ನಾಳೆ 1:30ರೊಳಗೆ ಬಹುಮತ ಸಾಬೀತುಪಡಿಸಿ: ರಾಜ್ಯಪಾಲರಿಂದ ಖಡಕ್ ಸೂಚನೆ
ಬೆಂಗಳೂರು, ಜುಲೈ 18: ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡೆ ಎಂದುಕೊಂಡಿದ್ದ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಸಂಕಟ ಎದುರಾಗಿದೆ.
ಶುಕ್ರವಾರ ಮಧ್ಯಾಹ್ನ 1:30 ರ ಒಳಗೆ ಮಹುಮತ ಸಾಬೀತುಪಡಿಸಲೇಬೇಕೆಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲ ವಾಜುಬಾಯ್ ವಾಲಾ ಅವರು ನಿರ್ದೇಶನ ನೀಡಿದ್ದಾರೆ.
ರಾಜ್ಯಪಾಲರು ಪತ್ರ ಮುಖೇನ ಮುಖ್ಯಮಂತ್ರಿಗಳಿಗೆ ಸಂದೇಶ ಕಳಿಸಿದ್ದಾರೆಂದು ಜಲಸಂಪನ್ಮೂಲ ಸಚಿವ, ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಇಂದೇ ವಿಶ್ವಾಸ ಮತ ಯಾಚಿಸುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಸುಪ್ರೀಂ ಕೋರ್ಟ್ ಅತೃಪ್ತ ಶಾಸಕರ ಪ್ರಕರಣದಲ್ಲಿ ನೀಡಿದ ತೀರ್ಪಿನಿಂದಾಗಿ ಶಾಸಕಾಂಗ ಪಕ್ಷದ ನಾಯಕರ ವಿಪ್ ಜಾರಿಗೊಳಿಸುವ ಹಕ್ಕನ್ನು ಕಸಿದಂತಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ಸಿಗುವವರೆಗೂ ವಿಶ್ವಾಸ ಮತ ಯಾಚಿಸುವುದಿಲ್ಲ ಎಂದು ಮೈತ್ರಿ ಸರ್ಕಾರದ ನಾಯಕರು ಬೆಳಗ್ಗಿನಿಂದ ಸಂಜೆಯವರೆಗೂ ಸದನದಲ್ಲಿ ಸಮಯ ತಳ್ಳುತ್ತ ಬಂದರು. ನಂತರ ಸಂಜೆಯಾಗುತ್ತಲೇ, ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಬಿಜೆಪಿ ಅಪಹರಿಸಿ, ಮುಂಬೈಯ ಆಸ್ಪತ್ರೆಯಲ್ಲಿರಿಸಿದೆ ಎಂದು ದೂರಿ, ಗದ್ದಲ ಎಬ್ಬಿಸಿ, ಸದನ ನಾಳೆಗೆ ಮುಂದೂಡುವಂಥ ಸನ್ನಿವೇಶ ಸೃಷ್ಟಿಸಿದರು.
ಆದರೆ ತಾನು ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿರುವ ಬಿಜೆಪಿ ನಾಯಕರು ಇಂದು ಸದನದಲ್ಲೇ ಉಳಿದುಕೊಳ್ಳಲಿದ್ದಾರೆ.
ಆದರೆ ಇಂದೇ ವಿಶ್ವಾಸಮತ ಸಾಬೀತುಪಡಿಸಿ ಎಂದಿದ್ದ ರಾಜ್ಯಪಾಲರ ಸಂದೇಶಕ್ಕೂ ಬೆಲೆ ನೀಡದೆ, ಮತ್ತೊಮ್ಮೆ ರಾಜ್ಯಪಾಲರಿಂದ ಸೂಚನೆ ಬರುವಂತೆ ಮಾಡುವ ಮೂಲಕ ಮೈತ್ರಿ ಸರ್ಕಾರ ಮತ್ತಷ್ಟು ಮುಜುಗರ ಎದುರಿಸಿದೆ.












Click it and Unblock the Notifications