗಿತಗೊಳಿಸಿರಬಹುದು ಎಂದರು.
ಕ್ರೈಸ್ತ ಪ್ರತಿಮೆಯನ್ನು ನಾನು ಪ್ರಬಲವಾಗಿ ವಿರೋಧಿಸುತ್ತೇನೆ: ಕಾಳಿಕಾ ಸ್ವಾಮಿ
ಪ್ರತಿಮೆ ನಿರ್ಮಿಸಲು ಸರ್ಕಾರಿ ಗೋಮಾಳ ಭೂಮಿ ಕೊಡಲಾಗಿದೆ, ಇದಕ್ಕಾಗಿ ಅನಧಿಕೃತವಾಗಿ ವಿದ್ಯುತ್ ಸಂಪರ್ಕ, ಬೋರ್ ವೆಲ್ ಕೊರೆಸಲಾಗಿದೆ. ಎರಡು ಕಿ.ಮೀ ರಸ್ತೆಯನ್ನೂ ನಿರ್ಮಿಸಲಾಗಿದೆ. ಇವೆಲ್ಲವೂ ಅನಧಿಕೃತವಾಗಿ ನಿರ್ಮಾಣಗೊಂಡಿವೆ ಎಂದಿದ್ದಾರೆ.
ಈ ಬಗ್ಗೆ ರಾಮನಗರ ಜಿಲ್ಲಾಧಿಕಾರಿ ಮತ್ತು ಕನಕಪುರ ತಹಶೀಲ್ದಾರರಿಂದ ವರದಿ ಕೇಳಿದ್ದೇವೆ. ನಿನ್ನೆ ಮೌಖಿಕವಾಗಿ ವರದಿ ಕೊಟ್ಟಿದ್ದಾರೆ, ವರದಿ ರೂಪದಲ್ಲಿ ಕೊಡಲು ತಿಳಿಸಿದ್ದೇನೆ. ವರದಿ ಬಂದ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.