ಪಿಯು ಗೊಂದಲ : ಕಡೆಗೂ ಎಚ್ಚೆತ್ತ ಕಿಮ್ಮನೆ ರತ್ನಾಕರ
ಬೆಂಗಳೂರು, ಮೇ. 21 : ದ್ವಿತೀಯ ಪಿಯು ಅಂಕಪಟ್ಟಿ, ಗ್ರೇಸ್ ಮಾರ್ಕ್ಸ್, ಮೌಲ್ಯಮಾಪನದಲ್ಲಿ ಹಿಂದೆಂದೂ ಕಾಣದಂಥ ಗೊಂದಲ ಸೃಷ್ಟಿಯಾಗಿದ್ದರೂ ಯಾವುದೇ ಹೇಳಿಕೆ ನೀಡದೆ ನುಣುಚಿಕೊಳ್ಳುತ್ತಿದ್ದ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವ ಕಡೆಗೂ ಪಿಯು ಮಂಡಳಿಯನ್ನು ಭೇಟಿಯಾಗಲಿದ್ದು, ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಪಿಯು ಅಂಕಪಟ್ಟಿ ಗೋಲ್ ಮಾಲ್ ವಿರುದ್ಧ ಪೋಷಕರ ಆಕ್ರೋಶ ಮುಗಿಲು ಮುಟ್ಟುತ್ತಿದ್ದಂತೆ ತೀರ್ಥಹಳ್ಳಿಯಲ್ಲಿ ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸುವವರಿದ್ದ ಕಿಮ್ಮನೆ ರತ್ನಾಕರ ಅವರು ಅಲ್ಲಿಂದ ಹೊರಟು ಶುಕ್ರವಾರ ಪಿಯು ಮಂಡಳಿಯಲ್ಲಿ ಅಥವಾ ತಮ್ಮ ಕಚೇರಿಯಲ್ಲಿ ವಿದ್ಯಾರ್ಥಿ, ಪೋಷಕರು, ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಅಂಕಪಟ್ಟಿಯ ಗೊಂದಲದಿಂದ ತಮಗೆ ಅನ್ಯಾಯವಾಗಿದೆ ಎಂದು ಅಂದುಕೊಂಡಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಪಿಯು ಮಂಡಳಿಯ ಮುಂದೆ ನ್ಯಾಯ ಕೇಳುತ್ತಿದ್ದಾರೆ, ಸತತ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪಿಯು ಮಂಡಳಿ ಕೂಡ ತಮ್ಮ ಸಹಾಯಕ್ಕೆ ಬರದಿದ್ದ ಕಾರಣ ವಿದ್ಯಾರ್ಥಿಗಳು ಮತ್ತು ಪೋಷಕರು ರೊಚ್ಚಿಗೆದ್ದಿದ್ದಾರೆ.
ಗಣಿತದಲ್ಲಿ ಕನಿಷ್ಠ 80 ಅಂಕ ನಿರೀಕ್ಷಿಸುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಕೇವಲ ಕನಿಷ್ಠ ಅಂಕ ಬಂದಿದೆ. ಹೀಗಾಗಲು ಸಾಧ್ಯವೇ ಇಲ್ಲ ಎಂಬುದು ಆತನ ಉವಾಚ. ಗ್ರೇಸ್ ಮಾರ್ಕ್ಸ್ ಕೂಡ ಸರಿಯಾಗಿ ನೀಡಿಲ್ಲ. ಅಲ್ಲದೆ, ಮರುಮೌಲ್ಯಮಾಪನಕ್ಕೆ ವಿಪರೀತ ದುಡ್ಡು ಕೀಳುತ್ತಿದ್ದಾರೆ. ಹೀಗಾದರೆ, ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿರುವ ನನ್ನಂಥ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬುದು ಆತನ ಪ್ರಶ್ನೆ.
ಬೇಡಿಕೆಗಳು ಹೀಗಿವೆ
* ದ್ವಿತೀಯ ಪಿಯು ಅಂಕಪಟ್ಟಿಯಲ್ಲಿ ಗೋಲ್ ಮಾಲ್ ನಡೆದಿದೆ.
* ಗ್ರೇಸ್ ಮಾರ್ಕ್ಸನ್ನು ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೀಡಬೇಕು.
* ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದವರಿಗೆ ಮೂರು ದಿನಗಳಲ್ಲಿ ಫೋಟೋ ಕಾಪಿ ನೀಡಬೇಕು.
* ಮರುಮೌಲ್ಯ ಮಾಪನ ಮುಗಿಯುವವರೆಗೆ ಸಿಇಟಿ ಪ್ರಕ್ರಿಯೆಯನ್ನು ಮುಂದೆ ಹಾಕಬೇಕು.
* ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು.
ಅಧಿಕಾರಿಗಳ ತಪ್ಪಿನಿಂದಾಗಿ ವಿದ್ಯಾರ್ಥಿಗಳ ಭವಿಷ್ಯವೇ ಕಗ್ಗತ್ತಲೆಯಲ್ಲಿದೆ. ನಮ್ಮ ಪ್ರಶ್ನೆಗಳಿಗೆ ಪಿಯು ಮಂಡಳಿಯೂ ಉತ್ತರ ನೀಡುತ್ತಿಲ್ಲ, ಶಿಕ್ಷಣ ಸಚಿವರೂ ಪರಿಹಾರ ಸೂಚಿಸುತ್ತಿಲ್ಲ. ಇದು ಹೀಗೇ ಮುಂದುವರಿದರೆ ಶಿಕ್ಷಣ ಸಚಿವರ ಕಪಾಳಕ್ಕೆ ಬಿಗಿಯುತ್ತೇನೆ ಎಂಬು ಪೋಷಕರೊಬ್ಬರು ಕೆಂಡಕಾರಿದ್ದಾರೆ.
ಅಧಿಕಾರಿಗಳ ತಪ್ಪಿನಿಂದಾಗಿ ವಿದ್ಯಾರ್ಥಿಗಳ ಭವಿಷ್ಯವೇ ಕಗ್ಗತ್ತಲೆಯಲ್ಲಿದೆ. ನಮ್ಮ ಪ್ರಶ್ನೆಗಳಿಗೆ ಪಿಯು ಮಂಡಳಿಯೂ ಉತ್ತರ ನೀಡುತ್ತಿಲ್ಲ, ಶಿಕ್ಷಣ ಸಚಿವರೂ ಪರಿಹಾರ ಸೂಚಿಸುತ್ತಿಲ್ಲ. ಇದು ಹೀಗೇ ಮುಂದುವರಿದರೆ ಶಿಕ್ಷಣ ಸಚಿವರ ಕಪಾಳಕ್ಕೆ ಬಿಗಿಯುತ್ತೇನೆ ಎಂಬು ಪೋಷಕರೊಬ್ಬರು ಕೆಂಡಕಾರಿದ್ದಾರೆ.












Click it and Unblock the Notifications